ಅಂಬಿಗರ ಚೌಡಯ್ಯರ ವಚನ ಇಂದಿಗೂ ಪ್ರಸ್ತುತ

127

Get real time updates directly on you device, subscribe now.


ತುಮಕೂರು: ನಿಜಶರಣ ಅಂಬಿಗರ ಚೌಡಯ್ಯ ಅವರು ವೃತ್ತಿಯಲ್ಲಿ ಅಂಬಿಗನಾದರೂ ಪ್ರವೃತ್ತಿಯಲ್ಲಿ ಅನುಭಾವಿಯಾಗಿದ್ದರು. ನೇರ ಮತ್ತು ನಿರ್ಭೀತ ನುಡಿಗಳಿಂದ ಕೂಡಿದ ಇವರ ವಚನಗಳು ಇಂದಿಗೂ ಪ್ರಸ್ತುತ ಎಂದು ಜಿಲ್ಲಾ ಗಂಗಾ ಮತಸ್ಥರ ಸಂಘದ ಗೌರವಾಧ್ಯಕ್ಷ ಕೆ.ಎಸ್.ದಿವಾಕರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಗಂಗಾಮತಸ್ಥರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮತನಾಡಿ, ಅಂಬಿಗರ ಚೌಡಯ್ಯ ಅವರು 12ನೇ ಶತಮಾನದಲ್ಲಿ ಪ್ರಸಿದ್ದ ವಚನಕಾರರಾಗಿದ್ದರು, ಶಿವಶರಣರಾಗಿದ್ದ ಇವರು ಅಂದಿನ ದಿನಗಳಲ್ಲಿನ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು ಎಂದು ತಿಳಿಸಿದರು.

ಗಂಗಾ ಮತಸ್ಥರ ಸಂಘದ ಉಪಾಧ್ಯಕ್ಷ ಹೆಚ್.ಎನ್.ಚಂದ್ರಯ್ಯ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ಅವರು ಗುತ್ತಲರ ಅರಸರ ಆಳ್ವಿಕೆ ಕಾಲದಲ್ಲಿ ಚೌಡದಾನಪುರದ ತುಂಗಭದ್ರ ನದಿ ತೀರದಲ್ಲಿ ದೋಣಿಯ ಮೂಲಕ ಜನರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದರು. ಅಂದಿನ ಶಿವಶರಣರಲ್ಲಿ ಬಹಳಷ್ಟು ವಿಶಿಷ್ಟವಾಗಿದ್ದ ಅಂಬಿಗರ ಚೌಡಯ್ಯ ಅವರು ಕಂಡದ್ದನ್ನು ಕಂಡ ಹಾಗೆ ಹೇಳುತ್ತಿದ್ದರು. ಅವರ ಮಾತುಗಳು ಸಂಪ್ರದಾಯಸ್ಥ ಮಡಿವಂತರಿಗೆ ಕರ್ಣ ಕಠೋರವಾಗಿದ್ದವು, ಮೃದು ಮಾತಿನ ಸಾತ್ವಿಕ ಗುಣಗಳಿಗೆ ಹೆಸರಾದ ಶರಣ ಸಮೂಹದಲ್ಲಿ ಚೌಡಯ್ಯನವರ ಮಾತುಗಳು ಬಹಳಷ್ಟು ತೀಕ್ಷ್ಣವಾಗಿದ್ದವು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ, 12ನೇ ಶತಮಾನವು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ಕಾಲ. ಈ ಕಾಲಘಟ್ಟದಲ್ಲಿ ಜೀವಿಸಿದ್ದ ಎಲ್ಲಾ ಶರಣರು ಸಾಮಾಜಿಕ ಏಳಿಗೆಗಾಗಿ ಅವಿರತವಾಗಿ ದುಡಿದವರು. ಸರ್ಕಾರ ಇಂತಹ ಸಾಮಾಜಿಕ ಪರಿವರ್ತನೆಕಾರರನ್ನು ಗುರುತಿಸಿ ಅವರ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಮಹನೀಯರ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗಂಗಾ ಮತಸ್ಥರ ಸಂಘದ ಕಾರ್ಯದರ್ಶಿ ಕೃಷ್ಣಪ್ಪ, ಗರುಡಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ.ಸುರೇಶ್ ಕುಮಾರ್, ರಾಜೇಶ್, ರಮೇಶ್, ದರ್ಶನ್ ಇತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!