ಕುಣಿಗಲ್: ಹುಲಿಯೂರು ದುರ್ಗ ಗ್ರಾಮ ಪಂಚಾಯಿತಿ ಹಾಗೂ ನಾಡ ಕಚೇರಿಯ ಅಸಮರ್ಪಕ ಕಾರ್ಯವೈಖರಿ ಖಂಡಿಸಿ ಹುಲಿಯೂರು ದುರ್ಗ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ನಾಗರಿಕರ ಹಿತರ ಕ್ಷಣಾ ವೇದಿಕೆಯಡಿಯಲ್ಲಿ ಪ್ರತಿಭಟನೆ ನಡೆಸಿ, ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಪಂ ಸದಸ್ಯ ಎಚ್.ಎನ್.ನಟರಾಜು ನೇತೃತ್ವದಲ್ಲಿ ಜಮಾವಣೆಗೊಂಡ ಗ್ರಾಮಸ್ಥರು, ಗ್ರಾಪಂ ಹಾಗೂ ನಾಡ ಕಚೇರಿ ಅಸಮರ್ಪಕ ಕಾರ್ಯವೈಖರಿ ಖಂಡಿಸಿ ಘೋಷಣೆ ಕೂಗಿದರು.
ಈ ವೇಳೆ ನಟರಾಜ್ ಮಾತನಾಡಿ, ಗ್ರಾಪಂನಲ್ಲಿ ನರೇಗ, 15ನೇ ಹಣಕಾಸು ಮತ್ತು ವರ್ಗ-1ರ ನಿಧಿಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇ-ಸ್ವತ್ತು ಮಾಡಲು ಆರು ತಿಂಗಳು ತೆಗೆದುಕೊಳ್ಳುತ್ತಿದ್ದು ಫಲಾನುಭವಿಗಳನ್ನು ಅನಗತ್ಯವಾಗಿ ಅಲೆದಾಡಿಸುತ್ತಿದ್ದಾರೆ. ಗ್ರಾಪಂಗೆ ನೈರ್ಮಲ್ಯ ನಿರ್ವಹಣೆ ಕಸ ವಿಲೆವಾರಿಗೆ ಜಾಗ ಗುರುತಿಸಿದ್ದರೂ ಯಾವುದೇ ಕ್ರಮವಾಗಿಲ್ಲ. ಗ್ರಾಪಂನಲ್ಲಿ ಮಾಸಿಕ ಸಭೆ ಸೇರಿದಂತೆ ಯಾವುದೇ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಇನ್ನು ನಾಡ ಕಚೇರಿ ಸಂಪೂರ್ಣ ದಲ್ಲಾಳಿಗಳ ಅಡ್ಡೆಯಾಗಿದ್ದು ಗ್ರಾಮಸ್ಥರ ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ.
ದಲ್ಲಾಳಿಗಳ ಮೂಲಕವೆ ಎಲ್ಲವೂ ನಡೆಯುತ್ತಿದೆ. ಬದುಕಿರುವವರಿಗೂ ಮೃತರ ದೃಡೀಕರಣ ಪತ್ರ ನೀಡಿ ಜನರು ಪರದಾಡುವಂತೆ ಮಾಡುತ್ತಿದ್ದಾರೆ. ಸ್ಮಶಾನಕ್ಕೆ ಸಮರ್ಪಕ ಜಾಗ ಗುರುತಿಸಿ ಹಸ್ತಾಂತರ ಮಾಡುತ್ತಿಲ್ಲ. ಮಿನಿ ವಿಧಾನಸೌಧಕ್ಕೆ ಜಾಗ ಗುರುತಿಸಲಾಗಿದ್ದದರೂ ಅಧಿಕಾರಿಗಳು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮೀನಾಮೇಷಾ ಎಣಿಸುತ್ತಿದ್ದು, ಇನ್ನಾದರೂ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಕಳುಹಿಸಿದರು. ಗ್ರಾಪಂ ಸದಸ್ಯರಾದ ಬಸವರಾಜು, ಗಂಗಮ್ಮ, ಗ್ರಾಮಸ್ಥರಾದ ದೊಡ್ಡ ಮಾದಪ್ಪ, ಪೂರ್ಣಚಂದ್ರ, ಪರಮೇಶ, ಸಿದ್ದಲಿಂಗಯ್ಯ, ವೈರಮುಡಿ, ವೆಂಕಟರಾಮು, ಕೃಷ್ಣ ಇತರರು ಇದ್ದರು.
Comments are closed.