ಬೆಂಗಳೂರು: ಭಾರತೀಯ ಚಿತ್ರರಂಗ ಕಂಡ ಹೆಸರಾಂತ ಗಾಯಕಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಮ್ (78) ನಿಧನರಾಗಿದ್ದಾರೆ. ಚೆನೈನ ನುಂಗಂಬಕ್ಕಂನಲ್ಲಿರುವ ನಿವಾಸದಲ್ಲಿ ಅವರು ನಿಧನರಾಗಿದ್ಧಾರೆ. ಅವರ ನಿಧನಕ್ಕೆ ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ. ಮೂಲಗಳ ಪ್ರಕಾರ, ಅವರ ಹಣೆಯ ಮೇಲೆ ಗಾಯವಾಗಿತ್ತು ಎನ್ನಲಾಗಿದೆ. ಈಚೆಗಷ್ಟೇ ಭಾರತದ ಮೂರನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಭೂಷಣವನ್ನು ವಾಣಿ ಜಯರಾಮ್ ಅವರಿಗೆ ಘೋಷಣೆ ಮಾಡಲಾಗಿತ್ತು.
ವಾಣಿ ಜಯರಾಮ್ ಅವರ ನಿಧನಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕೃಷ್ಣರೆಡ್ಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಕನ್ನಡ ಸೇರಿದಂತೆ ಇತರೆ 19 ಭಾಷೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಅವರು ಇಂದು ನಮ್ಮನ್ನು ಅಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಸಾಹಿತ್ಯಕ್ಕೆ ಭಾವ ತುಂಬಿ ಅವರು ಅನೇಕ ಅದ್ಭುತ ಗೀತೆಗಳನ್ನು ಹಾಡಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ ಎಂದಿದ್ದಾರೆ.
ವಾಣಿ ಜಯರಾಮ್ ಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ
ಗಾಯಕಿ ವಾಣಿ ಜಯರಾಮ್ ಅವರಿಗೆ ಗಾಯನಕ್ಕಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲೇ ‘ಅಪೂರ್ವ ರಾಗಂಗಳ್’ (1975) ಸಿನಿಮಾದಲ್ಲಿ ಹಾಡಿದ್ದಕ್ಕಾಗಿ ವಾಣಿ ಜಯರಾಮ್ ಅವರಿಗೆ ಮೊದಲ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಆನಂತರ 1980ರಲ್ಲಿ ತೆಲುಗಿನ ‘ಶಂಕರಾಭರಣಂ’ ಮತ್ತು 1991ರಲ್ಲಿ ‘ಸ್ವಾತಿ ಕಿರಣಂ’ ಸಿನಿಮಾಗಳ ಹಾಡುಗಳಿಗಾಗಿ ವಾಣಿ ಜಯರಾಂ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಅಂದಹಾಗೆ, ವಾಣಿ ಜಯರಾಂಗೆ ಹೆಸರು ತಂದು ಕೊಟ್ಟ ‘ಶಂಕರಾಭರಣಂ’, ‘ಸ್ವಾತಿ ಕಿರಣಂ’ ಸಿನಿಮಾಗಳನ್ನು ನಿರ್ದೇಶಿಸಿದವರು ಕೆ.ವಿಶ್ವನಾಥ್ ಅವರು. ಗುರುವಾರಷ್ಟೇ (ಫೆ.2) ವಿಶ್ವನಾಥ್ ಅವರು ನಿಧನರಾಗಿದ್ದರು. ಇದೀಗ ವಾಣಿ ಜಯರಾಂ ಅವರು ಕೂಡ ವಿಧಿವಶರಾಗಿದ್ದಾರೆ.
Comments are closed.