ತುರುವೇಕೆರೆ: ಸರಕಾರದ ಕಾರ್ಯಕ್ರಮದ ಹೆಲಿಕ್ಯಾಪ್ಟರ್ ಘಟಕದ ಉದ್ಘಾಟನೆ ನೆಪ ಮಾತ್ರ. ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ವ್ಯಂಗ್ಯವಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ, ನೆರೆ, ಬರದ ಸುಳಿಗೆ ರಾಜ್ಯದ ಜನತೆ ಸಿಲುಕಿದಾಗ ಮೋದಿ ರಾಜ್ಯಕ್ಕೆ ಬರಲಿಲ್ಲ. ಇದೀಗ ಸಾವಿರ ಸುಳ್ಳು ಹೇಳಿ ಪ್ರಚಾರ ಮಾಡಲು ಬರುತ್ತಿದ್ದಾರೆ. ಅಚ್ಚೇದಿನ್ ಬಗ್ಗೆ ಮಾತನಾಡುವ ಮೋದಿಯವರೇ ತುರುವೇಕೆರೆ ಕ್ಷೇತ್ರವನ್ನು ಸುತ್ತಾಡ ಬನ್ನಿ ನಿಮ್ಮ ಸರಕಾರದ ಅಚ್ಚೇದಿನ್ ಏನು ಎಂಬುದು ಅರ್ಥವಾಗುತ್ತದೆ. ಮೊದಲು ಹೆಚ್ಎಎಲ್ ಘಟಕ ಸ್ಥಾಪನೆಗೆ ಭೂಮಿ ನೀಡಿರುವ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿ ನಿಮ್ಮ ದೊಡ್ಡತನ ತೋರಿಸಿ ಎಂದಿದ್ದಾರೆ.
ಎಂಟಿಕೆ ಮಹಾನ್ ಸುಳ್ಳುಗಾರ!
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನಮ್ಮ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಈ.ಪರಮೇಶ್ವರ್ ನನಗೆ ಸಹಾಯ ಮಾಡುತ್ತಾರೆಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಎಂಟಿಕೆ ಬಯಿ ಬಿಟ್ಟರೇ ಸುಳ್ಳು ಹೇಳುತ್ತಾರೆಂಬುದು ಕ್ಷೇತ್ರದ ಜನತೆಗೆ ಗೊತ್ತು. ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ. ಎಂ.ಟಿ.ಕೃಷ್ಣಪ್ಪ ಅವರು ಯಾವ ಪಕ್ಷದಲ್ಲಿದ್ದಾರೆ ಎಂಬುದನ್ನು ಮೊದಲು ಅರಿಯಲಿ, ಮುಂದಿನ ದಿನಗಳಲ್ಲಿ ನಮ್ಮ ನಾಯಕರುಗಳ ಬಗ್ಗೆ ತುಟಿ ಬಿಚ್ಚಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ನಾಗೇಶ್, ಎಸ್.ಸಿ.ಘಟಕದ ಅಧ್ಯಕ್ಷ ನರಸಿಂಹಯ್ಯ ಮಂಜುನಾಥ್, ಜಿಪಂ ಮಾಜಿ ಸದಸ್ಯ ಹನುಮಂತಯ್ಯ ಮತ್ತಿತರಿದ್ದರು.
Comments are closed.