ವಿಧವಾ ಮಹಿಳೆಯರು ಆತ್ಮಸ್ಥೈರ್ಯದಿಂದ ಇರಲಿ: ಶಾಂತಲಾ

172

Get real time updates directly on you device, subscribe now.


ಮಧುಗಿರಿ: ಸ್ತ್ರೀಯರಿಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನವಿದ್ದರೂ ಮೌಢ್ಯತೆ ದೂರ ಆಗದಿರುವ ಬಗ್ಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಮತ್ತು ಗ್ರಾಹಕರ ಒಕ್ಕೂಟದ ವತಿಯಿಂದ ಕತ್ತಲಿನಿಂದ ಬೆಳಕಿನಡೆಗೆ ಘೋಷಣೆಯೊಂದಿಗೆ ವಿಧವೆಯರ ಒಕ್ಕೂಟದ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿಧವೆ ಸ್ತ್ರೀಯರು ಮಾನಸಿಕ ಧೈರ್ಯ ಕಳೆದುಕೊಳ್ಳಬಾರದು ನಿಂದನೆ ಕಟ್ಟುಪಾಡಿಗೆ ಒಳಗಾಗಬಾರದು. ಕೆ.ಎನ್.ರಾಜಣ್ಣ ಶಾಸಕರಾಗಿದ್ದ ಸಂದರ್ಭದಲ್ಲಿ ವಿಧವೆಯರಿಗೆ 4500 ಮನೆಗಳನ್ನು ಮಂಜೂರು ಮಾಡಿಸಿದ್ದರು. ಮುಂದಿನ ದಿನಗಳಲ್ಲಿ ಕೆ.ಎನ್.ರಾಜಣ್ಣ ಶಾಸಕರಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಧುಗಿರಿಯನ್ನು ಗುಡಿಸಲು ರಹಿತ ಕ್ಷೇತ್ರವನ್ನಾಗಿ ಮಾಡಲಿದ್ದಾರೆ. ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸಲು ಉಚಿತ ಪಾಸ್ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ. ಇದೇ ಅಲ್ಲದೆ ವಿಧವೆ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಡಿಸಿಸಿ ಬ್ಯಾಂಕ್ ವತಿಯಿಂದ ಕುರಿ ಸಾಕಾಣಿಕೆಗೆ ಪ್ರೋತ್ಸಾಹ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಸ್ತ್ರೀಯರು ತಿಳುವಳಿಕೆ ಉಳ್ಳವರಾದರೆ ಜೀವನ ಶೈಲಿ ಬದಲಾಯಿಸಿಕೊಳ್ಳಬಹುದು. ಹೆಣ್ಣು ಅಬಲೆಯಲ್ಲಾ ಸಬಲೇ ಎಂದ ಅವರು ನಿಮ್ಮಗಳ ಹೋರಾಟಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ. ಚುನಾವಣಾ ಸಂದರ್ಭದಲ್ಲಿ ಸ್ತ್ರೀಯರು ಆಸೆ ಆಮೀಷಗಳಿಗೆ ಬಲಿಯಾಗದೆ ನಿಮ್ಮ ಮತವನ್ನು ನಿಮ್ಮ ಪರವಾಗಿ ನಿಲ್ಲುವ ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವ ವ್ಯಕ್ತಿಗೆ ನೀಡಿ ಮತ್ತು ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡಿ ಎಂದರು.

ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಮತ್ತು ಗ್ರಾಹಕರ ರಕ್ಷಣಾ ದಳ ಸಂಸ್ಥಾಪಕ ಅಧ್ಯಕ್ಷ ಸಂಪಂಗಿ ಶ್ರೀನಿವಾಸಲು ಮಾತನಾಡಿ ವಿಧವೆಯರಿಗೆ ಪ್ರತಿ ತಿಂಗಳು ಕನಿಷ್ಠ 3000 ಪಿಂಚಣಿ ನೀಡಬೇಕು. ಪ್ರತ್ಯೇಕ ನಿಗಮ ಮಂಡಳಿ ರಚನೆಯಾಗಬೇಕು. ಆಕಸ್ಮಿಕವಾಗಿ ಗಂಡ ಸತ್ತರೆ ಕನಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು ಬಸ್ ಮತ್ತು ರೈಲು ಸಂಚಾರದಲ್ಲಿ ಉಚಿತ ಪಾಸ್ ವ್ಯವಸ್ಥೆ ಕಲ್ಪಿಸಬೇಕು. ಪ್ರತ್ಯೇಕ ನಿವೇಶನ ಮತ್ತು ಮನೆಯ ನಿರ್ಮಾಣದ ವೆಚ್ಚ ಭರಿಸಬೇಕು. ವಿಧವೆಯರ ಮಕ್ಕಳಿಗಾಗಿ ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಎನ್ಎಫ್ ಬಿಎಸ್ ಯೋಜನೆ ಅಡಿಯಲ್ಲಿ 20,000 ದಿಂದ ಲಕ್ಷಕ್ಕೆ ಏರಿಕೆ ಮಾಡಬೇಕು ಹಾಗೂ ಪ್ರತ್ಯೇಕ ರಕ್ಷಣೆಗೆ ಒತ್ತಾಯಿಸಿದರು.

ತಹಶೀಲ್ದಾರ್ ಸಿಗ್ಬತ್ ಉಲ್ಲಾ ಮಾತನಾಡಿ ವಿಧವಾ ಸ್ತ್ರೀಯರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು. ಹಂತ ಹಂತವಾಗಿ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು. ತಾಲೂಕ್ ಆಡಳಿತ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಸುವರ್ಣಮ್ಮ ಮಾತನಾಡಿ, ಈ ಸಮಾರಂಭ ಮಕ್ಕಳನ್ನು ಗುರುತಿಸುವ ವೇದಿಕೆಯಾಗಿದೆ ರಾಜ್ಯದಲ್ಲಿ ಸ್ತ್ರೀಯರಿಂದ ಮಾತ್ರ ಬದಲಾವಣೆ ಸಾಧ್ಯ. ಸ್ತ್ರೀಯ ಕೂಗು ಹವಾಲು ಕೇಳುವವರಿಗೆ ಸ್ತ್ರೀಯರಿಗೆ ಶಕ್ತಿ ತುಂಬುವರಿಗೆ ನಿಮ್ಮಗಳ ಸಹಕಾರ ಇರಬೇಕು. ಸರ್ಕಾರಗಳ ಬದಲಾವಣೆ ಸ್ತ್ರೀಯರಿಂದ ಮಾತ್ರ ಸಾಧ್ಯ ಎಂದರು.

ತಾಲೂಕು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಮತ್ತು ಗ್ರಾಹಕರ ರಕ್ಷಣಾ ದಳದ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಗೀತಾ, ಕಾನೂನು ಸಲಹೆಗಾರ ಅಂಜನ ಮೂರ್ತಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಜಮೀರ್, ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್ ರೆಡ್ಡಿ, ರಾಷ್ಟ್ರೀಯ ನಿರ್ದೇಶಕ ಮದುಕುಮಾರ್, ರಾಜ್ಯ ನಿರ್ದೇಶಕ ಡೇವಿಡ್ ಮೆನೇಜಸ್, ತುಮಕೂರು ಜಿಲ್ಲಾ ಅಧ್ಯಕ್ಷ ಮ್ಯಾಥ್ಯೂ ರೊನಾಲ್ಡ್, ಮಧುಗಿರಿ ತಾಲೂಕು ಕೋ ಆರ್ಡಿನೇಟರ್ ಮಹೇಶ್ ಕುಮಾರ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!