ಕರ್ತವ್ಯ ಲೋಪ- ಬೂದಗವಿ ಗ್ರಾಪಂ ಪಿಡಿಓ ಅಮಾನತು

169

Get real time updates directly on you device, subscribe now.


ಕೊರಟಗೆರೆ: ರಾಷ್ಟ್ರ ಧ್ವಜವನ್ನ ಭಾನುವಾರ ಹಾರಿಸುವ ಸರಕಾರದ ಆದೇಶವೇ ಇಲ್ವಂತೆ. ಬೂದಗವಿ ಗ್ರಾಪಂ ಪಿಡಿಓ ಮತ್ತು ಅಧ್ಯಕ್ಷರ ತಂಡಕ್ಕೆ ಈ ವಿಚಾರದ ಬಗ್ಗೆ ಮಾಹಿತಿಯೇ ಇಲ್ವಂತೆ, ಸ್ಥಳೀಯ ವಾಸಿ ಮತ್ತು ಪಿಡಿಓ ನಡುವಿನ ಸಂಭಾಷಣೆಯ ಧ್ವನಿ ಮತ್ತು ಗ್ರಾಪಂಯ ಫೋಟೊ ಪರಿಶೀಲನೆ ನಡೆಸಿರುವ ಜಿಪಂ ಸಿಇಓ ತಕ್ಷಣ ಪಿಡಿಓ ಅಮಾನತು ಮಾಡಿ ತನಿಖೆಗೆ ಆದೇಶ ಮಾಡಿರುವ ಘಟನೆ ನಡೆದಿದೆ.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಪಂ ಕಚೇರಿ ಆವರಣದ ಧ್ವಜಸ್ತಂಭದಲ್ಲಿ ಫೆ.12ರ ಭಾನುವಾರ ರಾಷ್ಟ್ರಧ್ವಜ ಹಾರಿಸದೇ ನಿರ್ಲಕ್ಷ ವಹಿಸಿದ್ದಾರೆ ಎಂಬ ದೂರಿನ ಅನ್ವಯ ಗ್ರಾಪಂ ಪಿಡಿಓ ಮೇಲಿನ ತನಿಖೆ ಬಾಕಿ ಉಳಿಸಿ ಅಮಾನತು ಮಾಡಿ ಆದೇಶ ಮಾಡಲಾಗಿದೆ. ರಾಷ್ಟ್ರ ಧ್ವಜದ ಬಗ್ಗೆ ನಿರ್ಲಕ್ಷ ವಹಿಸುವ ಅಧಿಕಾರಿಗಳಿಗೆ ಬಹು ಮುಖ್ಯ ಪಾಠವಾಗಿದೆ. ಬೂದಗವಿ ಗ್ರಾಪಂ ಆವರಣದ ಧ್ವಜ ಸ್ತಂಭದಲ್ಲಿ ಪ್ರತಿನಿತ್ಯರಾಷ್ಟ್ರ ಧ್ವಜ ಹಾರಿಸುವುದು ಮತ್ತು ಸಂಜೆ ಇಳಿಸುವುದು ಜವಾಬ್ದಾರಿ ಗ್ರಾಪಂ ಜವಾನ ಸಿದ್ದಗಂಗಪ್ಪನಿಗೆ ವಹಿಸಲಾಗಿದೆ. ಭಾನುವಾರ ರಜೆಯ ದಿನವು ರಾಷ್ಟ್ರ ಧ್ವಜ ಹಾರಿಸಬೇಕೆಂಬ ಕನಿಷ್ಠ ಜ್ಞಾನವು ಗ್ರಾಪಂಯ ಪಿಡಿಓ, ಅಧ್ಯಕ್ಷರು ಸೇರಿದಂತೆ ಸಿಬ್ಬಂದಿಗೂ ಇಲ್ಲವಾಗಿದೆ. ಗ್ರಾಪಂಯ ಪಿಡಿಓ ಜೊತೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸದಸ್ಯತ್ವ ರದ್ದುಪಡಿಸಿ ಸಿಬ್ಬಂದಿ ಮೇಲೆ ಕಟ್ಟುನಿಟ್ಟಿನಕ್ರಮ ಕೈಗೊಳ್ಳಬೇಕಿದೆ ಎಂಬುದು ಸ್ಥಳೀಯರು ಆಗ್ರಹ ಮಾಡಿದ್ದಾರೆ.

ಬೂದಗವಿ ಗ್ರಾಪಂ ಅಧ್ಯಕ್ಷೆ ವಿನೋಧ ಮತ್ತು ಅಧ್ಯಕ್ಷೆಯ ಗಂಡ ರಾಜಕೀಯ ದುರುದ್ದೇಶವೇ ನನ್ನ ಅಮಾನತಿಗೆ ಕಾರಣವಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಪಡಿಸುವುದೇ ಅಧ್ಯಕ್ಷೆಯ ಪತಿಯ ಪ್ರತಿನಿತ್ಯದ ಕಾಯಕ, 2 ವರ್ಷದಿಂದ ಪೊಲೀಸ್ ಠಾಣೆ ಮತ್ತು ಸರಕಾರಿ ಕಚೇರಿಗಳಿಗೆ ಅಲೆದು ಸಾಕಾಗಿದೆ. ರಾಷ್ಟ್ರಧ್ವಜದ ವಿಚಾರದಲ್ಲಿಯು ಅಧ್ಯಕ್ಷೆಯ ಹಸ್ತಾ ಕ್ಷೇಪವಿದ್ದು ಸಮಗ್ರ ತನಿಖೆ ನಡೆಯಬೇಕಿದೆ ಎಂದು ಬೂದಗವಿ ಗ್ರಾಪಂ ಪಿಡಿಓ ವಿಜಯಕುಮಾರಿ ತಿಳಿಸಿದ್ದಾರೆ.

ಕೊರಟಗೆರೆ ಇಓ ಡಾ.ದೊಡ್ಡಸಿದ್ದಯ್ಯ ಮಾತನಾಡಿ, ರಾಷ್ಟ್ರ ಧ್ವಜದ ವಿಚಾರದಲ್ಲಿ ಪಿಡಿಓ ನಿರ್ಲಕ್ಷದ ದೂರಿನ ಅನ್ವಯ ತನಿಖೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ. ಬೂದಗವಿ ಗ್ರಾಪಂ ಧ್ವಜ ಸ್ತಂಭದ ರಾಷ್ಟ್ರ ಧ್ವಜ ಅಳವಡಿಕೆಯ ಬಗ್ಗೆ ಗ್ರಾಪಂ ಪಿಡಿಓ, ಅಧ್ಯಕ್ಷರು ಸೇರಿದಂತೆ ಸಿಬ್ಬಂದಿಯ ಸಮಗ್ರತನಿಖೆ ನಡೆಯಲಿದೆ. ಬೂದಗವಿ ಗ್ರಾಪಂಗೆ ಈಗಾಗಲೇ ನೂತನ ಪಿಡಿಓ ವೀರಭದ್ರರಾಧ್ಯ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!