ಜಾನಪದ ನಮ್ಮ ದೇಶದ ಮೂಲ ಅಸ್ಮಿತೆ: ಜಗದೀಶ್

ನಶಿಸಿ ಹೋಗುತ್ತಿರುವ ಕಲಾ ಪ್ರಕಾರಗಳನ್ನು ಮುನ್ನೆಲೆಗೆ ತನ್ನಿ

86

Get real time updates directly on you device, subscribe now.


ತುಮಕೂರು: ತಳ ಸಮುದಾಯದ ನಶಿಸಿ ಹೋಗುತ್ತಿರುವ ಕಲಾ ಪ್ರಕಾರಗಳನ್ನು ಗುರುತಿಸಿ ಮುನ್ನೆಲೆಗೆ ತರಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಕಾರ್ಯಕ್ರಮದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಆಯೋಜಿಸಿದ್ದ ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ- 2023 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಶಿಸಿ ಹೋಗುತ್ತಿರುವ ತಳ ಸಮುದಾಯಗಳ ಕಲಾ ಪ್ರಕಾರಗಳನ್ನ ಪುನರ್ ಜೀವನಗೊಳಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದೆ. ಎಲ್ಲಾ ದೇಶಗಳನ್ನು ಅಲ್ಲಿನ ಸಂಸ್ಕೃತಿ ಮತ್ತು ಕಲೆಗಳ ಮೂಲಕ ಗುರುತಿಸಲಾಗುತ್ತದೆ. ಭಾರತದಲ್ಲಿ ಜಾನಪದ ಶೈಲಿಯ ಜೀವನ ಪದ್ಧತಿ, ಭಾಷಾ ಪದ್ಧತಿ, ವೈವಿಧ್ಯಮಯ ಆಹಾರ ಪದ್ಧತಿ, ವಿಭಿನ್ನವಾದ ಉಡುಗೆ ತೊಡುಗೆ ಕಾಣಬಹುದು. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವಿಭಿನ್ನವಾದ ಸಂಸ್ಕೃತಿ ಅಡಗಿರುತ್ತದೆ. ಆದರೆ ಎಲ್ಲರೂ ಆಚರಿಸುವುದು ಕೂಡಾ ಜಾನಪದ ಸಂಸ್ಕೃತಿಯಾಗಿದೆ ಎಂದರು.

ತಳ ಸಮುದಾಯಗಳಲ್ಲಿ, ಜಾನಪದದ ವಿಶಿಷ್ಟ ವಿಭಿನ್ನವಾದ ಕಲೆಗಳನ್ನು ವಾದ್ಯಗಳ ಮೂಲಕ ನುಡಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಹಾಗೂ ಅವರ ಮನಸ್ಸನ್ನು ಬದಲಾವಣೆ ಮಾಡುವ ಕೆಲಸ ಮಾಡಲಾಗುತ್ತದೆ. ಪ್ರಸ್ತುತ ದಿನಗಳ ಸಿನಿಮಾದಲ್ಲಿ ಬರುವ ಸಾಹಿತ್ಯದಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಆದರೆ ಜನಪದ ಸಾಹಿತ್ಯದ 5 ನಿಮಿಷ ಹಾಡಿನಲ್ಲಿ ವ್ಯಕ್ತಿಯ ಜೀವನದ ಬದಲಾವಣೆ ಕುರಿತು ಹೇಳಲಾಗುತ್ತದೆ. ಈ ದೇಶದ ಮೂಲ ಆಸ್ಮಿತೆ ಎಂದರೆ ಅದು ಜಾನಪದ ಎಂದರು.

ಆಧುನಿಕ ದಿನಗಳಲ್ಲಿ ತಳಸಮುದಾಯದ ಕಲೆಗಳು ನಶಿಸಿ ಹೋಗುತ್ತಿರುವ ಪರಿಣಾಮ ಅವುಗಳನ್ನು ಮತ್ತೆ ಮುನ್ನೆಲೆಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರವು ಹಿಂದಿನ ವರ್ಷದ ಬಜೆಟ್ನಲ್ಲಿ ಈ ಕಾರ್ಯಕ್ರಮ ಘೋಷಣೆ ಮಾಡಿತ್ತು. ಪ್ರತಿ ಜಿಲ್ಲೆಯಿಂದ 10ಜನರ ತಂಡದ 5 ಕಲಾ ಪ್ರಕಾರ ಗುರುತಿಸಿ ನಶಿಸಿ ಹೋದಂತಹ ಕಲೆಗಳ ಕುರಿತು ತರಬೇತಿ ನೀಡಲಾಗಿದೆ. ಪ್ರತಿ ಜಿಲ್ಲೆಯಿಂದ 2 ತಂಡಗಳನ್ನು ರಾಜ್ಯಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಪಾಪನ ಹಳ್ಳಿ ಮುನಿವೆಂಕಟಪ್ಪ ಮಾತನಾಡುವುದಕ್ಕಿಂತ ಕಲೆಯನ್ನು ನಿಮ್ಮ ಮುಂದೆ ಪ್ರದರ್ಶಿಸುತ್ತೇನೆ ಎಂದು ಹೇಳಿ ತಮ್ಮ ತಮಟೆ ಕಲೆ ಪ್ರದರ್ಶಿಸಿದರು.
ಕನ್ನಡ ಮತ್ತು ಸಂಸ್ಕೃತಿಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಮಾತನಾಡಿ, ಮನುಷ್ಯನ ನಾಗರಿಕತೆಯ ಜೊತೆಗೆ ಸಂಸ್ಕೃತಿಯು ಕೂಡಾ ಬೆಳೆದುಕೊಂಡು ಬಂದಿದೆ. ಆಧುನಿಕತೆ ಬೆಳೆದಂತೆ ಕಲೆಗಳು ಕಣ್ಮರೆಯಾಗುತ್ತಿವೆ, ಶ್ರೀಮಂತ ಪರಂಪರೆ ಹೊಂದಿರುವ ಕಲೆ ಉಳಿಸುವುದಕ್ಕಾಗಿ ತರಬೇತಿ ಪಡೆದು ಕಲಾವಿದರು ಕಲೆ ಮುಂದುವೆರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ನಿದೇರ್ಶಕ ಡಿ.ಎಂ.ರವಿಕುಮಾರ್, ಕೆಂಕೆರೆ ಮಲ್ಲಿಕಾರ್ಜುನ, ಬೆಂಗಳೂರು ವಿಭಾಗ ಜಂಟಿ ನಿದೇರ್ಶಕ ಅಶೋಕ್ ಎನ್.ಛಲವಾದಿ, ಕಲಾಶ್ರೀ ಡಾ.ಲಕ್ಷ್ಮಣ್ದಾಸ್, ಶಿವಕುಮಾರ್ ಸಾಕೇಲ್, ಎ.ಆರ್.ಪುಟ್ಟಸ್ವಾಮಿ ಇದ್ದರು.

Get real time updates directly on you device, subscribe now.

Comments are closed.

error: Content is protected !!