ಜೆಡಿಎಸ್ ಗೆ ಸೇರ್ಪಡೆಗೊಂಡ ಬಿಜೆಪಿ ನಾಯಕರು

127

Get real time updates directly on you device, subscribe now.


ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಪಕ್ಷಾಂತರದ ಪರ್ವ ಪ್ರಾರಂಭಗೊಂಡಿದ್ದು, ಒಂದೇ ದಿನ 500ಕ್ಕೂ ಅಧಿಕ ಮಂದಿ ಬಿಜೆಪಿ ನಾಯಕರು ಶಾಸಕ ಡಿ.ಸಿ.ಗೌರಿಶಂಕರ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

ತುಮಕೂರು ತಾಲ್ಲೂಕು ನರುಗನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೃಹತ್ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸುಮಾರು 500ಕ್ಕೂ ಅಧಿಕ ಮಂದಿ ವಿವಿಧ ಜನಾಂಗಗಳ ಬಿಜೆಪಿ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಹನುಮಂತಯ್ಯ, ಮಹಾಲಿಂಗಪ್ಪ, ನರಸೇಗೌಡ, ಶ್ರೀನಿವಾಸ್, ಜನಾರ್ಧನ್, ಮೀಸೆ ರಂಗನಾಥ್ ಸೇರಿದಂತೆ ವಿಎಸ್ಎಸ್ಎನ್ ಸದಸ್ಯರು, ಗ್ರಾಪಂ ಹಾಲಿ ಸದಸ್ಯರು, ಮಾಜಿ ಸದಸ್ಯರು ಹಾಗೂ ಭಾಜಪ ಮುಖಂಡರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಮಲ ಪಕ್ಷ ತೊರೆದು ತೆನೆಹೊತ್ತ ರೈತ ಮಹಿಳೆಯ ಕೈ ಹಿಡಿದರು. ಈ ವೇಳೆ ಪಕ್ಷ ಸೇರ್ಪಡೆಗೊಂಡ ಮುಖಂಡರನ್ನು ಜೆಡಿಎಸ್ ಬಾವುಟ ನೀಡಿ ಶಾಸಕ ಗೌರಿಶಂಕರ್ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆಯಾಗಿದ್ದು, ಇದನ್ನು ಮೆಚ್ಚಿ ಈಗಾಗಲೇ ಸಾವಿರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಕೈ ಬಲಪಡಿಸಲು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಈಗ ಸಹ 500ಕ್ಕೂ ಅಧಿಕ ಮಂದಿ ಜೆಡಿಎಸ್ ಸೇರ್ಪಡೆಗೊಂಡಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದರು.

ಕೆಲವರು ತಮ್ಮ ಪಕ್ಷ ಬಿಟ್ಟು ಮೂರು ವರ್ಷ ಕಳೆದಿದ್ದಿದ್ದು ಅವರನ್ನು ಮಾಜಿ ಶಾಸಕರು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು ಪಕ್ಷದ ಶಾಲು ಹಾಕಿಸಿ ದೊಡ್ಡದಾಗಿ ಪಕ್ಷ ಸೇರಿದ್ದಾರೆ ಎಂದು ಬಿಂಬಿಸಿದ್ದಾರೆ. ಆದರೆ ವಾಸ್ತವಿಕವಾಗಿ ಇಬ್ಬರು ಮೂವರು ಮುಖಂಡರನ್ನು ಹೊರತು ಪಡಿಸಿದರೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡ ಮುಖಂಡರು ಜೆಡಿಎಸ್ ಬಿಟ್ಟು ಈಗಾಗಲೇ ಮೂರು ವರ್ಷ ಕಳೆದಿವೆ. ಅವರು ಯಾರೂ ಸಹ ತಮ್ಮ ಸಂಪರ್ಕದಲ್ಲಿ ಇರುವವರಲ್ಲ. ಮಾಜಿ ಶಾಸಕರಿಗೆ ಅವರದ್ದೇ ಪಕ್ಷದ ಮುಖಂಡರಿಗೆ ಶಾಲು ಹೊದಿಸಿ ಫೋಟೋ ಹಾಕಿಕೊಳ್ಳುವ ಹಾಗೂ ವೈರಲ್ ಮಾಡುವ ಪ್ರವೃತ್ತಿಯಿದೆ. ಅದನ್ನು ಅವರು ಬಿಡಬೇಕು. ಮುಖ್ಯಮಂತ್ರಿಗಳಿಗೆ ಈ ವಿಷಯ ತಿಳಿದಿಲ್ಲ. ಅಲ್ಲಿಯೂ ಮಾಜಿ ಶಾಸಕರು ಮುಖ್ಯಮಂತ್ರಿಗಳಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ.

ನಾನು ಆ ರೀತಿ ಮಾಡುವುದಾದರೇ ದಿನಕ್ಕೆ ಸಾವಿರ ಸಾವಿರ ಮಂದಿಯನ್ನು ಸೇರಿಸಿ ಫೋಟೊ ಹಾಕಬಹುದು. ಆದರೆ ನಾನು ವಾಸ್ತವಿಕತೆಯನ್ನು ಜನರ ಮುಂದಿಟ್ಟಿದ್ದೇನೆ. ನಾನು ಮಾಡಿರುವ ಕೆಲಸಗಳನ್ನು ಮತದಾರರು ಗಮನಿಸಿದ್ದಾರೆ, ಖಂಡಿತಾ ಅವರು ತಮಗೆ ಈ ಬಾರಿಯ ಚುನಾವಣೆಯಲ್ಲಿ ಆಶೀರ್ವದಿಸಿತ್ತಾರೆ ಎಂದರು.

ಕ್ಷೇತ್ರದಲ್ಲಿ ಮಾಜಿ ಶಾಸಕರು ಮಾಡಿರುವ ಕೆಲಸ ಏನೆಂಬುದು ಸಾಮಾನ್ಯ ಜನರಿಗೂ ಗೊತ್ತು, ಅವರು ಮತ್ತೆ ಅಧಿಕಾರಕ್ಕೆ ಬಂದರೆ ಪಂಚಾಯ್ತಿಗೊಂದು ಪೊಲೀಸ್ ಠಾಣೆ ತಂದು ಜನಸಾಮಾನ್ಯರ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದು ಕರೆ ನೀಡಿದರು.

ಈ ವೇಳೆ ಗ್ರಾಮಾಂತರ ಕ್ಷೇತ್ರದ ಹಿರಿಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!