ತುಮಕೂರು: ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಅತ್ಯಂತ ಉಪಯುಕ್ತ ಹಾಗೂ ಬೇಡಿಕೆಯ ವಿಷಯವಾಗಿರುವ ಸಮಾಜ ಕಾರ್ಯ ದೇಶದ ಬದಲಾವಣೆಗೆ ಭದ್ರ ಬೂನಾದಿ, ಸೇವಾ ಮನೋಭಾವವೇ ಮುಖ್ಯ ಗುರಿಯಾದಾಗ ನಮ್ಮಲ್ಲಿರುವ ಕೆಡುಕುಗಳ ಶಕ್ತಿ ಕಡಿಮೆಯಾಗಿ, ಸಕಾರಾತ್ಮಕ ಅಂಶಗಳಷ್ಟೇ ಸಾಧನೆಗೆ ಪೂರಕವಾಗಲಿದೆ ಎಂದು ಕೇಂದ್ರಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಇಂಡಿಯನ್ ಸೊಸೈಟಿ ಆಫ್ ಪ್ರೊಫೆಷನಲ್ ಸೋಷಿಯಲ್ ವರ್ಕ್ ನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಣದಲ್ಲಿ ಸಮಾಜ ಕಾರ್ಯ ವಿಷಯ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಾನ ಶಿಕ್ಷಣ ಉತ್ತೇಜಿಸುವಲ್ಲಿ ಸಮಾಜ ಕಾರ್ಯದ ನಿರ್ಣಾಯಕ ಪಾತ್ರವನ್ನು ಅನ್ವೇಷಿಸಲು ಈ ಸಮ್ಮೇಳನ ಒಂದು ಅನನ್ಯ ಅವಕಾಶವಾಗಿದೆ ಎಂದು ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಸಮ್ಮೇಳನಕ್ಕೆ ಆಗಮಿಸಿರುವ ಪ್ರತಿನಿಧಿಗಳು ತುಮಕೂರು ವಿವಿಯಿಂದ ಉತ್ತಮ ಸಂದೇಶ ಕೊಂಡೊಯ್ಯಿರಿ, ಸ್ತ್ರೀಯರು ಭಾರತದ ಶಕ್ತಿ ಕೇಂದ್ರ, ಸಮಾಜ ಕಾರ್ಯವು ಲೈಂಗಿಕ ಅಸಮಾನತೆ ಹೋಗಲಾಡಿಸಬೇಕು ಎಂದರು.
ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಮೂರು ದಿನಗಳ ಈ ಸಮ್ಮೇಳನ ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಜ್ಞಾನ ಸಂಪಾದನೆ ಹಾಗೂ ವ್ಯಕ್ತಿತ್ವ ವರ್ಧನೆ ಮಾಡಿಕೊಳ್ಳಬೇಕು ಎಂದರು.
ದಿಕ್ಸೂಚಿ ಭಾಷಣ ಮಾಡಿದ ಮುಂಬೈನ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಮುರಳಿ ದೇಸಾಯಿ, ಸಮಾಜಕ್ಕೆ ಶಿಕ್ಷಣ ನೀಡುವುದು ಸಮಾಜ ಕಾರ್ಯದ ಜವಾಬ್ದಾರಿ ಆಗಿರುತ್ತದೆ. ಈ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಪರಶುರಾಮ.ಕೆ.ಜಿ, ಈ ಸಮ್ಮೇಳನದಲ್ಲಿ ರಾಷ್ಟ್ರದ ವಿವಿಧ ಭಾಗಗಳ 1200 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಮತ್ತು 174 ಸಂಶೋಧಕರು ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸುತ್ತಿರುವುದು ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ಜಮ್, ನಿಮ್ಹಾನ್ಸ್ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಐ.ಎ.ಶರೀಫ್, ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರಮೇಶ್.ಬಿ, ಪ್ರೊ.ಜನಾರ್ದನ್.ಎನ್. ಭಾಗವಹಿಸಿದ್ದರು.
Comments are closed.