ಆಟೋ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಲು ಕ್ರಮ: ಡೀಸಿ

103

Get real time updates directly on you device, subscribe now.


ತುಮಕೂರು: ನಗರದಲ್ಲಿ ರಹದಾರಿ ಹೊಂದಿರುವ ಆಟೋ ರಿಕ್ಷಾಗಳನ್ನು ನಿಲುಗಡೆ ಮಾಡಲು ಅನುವಾಗುವಂತೆ ಆಟೋ ನಿಲ್ದಾಣಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಶುಕ್ರವಾರ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಗರದಲ್ಲಿರುವ ಆಟೋ ಸಂಖ್ಯೆಗಳಿಗನುಗುಣವಾಗಿ ನಿಲ್ದಾಣಗಳಿಲ್ಲದೆ ಹಾಗೂ ಆಟೋ ನಿಲುಗಡೆ ಮಾಡಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದೆ ಸಂಚಾರಿ ನಿಯಮ ಉಲ್ಲಂಘನೆಯಡಿ ಆಟೋ ಚಾಲಕರು ಪ್ರತಿ ದಿನ ದಂಡ ಕಟ್ಟುತ್ತಿದ್ದಾರೆ. ಇದರಿಂದ ಸಾಮಾನ್ಯ ಆಟೋ ಚಾಲಕರ ಕುಟುಂಬಗಳು ಬದುಕುವುದು ದುಸ್ತರವಾಗಿದೆ ಎಂದು ವಿವಿಧ ಆಟೋ ಚಾಲಕರ ಸಂಘಗಳು ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಆಟೋ ನಿಲ್ದಾಣ ನಿರ್ಮಾಣಕ್ಕೆ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದೆಂದರು.

ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೊಸದಾಗಿ ಆಟೋರಿಕ್ಷಾ ರಹದಾರಿಗಳನ್ನು ನಿಲ್ಲಿಸಲು ಆಟೋ ಚಾಲಕರ ಸಂಘ ಸಲ್ಲಿಸಿದ ಮನವಿಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಆಟೋರಿಕ್ಷಾ ಸಂಖ್ಯೆಯ ಸಮೀಕ್ಷೆಗೆ ಕ್ರಮವಹಿಸಲಾಗುವುದು. ಹೊಸದಾಗಿ ಆಟೋ ರಿಕ್ಷಾಗಳಿಗೆ ನೀಡುವ ರಹದಾರಿಗಳನ್ನು ನಿಲ್ಲಿಸುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಜೂನ್ ಮಾಹೆಯೊಳಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ 15 ವರ್ಷ ಮುಕ್ತಾಯಗೊಂಡ ಆಟೋಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ, ಶಿರಾ ತಾಲ್ಲೂಕು ವ್ಯಾಪ್ತಿಯ ಆಟೋರಿಕ್ಷಾ ರಹದಾರಿ ನವೀಕರಣ ಮಾಡಲು ತುಮಕೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿಯೇ ವ್ಯವಸ್ಥೆ ಒದಗಿಸುವ ಸೇರಿದಂತೆ ಹಲವಾರು ಸಮಸ್ಯೆ ಬಗೆಹರಿಸುವಂತೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಪ್ರಾಧಿಕಾರದ ಸಭೆಯ ಮುಂದಿಟ್ಟರು.

ಇದಕ್ಕೂ ಮುನ್ನ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಖಾಸಗಿ ಬಸ್ ಮಾಲೀಕರ ಸಂಘಗಳ ಪದಾಧಿಕಾರಿಗಳಿಂದ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕೆಎಸ್ಆರ್ಟಿಸಿ ನಿಗಮವು ವಿವಿಧ ಖಾಸಗಿ ಬಸ್ಗಳಿಗೆ ಮಾದರಿಯಾಗಿ ಸೇವೆ ಒದಗಿಸಬೇಕು ಎಂದರಲ್ಲದೆ ನಿಗಮ ಹಾಗೂ ಖಾಸಗಿ ಬಸ್ ಮಾಲೀಕರು ನಷ್ಟ ಹೊಂದದಂತೆ ವೇಳಾಪಟ್ಟಿ ನಿಗದಿಪಡಿಸಿ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಹೆಚ್ಚು ಜನ ಪ್ರಯಾಣಿಸುವ ಸಮಯದಲ್ಲಿ ಸಾರಿಗೆ ಸೌಲಭ್ಯ ಒದಗಿಸಬೇಕು. ಬಸ್ ಸಂಚಾರದ ಸಮಯ ನಿಗದಿಪಡಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಸಭೆ ನಡೆಸಿ 15 ದಿನಗಳೊಳಗಾಗಿ ತಮಗೆ ವರದಿ ಸಲ್ಲಿಸಿದ್ದಲ್ಲಿ ಪರಿಶೀಲಿಸಿ ಆದೇಶ ನೀಡಲಾಗುವುದು. ಪ್ರಸ್ತುತ ಶಿರಾ- ಚಿಕ್ಕನಾಯಕನಹಳ್ಳಿ, ತುಮಕೂರು- ಪಾವಗಡ ಸೇರಿದಂತೆ ಜಿಲ್ಲೆಯ 5 ಕಡೆ ನಿಗಮ ಹಾಗೂ ಖಾಸಗಿ ಬಸ್ ಸಂಚಾರ ಸಮಯ ಏಕವಾಗಿರುವುದರಿಂದ ಸಮಸ್ಯೆ ಎದುರಾಗಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಕೀಲರು, ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!