ತಿಪಟೂರು: ಪಂಚರತ್ನ ರಥಯಾತ್ರೆ ಯಾವುದೇ ಧರ್ಮ ಜಾತಿಗೆ ಸೀಮಿತವಲ್ಲ. ನಾಡಿನ 6 ಕೋಟಿ ಜನಸಂಖ್ಯೆಯ ದೀನ ದಲಿತರು ಸಾಮಾನ್ಯ ವರ್ಗದವರು ರೈತರು ಮತ್ತು ನಿರುದ್ಯೋಗ ಯುವಕ ಯುವತಿಯರ ಆಶಾಕಿರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕಲ್ಪತರು ನಾಡು ತಿಪಟೂರಿಗೆ ಮೊದಲ ಬಾರಿಗೆ ಆಗಮಿಸಿದ ಜಾತ್ಯತೀತ ಜನತಾದಳದ ಪಂಚರತ್ನ ರಥಯಾತ್ರೆಗೆ ತಿಪಟೂರಿನ ಬಿದರೇಗುಡಿ ಗ್ರಾಮದೇವತೆ ಬಿದರಾಂಬಿಕಾ ದೇವಸ್ಥಾನದಿಂದ ಚಾಲನೆ ನೀಡಿ ಮಾತನಾಡಿ, ಮಹಿಳೆಯರು, ದಿನ ದುರ್ಬಲರು ಪ್ರತಿದಿನ ನನ್ನ ಮನೆಗೆ ಬಂದು ತಮ್ಮ ಕಷ್ಟ ಸುಖ ಹೇಳಿಕೊಳ್ಳುವುದನ್ನು ನೋಡಿ ರಾಜ್ಯದ ಜನರಿಗೆ ಕೈಲಾದ ಸಹಾಯ ನೀಡಲು ಉದ್ದೇಶಿಸಿ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾದರೆ ಜನಸಾಮಾನ್ಯರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದರು.
ಪಂಚರತ್ನ ಯೋಜನೆಗೆ ಸುಮಾರು 2 ಕೋಟಿ 50 ಲಕ್ಷ ಕೋಟಿ ಸರ್ಕಾರಕ್ಕೆ ಖರ್ಚು ಬರಲಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ, ಉತ್ತಮ ಬೋಧಕರನ್ನು ನೇಮಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಮಾಧ್ಯಮ ಬೋಧಿಸಿ ರಾಜ್ಯದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುವುದು. ಪ್ರತಿ ಗ್ರಾಮ ಪಂಚಾಯಿತಿಗೆ 30 ಸುಸಜ್ಜಿತ ಹಾಸಿಗೆಯುಳ್ಳ 5 ಜನ ಮಹಿಳಾ ಶುಶ್ರೂಷಕಿಯರು ಮತ್ತು ಮೂವರು ತಜ್ಞ ವೈದ್ಯರು ಗ್ರಾಮೀಣ ಭಾಗದ ಜನರ ಸೇವೆಗೆ ನೇಮಿಸಲಾಗುವುದು. ರೈತರ ಹೈನುಗಾರಿಕೆ ಅಭಿವೃದ್ಧಿಪಡಿಸಲು ಪ್ರತಿ ಲೀಟರ್ ಹಾಲಿಗೆ 8 ರೂಪಾಯಿ ಪ್ರೋತ್ಸಾಹ ಧನ ನೀಡುತ್ತೇವೆ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದಾಗ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿ ರೈತರ ಕಷ್ಟಕ್ಕೆ ಧಾವಿಸಿದ್ದೇನೆ. ಮುಂದೆಯೂ ಒಂದು ಎಕರೆ ಜಮೀನು ಉಳ್ಳ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಪಡೆಯಲು 10 ಎಕರೆ ಹೊಂದಿರುವ ರೈತರಿಗೆ ಎಕರೆಗೆ 10 ಸಾವಿರ ಹಣ ನೀಡುತ್ತೇವೆ. ನಾಡಿನ ನಿರ್ಗತಿಕರಿಗೆ ಮನೆ ಕಟ್ಟಿಕೊಡಲು, ಸುಸಜ್ಜಿತ ಬಡಾವಣೆ ನಿರ್ಮಿಸಿ ಪ್ರತಿಯೊಬ್ಬರಿಗೂ ಕೊಡಗಿನಲ್ಲಿ ನಿರ್ಮಿಸಿದ ರೀತಿ ಮನೆ ಕಟ್ಟಿಕೊಡುತ್ತೇವೆ. 65 ವರ್ಷ ದಾಟಿದ ವಯೋವೃದ್ಧರಿಗೆ ಕುಟುಂಬ ನಿರ್ವಹಣೆಗೆ ಹಿರಿಯರನ್ನು ವೃದ್ಧಾಶ್ರಮಕ್ಕೆ ಕಳಿಸಿದಂತೆ ಮಾಸಿಕ 5 ಸಾವಿರ ಪ್ರತಿ ಮನೆಗೆ ನೀಡುತ್ತೇವೆ. ಅಲ್ಲದೆ ವಿಧವೆಯರಿಗೆ ಮತ್ತು ಮದುವೆಯಾಗದ ಕನ್ಯೆಯರಿಗೆ ಮಾಸಿಕ 2500 ಹಣ ನೀಡುತ್ತೇವೆ.
ರಾಜ್ಯದಲ್ಲಿ 51 ಉಪ ನದಿಗಳಿದ್ದು ಜನತಾ ಜಲಧಾರೆ ಯೋಜನೆಯಡಿ ಪ್ರತಿ ಗ್ರಾಮಕ್ಕೂ ರೈತರ ಹೊಲಗಳಿಗೆ ಉಚಿತ ನೀರಿನ ವ್ಯವಸ್ಥೆ ಮಾಡುತ್ತೇವೆ. ಜೆಡಿಎಸ್ ಪಕ್ಷಕ್ಕೆ ಅತಂತ್ರ ಪರಿಸ್ಥಿತಿ ನೀಡದೆ ಪೂರ್ಣ ಪ್ರಮಾಣದ ಮಿಷನ್ 123 ಆಸೆಯಂತೆ ಯಾವುದೇ ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಪೂರ್ಣ ಪ್ರಮಾಣದ ಅಧಿಕಾರ ನೀಡಿ ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಜನರ ತೆರಿಗೆಯಿಂದ ಸಾಮಾನ್ಯ ಶಾಸಕನ ಮನೆಯಲ್ಲಿ 8 ಕೋಟಿಗೂ ಅಧಿಕ ಹಣವಿದ್ದು ಅದು ಜನರ ತೆರಿಗೆಯ ಹಣವಾಗಿದೆ. ಸ್ಥಳೀಯ ಮನೆಯ ಮಗ ತಾಲ್ಲೂಕಿಗೆ ಕಷ್ಟಕಾಲದಲ್ಲಿ ಅಧಿಕಾರವಿಲ್ಲದೆ ಸೇವೆ ಸಲ್ಲಿಸಿದ ಕೆ.ಟಿ.ಶಾಂತಕುಮಾರ್ ಅವರಿಗೆ ಮತ ನೀಡಿ ಗೆಲ್ಲಿಸಿ ರಾಜ್ಯದಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬರಲು ಸಹಕರಿಸಿ ಎಂದು ಮನವಿ ಮಾಡಿದರು.
ಇದೇ ಸಮಯದಲ್ಲಿ ವಿದ್ಯಾ ನಗರದ ಕೂಲಿ ಕೆಲಸಗಾರ ಹತ್ತನೇ ತರಗತಿ ವಿದ್ಯಾರ್ಥಿ ಸುಹಾಸ್ ಎಂಬುವರು ಜೀವನ ಸಾಗಿಸಲು ಪೇಂಟಿಂಗ್ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಒಂದು ಕೈ, ಒಂದು ಕಾಲನ್ನು ಕಳೆದುಕೊಂಡಿದ್ದು, ಅವರಿಗೆ ಕೃತಕ ಕೈಕಾಲು ಜೋಡಣೆಗೆ ಉಚಿತವಾಗಿ ಚಿಕಿತ್ಸೆ ಕೊಡಿಸಿ ಬೆಸ್ಕಾಂನಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ಪೂರ್ಣ ಕುಂಭ ಸ್ವಾಗತದೂಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಂಡರು. ಸುಡು ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಜನ ಪಾಲ್ಗೊಂಡಿದ್ದರು. ರಥಯಾತ್ರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಟಿ.ಶಾಂತಕುಮಾರ್, ಜಿಲ್ಲಾಧ್ಯಕ್ಷ ಆಂಜಿನಪ್ಪ, ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ, ಕಾರ್ಯದರ್ಶಿ ಶಿವಸ್ವಾಮಿ, ಜಕ್ಕನಹಳ್ಳಿ ಲಿಂಗರಾಜು, ಶಾಂತಕುಮಾರ್ ಸಹೋದರ ಪುಟ್ಟೇಗೌಡ, ರಾಕೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಧ ನಾರಾಯಣಗೌಡ, ರಕ್ಷಿತ್ ಗೌಡ, ಮಾಜಿ ನಗರಸಭಾ ಸದಸ್ಯೆ ರೇಖಾ ಅನೂಪ್ ಇತರರು ಹಾಜರಿದ್ದರು.
Comments are closed.