ತುಮಕೂರು: ಅನಾದಿ ಕಾಲದಿಂದಲೂ ಶ್ರೇಷ್ಠ ಜಂಗಮರೆ ಜೈನ ಮುನಿಗಳಾಗಿದ್ದಾರೆ ಎಂದು ಚಿಕ್ಕ ತೊಟ್ಲುಕೆರೆಯ ಆಟವಿ ಜಂಗಮ ಸುಕ್ಷೇತ್ರದ ಆಟವೀ ಶಿವಲಿಂಗ ಮಹಾ ಸ್ವಾಮೀಜಿ ಹೇಳಿದರು.
ಮಂದಾರಗಿರಿಯಲ್ಲಿ ನಡೆಯುತ್ತಿರುವ ದಿವ್ಯಾಕಾಶ ಸಮವಸರಣ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ದಿಗಂಬರ ಜೈನ ಮುನಿಗಳು ಎಲ್ಲೆಲ್ಲಿ ಕುಳಿತು ಧರ್ಮೋಪದೇಶ ಮಾಡುತ್ತಾರೆಯೋ ಅದೇ ಮಠವಾಗಿ ಪರಿವರ್ತನೆಗೊಳ್ಳುತ್ತದೆ. ಅವರು ಎಲ್ಲೆಲ್ಲಿ ಪಾದಸ್ಪರ್ಶ ಮಾಡುತ್ತಾರೆಯೋ ಅದೇ ಒಂದು ಪುಣ್ಯ ಕ್ಷೇತ್ರವಾಗಿ ರೂಪಾಂತರಗೊಳ್ಳುತ್ತದೆ ಎಂದು ವಿಶ್ಲೇಷಣೆ ಮಾಡಿದರು.
ನಾವು ಯಾರೂ ಕೈಲಾಸವನ್ನೂ ಇದುವರೆಗೂ ನೋಡಿಲ್ಲ. ಆದ್ರೆ ಮಂದಾರಗಿರಿಯಲ್ಲಿ ನೋಡಬಹುದಾಗಿದೆ. ಪರ್ವತದ ಮೇಲೆ ಇರುವ ಮಹಾವೀರ ತೀರ್ಥಂಕರ ದಿವ್ಯಾಕಾಶ ಸಮವಸರಣದಲ್ಲಿ ಕಾಣಬಹುದಾಗಿದೆ. ಸಮವಸರಣದಲ್ಲಿ ಸರಸ್ವತಿ ಹಾಗೂ ಲಕ್ಷ್ಮಿ ಪೂಜೆ ಸಹ ನೋಡಬಹುದಾಗಿದೆ ಎಂದು ಹೇಳಿದರು.
ಭೂಮಿಯ ಮೇಲೆ ಸಲ್ಲುವವರು ಭೂಲೋಕದಿಂದ ಹೊರಗೆ ಹೋದವರು ಅಲ್ಲಿಯೂ ಕೂಡ ಸಲ್ಲುವವರು. ಮಂದಾರ ಗಿರಿಯು ನಿಸರ್ಗದ ಕೈಲಾಸದಂತೆ ಭಾಸವಾಗುತ್ತದೆ ಎಂದರು.
ಈ ದೇಹವು ಆತ್ಮದ ದೇವಾಲಯವಾಗಿದೆ. ಅದನ್ನು ಶ್ರದ್ದಾ ಭಕ್ತಿಯಿಂದ ನಾವು ಕಾಪಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಅದು ಕಾರ್ಪೊರೇಷನ್ ಡಬ್ಬಿಯಾಗಲಿದೆ. ಆತ್ಮನಿಗೆ ಕಲ್ಯಾಣ ಮಾಡುವುದೇ ಅದು ಸಮವಸರಣದ ಕಲ್ಯಾಣ ಮಹೋತ್ಸವವಾಗಿದೆ. ಜೈನ ಧರ್ಮದಲ್ಲಿ ಸತ್ಯ, ಶುದ್ಧ, ಕಾಯಕ ದಾಸೋಹ ಪ್ರಮುಖವಾದುದಾಗಿದೆ. ಲಿಂಗಾಯತ ಧರ್ಮದಲ್ಲಿಯೂ ಕೂಡ ಚತುರ್ವಿಧಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ ಎಂದರು.
ದಯಯೇ ಧರ್ಮದ ಮೂಲವಯ್ಯ ಎಂಬ ಬುನಾದಿಯೊಂದಿಗೆ ಜೈನ ಧರ್ಮ ಹಾಗೂ ಲಿಂಗಾಯತ ಧರ್ಮ ನಿಂತಿವೆ ಎಂದರು.
ಕಾರ್ತಿಕ ಮಾಸ ಎಂಬುದು ಜೈನ ಮಹಾರಾಣಿ ಕಾರ್ತಿಕೇಯಿಂದ ಚಾಲನೆ ದೊರೆತಿದ್ದು, ಅದನ್ನು ಪ್ರಸ್ತುತ ಸಮಾಜದ ಎಲ್ಲ ಧರ್ಮೀಯರು ಪಾಲಿಸುತ್ತಿದ್ದಾರೆ. ಜೈನ ಜಂಗಮ ಎರಡಕ್ಕೂ ಅನ್ಯೋನ್ಯ ಸಂಬಂಧವಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮೂಡಬಿದರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಸಮಾಜ ಬಾಂಧವರಿಗೆ ಇದು ಆನಂದದ ಸಮಯವಾಗಿದೆ. ತುಮಕೂರಿನ ಜೈನ ಸಮಾಜದವರು ತಮ್ಮ ಭಕ್ತಿಯ ಶಕ್ತಿಯಿಂದ ಮಂದರಗಿರಿ ಬೆಟ್ಟದಲ್ಲಿ ಸಮೋಸರಣ ದರ್ಶನ ಪಡೆಯುತ್ತಿದ್ದಾರೆ. ಯುಗಳ ಮುನಿಗಳು ರಾಜ್ಯದಲ್ಲಿ ಸುಮಾರು ನಾಲ್ಕು ವರ್ಷದಿಂದ ಈ ರೀತಿಯ ಒಂದು ಅದ್ಭುತ ಮಾಡಿದ್ದಾರೆ ಎಂದರು.
ಇಲ್ಲಿಯ ಸಮಸವಸರನ ಒಂದು ರೀತಿ ವಿಸ್ಮಯ ಹಾಗೂ ಜ್ಞಾನ ಮಂಟಪವಾಗಿ ಪರಿವರ್ತನೆಗೊಂಡಿದೆ. ಜಂಗಮರು ಈ ಸಮೋಸರಣ ನೋಡಿ ಅನುಭವ ಮಂಟಪವಾಗಿ ಬಳಸಿಕೊಂಡಿದ್ದಾರೆ ಎಂದರು.
ಭೂಮಿಯ ಮೇಲೆ ಸಸ್ಯ ಸಂಕುಲ ನಾಶವಾಗಿದೆ ಭೂಮಿಯಲ್ಲಿ ಗಾಳಿ ನೀರು ಕಲುಷಿತಗೊಳ್ಳುತ್ತಿದೆ. ಸಿಗುವುದು ಕಷ್ಟ ಸಾಧ್ಯವಾಗಿದೆ ಎಂದರು.
ಸಮವಸರಣ ಪರಂಪರೆ ತಂದವರು ಭಗವಾನ ಮಹಾವೀರ ತೀರ್ಥಂಕರರಾಗಿದ್ದಾರೆ. ಮಂದರಗಿರಿಯಲ್ಲಿ ಒಂದು ರೀತಿ ಜೀವಂತ ಸಮವಸರಣ ಕಾಣಬಹುದಾಗಿದೆ. ಇದು ಮಂದಾರಗಿರಿಗೆ ಶೋಭೆ ತರುತ್ತದೆ ಎಂದರು.
ತುಮುಲ್ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಹಾಲು ಒಕ್ಕೂಟದಿಂದ ಮಹೋತ್ಸವ ಯಶಸ್ವಿಗೆ ಸರ್ವ ರೀತಿಯಲ್ಲಿಯೂ ಸಹಕಾರ ನೀಡಿದ್ದೇವೆ. ಇನ್ನಷ್ಟು ಸಹಕಾರ ನೀಡಲು ಸಿದ್ಧರಿದ್ದೇವೆ. ಧಾರ್ಮಿಕ ಕಾರ್ಯ ಸುಲಲಿತವಾಗಿ ನಡೆದರೆ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಅಮೋಘ ಕೀರ್ತಿ ಮಹಾರಾಜ್ ಮತ್ತು ಅಮರ ಕೀರ್ತಿ ಮಹಾರಾಜ್ ಸಾನಿಧ್ಯ ವಹಿಸಿದ್ದರು, ಕಾರ್ಕಳದ ಜೈನ ಮಠದ ಲಲಿತ ಕೀರ್ತಿ ಭಟ್ಟರಕ ಸ್ವಾಮೀಜಿ, ಮುಂಬಯಿಯ ರಾಕೇಶ್ ಜೈನ್, ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ಆರ್.ಜೆ.ಸುರೇಶ್, ಮಾಜಿ ಸಚಿವ ಅಭಯ್ ಚಂದ್ರ ಜೈನ್, ಧರ್ಮಸ್ಥಳದ ಸುರೇಂದ್ರ ಕುಮಾರ್, ಮೂಡಬಿದರೆ ಜೈನ್ ಮಠದ ಸ್ವಾಮೀಜಿ, ಜೈನ್ ಭವನ ನಿರ್ದೇಶಕ ವಿನಯ, ಮಹಾನಗರ ಪಾಲಿಕೆ ಸದಸ್ಯೆ ಗಿರಿಜಾ ಧನ್ಯಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ನೀರಜಾ ನಾಗೇಂದ್ರ ಕುಮಾರ್, ಸಾಹಿತಿ ಪದ್ಮಪ್ರಸಾದ್, ಬಿಜೆಪಿ ಮುಖಂಡ ಧನಿಯಾಕುಮಾರ್ ಹಾಜರಿದ್ದರು.
Comments are closed.