ಜಲಜೀವನ್ ಕಾಮಗಾರಿಯಲ್ಲಿ ಕಳಪೆ- ತನಿಖೆಗೆ ಆಗ್ರಹ

94

Get real time updates directly on you device, subscribe now.


ತುಮಕೂರು: ಜಿಲ್ಲೆಯ 10 ತಾಲೂಕುಗಳಲ್ಲಿ ನಡೆದಿರುವ ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ಡಿಪಿಆರ್ ನಲ್ಲಿ ನಮೂದಿಸಿರುವ ವಸ್ತುಗಳ ಬೆಲೆಗು ಕಾಮಗಾರಿಯಲ್ಲಿ ಅಳವಡಿಸಿರುವ ವಸ್ತುಗಳ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಇಡಿ ಯೋಜನೆಯನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಮಾರಣ್ಣ ಪಾಳ್ಳೆಗಾರ್ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಗ್ರಾಮದಲ್ಲಿ ನೂರು ಮನೆಗಳಿದ್ದರೆ ಮೂವತ್ತು ಮನೆಗಳಿಗೆ ಮಾತ್ರ ನಲ್ಲಿ ಅಳವಡಿಸಿ ನೀರು ನೀಡಿ ಸಂಪೂರ್ಣ ಬಿಲ್ ಮಾಡಿಕೊಳ್ಳಲಾಗಿದೆ. ಅಲ್ಲದೆ ಒಂದು ಗ್ರಾಮದಲ್ಲಿ 150 ಮನೆಗಳಿದ್ದರೆ 300 ಮನೆಗಳಿಗೆ ಅಂದಾಜು ತಯಾರಿಸಿ, ಯೋಜನೆಯ ಆರಂಭದಲ್ಲಿಯೇ ಅವ್ಯವಹಾರಕ್ಕೆ ನಾಂದಿ ಹಾಡಲಾಗಿದೆ. ಇದರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಇಡೀ ಯೋಜನೆಯಲ್ಲಿ ಕರ್ನಾಟಕ ಪಾರದರ್ಶಕ ಅಧಿನಿಯಮ ದ ಉಲ್ಲಂಘನೆಯಾಗಿದೆ. ನಲ್ಲಿ ಅಳವಡಿಸಲು ಬಳಸುವ ಸ್ಟೀಲ್ ಪೈಫ್ ಮೂರು ನೂರು ಬೆಲೆ ನಮೂದಿಸಿ ಕಾಮಗಾರಿಯಲ್ಲಿ ಕೇವಲ 80 ರೂ. ಬೆಲೆಯ ಪೈಫ್ ಅಳವಡಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಿಇಓ, ಸರಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಮುಖ್ಯಮಂತ್ರಿಗಳಿಗು ಪತ್ರ ಬರೆದು ತನಿಖೆಗೆ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಅಲ್ಲದೆ ಆರ್ಟಿಐ ಮೂಲಕ ಕಾಮಗಾರಿಗಳ ಮಾಹಿತಿ ಕೇಳಿದರು ನೀಡದೆ ಸತಾಯಿಸಲಾಗುತ್ತಿದೆ, ಮೇಲ್ಮನವಿಗೂ ಬೆಲೆ ಇಲ್ಲದಂತಾಗಿದೆ. ನಲ್ಲಿ ನೀರಿನ ಕೆಲಸ ಮಾಡಿ ಅನುಭವವೇ ಇಲ್ಲದ ಮೂರನೇ ದರ್ಜೆ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರೂ. ಕಾಮಗಾರಿ ನೀಡಿ, ಕರ್ನಾಟಕ ಪಾರದರ್ಶಕ ಅಧಿನಿಯಮ ಉಲ್ಲಂಸಲಾಗಿದೆ. ಇದರಲ್ಲಿ ಎಲ್ಲಾ ಕ್ಷೇತ್ರಗಳ ಶಾಸಕರು ಭಾಗಿಯಾಗಿರುವ ಶಂಕೆ ಇದೆ ಎಂದು ಮಾರಣ್ಣ ಪಾಳ್ಳೆಗಾರ್ ದೂರಿದರು.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎನ್ನಲಾದ ಜಿಲ್ಲೆಯ 45 ಕ್ಕೆ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಜನರೊಂದಿಗೆ ಮಾತನಾಡಿ ಅದನ್ನು ಚಿತ್ರೀಕರಿಸಿ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ. ಇದಲ್ಲದೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ 50 ಅಡಿ ಪೈಪ್ ಬೇಕಾಗುವ ಕಡೆಗೆ 500 ಅಡಿ ನಮೂದಿಸಿ ಕೊಟ್ಟಿ ಬಿಲ್ ತಯಾರಿಸಲಾಗಿದೆ. ಕೆಲವು ಕಡೆಗಳಲ್ಲಿ ಕಾಮಗಾರಿ ನಡೆಸದೆ ಬಿಲ್ ಪಾವತಿಸಿದ್ದರೆ ಇನ್ನು ಕೆಲವು ಕಡೆಗಗಳಲ್ಲಿ ಹಳೆಯ ಕಾಮಗಾರಿಗೆ ಬಿಲ್ ತಯಾರಿಸಿ ಬಿಲ್ ಪಡೆದು ವಂಚಿಸಿದ್ದಾರೆ ಎಂದು ದೂರಿದರು.

ಜಿಲ್ಲೆಯ 10 ತಾಲೂಕಿನ ಸುಮಾರು 2000 ಹಳ್ಳಿಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಅವ್ಯಾಹತವಾಗಿ ಕಳಪೆ ಕಾಮಗಾರಿ ನಡೆದಿದೆ. ಚುನಾವಣೆ ಮುಗಿಯುವುದೊಳಗೆ ಇಡೀ ಯೋಜನೆ ಹಳ್ಳ ಹಿಡಿಯಲಿದೆ ಎಂದು ಮಾರಣ್ದ ಪಾಳ್ಳೆಗಾರ್ ನುಡಿದರು.
ಸರಕಾರ ಇಡಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳವುದರ ಜೊತೆಗೆ ಎಲ್ಲರ ಮನೆಗೆ ಕುಡಿಯುವ ನೀರು ಒದಗಿಸಬೇಕೆಂದು ಮಾರಪ್ಪ ಪಾಳ್ಳೆಗಾರ್ ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!