ನಾರಿ ಅಭ್ಯುದಯಕ್ಕೆ ಕೇಂದ್ರ, ರಾಜ್ಯ ಸರ್ಕಾರ ಬದ್ಧ

ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಗೆ ಸುರೇಶ್ ಗೌಡರನ್ನು ಗೆಲ್ಲಿಸಿ: ಶೋಭಾ ಕರಂದ್ಲಾಜೆ

215

Get real time updates directly on you device, subscribe now.


ತುಮಕೂರು: ಡಬಲ್ ಇಂಜಿನ್ ಸರಕಾರ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿ ಹಲವಾರು ಯೋಜನೆ ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ತಾಲೂಕಿನ ನಾಗವಲ್ಲಿ ಸಮೀಪದ ಬಾಣಾವಾರ ಗೇಟ್ ನಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಭೇಟಿ ಬಜಾವೋ, ಭೇಟಿ ಪಡಾವೋ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ನಾರಿಶಕ್ತಿಯ ಅಭ್ಯುದಯಕ್ಕೆ ಕಂಕಣ ಬದ್ಧವಾಗಿ ನರೇಂದ್ರ ಮೊದಿ ನೇತೃತ್ವದ ಸರಕಾರ ದುಡಿಯುತ್ತಿದೆ ಎಂದರು.

ರಾಜ್ಯದಲ್ಲಿ ಹೆಣ್ಣು ಮಕ್ಕಳು ಕಡಿಮೆ ಆಗುತ್ತಿದ್ದಾರೆ ಎನ್ನುವುದನ್ನು ಗಮನಿಸಿ 2008 ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಹೆಣ್ಣುಮಕ್ಕಳ ಬಗ್ಗೆ ಚಿಂತಿಸುವ ಸರಕಾರ ಎಂದರೆ ಅದು ಬಿಜೆಪಿ ಮಾತ್ರ, ಮೋದಿ ಸರಕಾರ ಉದ್ಯೋಗಸ್ಥ ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆ ಮಾಡಿದ್ದಾರೆ. ಆರೋಗ್ಯಕ್ಕಾಗಿ ಆಯುಷ್ಮಾನ್ ಕಾರ್ಡ್ ಜಾರಿಗೆ ತಂದಿದೆ. ಇಲ್ಲಿರುವ ಶಾಸಕರಿಗೆ ಜನರ ಆರೋಗ್ಯದ ಕಾಳಜಿ ಇದೆಯೋ ಇಲ್ಲವೋ ಗೊತ್ತಿಲ್ಲ. ಸುರೇಶ್ ಗೌಡರು ಶಾಸಕರಾಗಿದ್ದರೆ ಮನೆ ಮನೆಗೆ ಯೋಜನೆ ತಲುಪಿಸುತ್ತಿದ್ದರು. ದೇಶದ ಎಲ್ಲಾ ಮನೆಗಳಿಗೆ ನಲ್ಲಿ ನೀರು ಕೊಡಲು ಮೋದಿ ಅವರು ಗ್ರಾಮಾಂತರ ಕ್ಷೇತ್ರಕ್ಕೆ 150 ಕೋಟಿ ಅನುದಾನ ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಎಂಬುದು ಶೂನ್ಯ, ಶಾಸಕರು ಇದ್ದಾರೋ ಇಲ್ಲವೋ ಎಂಬುದೇ ಜನರಿಗೆ ತಿಳಿಯದಾಗಿದೆ. ಕ್ಷೇತ್ರ ಮತ್ತೊಮ್ಮೆ ಅಭಿವೃದ್ಧಿ ಕಾಣಬೇಕಾದರೆ ಸುರೇಶ್ಗೌಡ ಶಾಸಕರಾಗುವಂತೆ ನೀವೆಲ್ಲರೂ ಆಶೀರ್ವಾದ ಮಾಡಬೇಕೆಂದು ಶೋಭಾ ಕರಂದ್ಲಾಜೆ ಮನವಿ ಮಾಡಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾಗಿ ಬಿ.ಸುರೇಶಗೌಡ ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಡೀ 224 ಕ್ಷೇತ್ರಗಳಿಗೂ ಮಾದರಿಯಾಗಿವೆ. ಎಲ್ಲಾ ಗ್ರಾಮಗಳಿಗೂ ರಸ್ತೆ, ಸಿಸಿ ಚರಂಡಿ ಮಾಡಿ ಕ್ಷೇತ್ರವನ್ನು ಮಾದರಿಯಾಗಿದ್ದಾರೆ. ವಿದ್ಯುತ್ ಇಲಾಖೆಯಿಂದ 500 ಕೋಟಿ ರೂ. ತಂದು, ರೈತರ ಎಲ್ಲಾ ಐಪಿ ಸೆಟ್ಗಳಿಗೆ ತಲಾ 25 ಕೆವಿ ಟಿಸಿಗಳನ್ನು ಆಳವಡಿಸಿದ ಏಕೈಕ ಕ್ಷೇತ್ರ ತುಮಕೂರು ಗ್ರಾಮಾಂತರ, ಇದರ ರೂವಾರಿ ಸುರೇಶಗೌಡ ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ ಎಂದರು.
ಈ ಕ್ಷೇತ್ರದ ಮಾಜಿ ಶಾಸಕರಾದ ಸುರೇಶಗೌಡರು ಕೇಂದ್ರದ ಕೃಷಿ ಇಲಾಖೆಯ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಕೃಷಿ ಮೂಲಭೂತ ಸೌಕರ್ಯ ನಿಧಿಯ ಅಡಿಯಲ್ಲಿ ಕ್ಷೇತ್ರದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶಿಥಲೀಕರಣ ಘಟಕದ ಜೊತೆಗೆ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುವಂತಹ ಯೋಜನೆ ರೂಪಿಸಲು ಮನವಿ ಮಾಡಿದ್ದಾರೆ. ಸದಾ ಜನಪರ ಕಾಳಜಿ ಇರುವ ಸುರೇಶ್ಗೌಡ ಹಾಗೂ ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಬಿಜೆಪಿ ಪಕ್ಷವನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ನುಡಿದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಹೊನ್ನಾವರ- ಬೆಂಗಳೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವೆ ಶೋಭಾ ಕರಂದ್ಲಾಜೆ ಕಾರಣ, ಈ ಯೋಜನೆಗೆ ಬಿಎಸ್ವೈ ಅವರು ಬೆಂಬಲ ನೀಡಿದ್ದರಿಂದ ಇಂದು ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.
ದೇಶಕ್ಕೆ ಇಂದು ಮೋದಿ ಹಾಗೂ ಬಿಜೆಪಿ ಅನಿವಾರ್ಯವಾಗಿದೆ. ತನ್ನನ್ನು ತಾನೇ ನೋಡಿಕೊಳ್ಳದ ರಾಹುಲ್ಗಾಂಧಿಗೆ ದೇಶವನ್ನು ನೋಡಿಕೊಳ್ಳುವ ಯೋಗ್ಯತೆ ಇಲ್ಲ. ಹೊರ ದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವ ಟೀಕಿಸುವ ವ್ಯಕ್ತಿಯಿಂದ ದೇಶವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲ ಎಂದರು.

ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸುರೇಶ್ಗೌಡರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಮಂತ್ರಿಗಳು, ಅಧಿಕಾರಗಳ ಜೊತೆಗೆ ಜಗಳವಾಡಿ ಕ್ಷೇತ್ರದ ಅಭಿವೃದ್ಧಿಗೆ ಹಣ ತಂದಿದ್ದಾರೆ. ಅವರನ್ನು ಮತ್ತೊಮ್ಮೆ ಕ್ಷೇತ್ರದ ಜನತೆ ಶಾಸಕರಾಗಿ ಮಾಡಿ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಕಾರಿಯಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಬಿ.ಸುರೇಶ್ಗೌಡ ಮಾತನಾಡಿ, ನನ್ನ 10 ವರ್ಷದ ಅವಧಿಯಲ್ಲಿ ಕ್ಷೇತ್ರದ ಜನರಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಆರೋಗ್ಯ ಸೇವೆಗಳಿಗಾಗಿ ಆಸ್ಪತ್ರೆ ಮತ್ತು ಶಾಲೆಗಳನ್ನು ನಿರ್ಮಿಸಿ ಕೊಡಲಾಗಿದೆ. ಮಹಿಳಾ ಶಕ್ತಿ ಒಂದಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದರೆ, ಇಡೀ ವಿಶ್ವವೇ ತುಮಕೂರು ಗ್ರಾಮಾಂತರ ಕ್ಷೇತ್ರದತ್ತ ತಿರುಗಿ ನೋಡುವಂತೆ ಅಭಿವೃದ್ಧಿ ಕಾರ್ಯ ಮಾಡಿ ತೋರಿಸುತ್ತೇನೆ. ಕಾಂಗ್ರೆಸ್ ಸರಕಾರವಿದ್ದಾಗಲೂ ಸುಮಾರು 500 ಕೋಟಿ ರೂ. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡಿದ್ದೇನೆ. ಆದರೆ ನನ್ನ ಕಾಲದಲ್ಲಿ ಅಭಿವೃದ್ಧಿಗೊಂಡ ಶಾಲೆಗಳ ಶೌಚಾಲಯಗಳಿಗೆ ನೀರಿಲ್ಲ. ಬಳಕೆಗೆ ಯೋಗ್ಯವಿಲ್ಲ ದಂತಾಗಿವೆ. ಕಂಪ್ಯೂಟರ್ ಲ್ಯಾಬ್ ಉಪಯೋಗಕ್ಕೆ ಬರುತ್ತಿಲ್ಲ. ನಾಗವಲ್ಲಿಯಲ್ಲಿ ಹೆಣ್ಣು ಮಕ್ಕಳ ಪ್ರಥಮ ದರ್ಜೆ ಕಾಲೇಜು ತೆರೆದು, ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ಗುರಿ ಹೊಂದಿದ್ದೇನೆ ಎಂದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ತಾಲೂಕು ಅಧ್ಯಕ್ಷೆ ರೇಣುಕಮ್ಮ, ಮಹಿಳಾ ಮುಖಂಡರಾದ ತಾರಾಮಣಿ, ಜಿಪಂ ಮಾಜಿ ಅಧ್ಯಕ್ಷೆ ಶಾರದ ನರಸಿಂಹಮೂರ್ತಿ, ಸುಮಿತ್ರಾದೇವಿ, ಎಲ್ಲಾ ತಾಲೂಕುಗಳ ಮಹಿಳಾ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ಜಿಪಂ, ತಾಪಂ ಹಾಗೂ ಗ್ರಾಪಂಗಳ ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!