ಸಾಗುವಳಿದಾರರಿಗೆ ತೊಂದರೆ ನೀಡುವುದು ನಿಲ್ಲಿಸಿ

131

Get real time updates directly on you device, subscribe now.


ತುಮಕೂರು: ಬಗರ್ ಹುಕುಂ ಸಾಗುವಳಿ ಸಕ್ರಮ ಕೊರಿ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವಾಗ ಅರಣ್ಯ ಇಲಾಖೆ ಸೇರಿದಂತೆ ಯಾರು ಕೂಡ ರೈತರ ಸಾಗುವಳಿ ಸ್ವಾಧೀನಕ್ಕೆ ಅಡ್ಡಿ ಮಾಡದಂತೆ ರಕ್ಷಣೆ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ತುಮುಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯತಿಯ ಸುಮಾರು 35 ಗ್ರಾಮಗಳ ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಬಡ ಸಾಗುವಳಿದಾರರನ್ನು ಅವರು ಹಕ್ಕು ಪತ್ರಕ್ಕಾಗಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡದೇ ಅವರನ್ನು, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಮೂಲಕ ದೌರ್ಜನ್ಯ ನಡೆಸಿ, ಬೆದರಿಸಿ ಒಕ್ಕಲೆಬ್ಬಿಸಿ, ಬೀದಿಗೆ ತಳ್ಳುವ ಹೇಯ ಕುತಂತ್ರ ನಿಲ್ಲಿಸಲುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದ್ದು, ತಕ್ಷಣವೇ ರೈತರ ಮೇಲಿನ ದೌರ್ಜನ್ಯ ಮತ್ತು ಒಕ್ಕಲೆಬ್ಬಿಸುವ ಕುತಂತ್ರ ನಿಲ್ಲಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಲು ಒತ್ತಾಯಿಸಿದೆ.

ಸರಕಾರಗಳು ಫಾರಂ 50, 51, 53, 57 ಸಲ್ಲಿಸಲು ಅವಕಾಶ ನೀಡಿದ್ದವು. ಅದರಂತೆ ಚೇಳೂರು ಹೋಬಳಿಯ ಈ ಎಲ್ಲಾ ರೈತರು ಕಳೆದ ಹಲವಾರು ದಶಕಗಳಿಂದ ಸಾಗುವಳಿಯಲ್ಲಿ ತೊಡಗಿದವರು. ಅರ್ಜಿಗಳನ್ನು ಸಲ್ಲಿಸಿದ್ದರು, ಈಗ ಎಲ್ಲಾ ಅರ್ಜಿಗಳು ಪೆಂಡಿಗ್ ಇರುವಾಗಲೇ ಅರಣ್ಯ ಇಲಾಖೆಯ ಮೂಲಕ ರೈತರ ಬಗರ್ ಹುಕುಂ ಸಾಗುವಳಿಯ ಜಮೀನನ್ನು ಬಲವಂತವಾಗಿ ಕಿತ್ತುಕೊಳ್ಳಲಾಗುತ್ತಿದೆ. ಇದಕ್ಕಾಗಿ ಅರಣ್ಯ ಇಲಾಖೆಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಸಂಘ ದೂರಿದೆ.

ರಾಜ್ಯದಲ್ಲಿರುವ ದೊಡ್ಡ ಪ್ರಮಾಣದ ಕಾಯ್ದಿಟ್ಟ ಅರಣ್ಯವಿಲ್ಲದ ಪ್ರದೇಶಗಳನ್ನು ಅಭಿವೃದ್ಧಿ ಮಾಡದೆ ಗಣಿಗಳ್ಳರ ಲೂಟಿಗೆ ಬಿಟ್ಟಿರುವ ಅರಣ್ಯ ಇಲಾಖೆ, ಕಂದಾಯ ಇಲಾಖೆಯಿಂದ ಪಡೆದ ಜಮೀನಿನಲ್ಲಿ ಪೊಲೀಸ್ ಬಲವನ್ನಿಟ್ಟುಕೊಂಡು ದೌರ್ಜನ್ಯಕ್ಕೆ ಮುಂದಾಗಿದೆ. ಸದರಿ ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಜಮೀನುಗಳ ಸಾಗುವಳಿ ಹಕ್ಕಿಗಾಗಿ ಹಾಗೂ ಇನ್ನೊಂದೆಡೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ- 2006 ರಂತೆ ಅರ್ಜಿ ಸಲ್ಲಿಸಿದ್ದರೂ ಈ ದೌರ್ಜನ್ಯ ಮುಂದುವರಿದಿದೆ. ತಾಳೆಕೊಪ್ಪ ಗ್ರಾಮದ 196 ದಾಸಪ್ಪನಳ್ಳಿ ಗ್ರಾಮದ 30, 31, 32, 33, 34, 35, 36, 43 ಮತ್ತಿತರೆ ಗ್ರಾಮಗಳ ಸುಮಾರು 1,914 ಎಕರೆ ಭೂಮಿಯನ್ನು ಕಂದಾಯ ಇಲಾಖೆಯು 1992- 93 ರಲ್ಲಿ ಅರಣ್ಯ ಇಲಾಖೆಗೆ ವರ್ಗಾಹಿಸಿದೆ. ಅದು 1999 ರ ಅರಣ್ಯ ಇಲಾಖೆಯ ಹೆಸರು ಪಹಣಿ ಪತ್ರಿಕೆಯಲ್ಲಿ ಸೇರಿಸಲಾಗಿದೆ. ಈ ಜಮೀನುಗಳಲ್ಲಿ ಐದು ಕಂದಾಯ ಗ್ರಾಮಗಳಾದ ಕುರುಬರ ಹಳ್ಳಿ, ಪೇಟೆ ಕುರುಬರಹಳ್ಳಿ, ಹೊನ್ನೇನಹಳ್ಳಿ, ಶಿಲವಾರಹಳ್ಳಿ, ನಾಯಕನಕೆರೆ ಅಲ್ಲದೇ ಗಂಗಯ್ಯನ ಪಾಳ್ಯಗಳ ಜನ ವಸತಿ ಪ್ರದೇಶ ಹಾಗೂ ಸಾಗುವಳಿ ನಿರತ ಪ್ರದೇಶವನ್ನು ಅಲ್ಲಿಯ ಜನರ ಜೊತೆ ಚರ್ಚಸಿದೆ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ಏಕಾಏಕಿ ವರ್ಗಹಿಸಿದೆ, ಜನರಿಗೆ ಪರ್ಯಾಯ ವ್ಯವಸ್ಥೆ ಮತ್ತು ಪರಿಹಾರ ಒದಗಿಸದೆ ಹಲವರನ್ನು ಒಕ್ಕಲೆಬ್ಬಿಸಲಾಗಿದೆ.

ಆ ರೀತಿಯಲ್ಲಿ ದೌರ್ಜನ್ಯಕ್ಕೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಾದ ಸೋಮಲಾಪುರದ ರೇಣುಕಮ್ಮ ಮತ್ತು ಇರಕಸಂದ್ರ ಗ್ರಾಮದ ಪವಿತ್ರ ಹಾಗೂ ಗಂಗಯ್ಯನ ಪಾಳ್ಯದ ಪಾರ್ವತಮ್ಮ ಸೇರಿದಂತೆ ನೂರಾರು ಬಡ ರೈತರನ್ನು, ಹಕ್ಕು ಪತ್ರಕ್ಕಾಗಿ ಹಾಕಲಾದ ಇವರ ಅರ್ಜಿಗಳು ಪೆಂಡಿಂಗ್ ಇರುವಾಗಲೆ ಇವರನ್ನು ಅರಣ್ಯ ಇಲಾಖೆ ಹಿಂಸಿಸಿದೆ. ಪೊಲೀಸ್ ಕೇಸ್ಗಳನ್ನು ದಾಖಲಿಸಿ ಕಿರುಕುಳ ನೀಡಲಾಗಿದೆ. ಇದು ಬಹಳ ಸ್ಪಷ್ಟವಾಗಿ ರಾಜಕೀಯ ಪ್ರೇರಿತ ಮತ್ತು ಅಧಿಕಾರ ದುರುಪಯೋಗ ಕ್ರಮವಾಗಿದೆ. ಬಗರ್ ಸಾಗುವಳಿದಾರ ಬಡ ದಲಿತ ಮಹಿಳೆಯರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಎತ್ತಿ ತೋರಿಸುತ್ತದೆ.

ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ರೈತರಿಗೆ ನೇತೃತ್ವ ನೀಡುತ್ತಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಟಿ.ಯಶವಂತ ಅವರನ್ನು ಚೇಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಫೆಕ್ಟರ್ ಮಂಜುನಾಥ ಅವರು ದೂರವಾಣಿಯಲ್ಲಿ ಮಾತನಾಡುತ್ತಾ ಕೊಲೆ ಬೆದರಿಕೆ ಹಾಕಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ತುಮಕೂರು ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ. ಈ ಕೂಡಲೇ ಗೂಂಡಾ ವರ್ತನೆ ತೋರುವ ಅವರನ್ನು ಕೆಲಸದಿಂದ ವಜಾ ಮಾಡುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಆರ್.ಎಸ್.ಚನ್ನಬಸವಣ್ಣ, ದೊಡ್ಡನಂಜಪ್ಪ, ಸಿ.ಅಜ್ಜಪ್ಪ, ನರಸಿಂಹಮೂರ್ತಿ, ಬಸವರಾಜು, ಎನ್.ಕೆ.ಸುಬ್ರಮಣ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!