ಪಂಚ ಮಂತ್ರಗಳೊಂದಿಗೆ ಕಾಂಗ್ರೆಸ್ ಪ್ರಚಾರ

ಬಿಜೆಪಿ ದುರಾಡಳಿದ ಬಗ್ಗೆ ಜನರಿಗೆ ತಿಳಿಸ್ತೇವೆ: ರಾಯಸಂದ್ರ ರವಿಕುಮಾರ್

66

Get real time updates directly on you device, subscribe now.


ತುಮಕೂರು: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಮತ್ತು ಅಭಿವೃದ್ಧಿ ಎಂಬ ಐದು ಅಂಶಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ಸೇ ಪರಿಹಾರ ಎಂಬ ಘೋಷ ವಾಕ್ಯದೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ತಿಳಿಸಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು, ತಾಲೂಕು ಸಂಯೋಜಕರ ಸಭೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023ರ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಮೇಲಿನ ಪಂಚ ಮಂತ್ರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಿದ್ದೇವೆ ಎಂದರು.

ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಜನವಿರೋಧಿ ನೀತಿಗಳಿಂದಾಗಿ ದಿನ ನಿತ್ಯದ ವಸ್ತುಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರು ದಿನದೂಡುವುದೇ ಕಷ್ಟವಾಗಿದೆ. ಹಾಗಾಗಿ ಕಾಂಗ್ರೆಸ್ ಪ್ರತಿ ಮನೆಯ ಗೃಹಿಣಿಗೆ ಮಾಸಿಕ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತದ ಗೃಹಜೋತಿ, ಪ್ರತಿ ಪಡಿತರದಾರರಿನಿಗೆ ತಲಾ 10 ಕೆಜಿ ಅನ್ನಭಾಗ್ಯ, ನಿರುದ್ಯೋಗಿ ಯುವಕರಿಗಾಗಿ ಪದವೀಧರರಿಗೆ ಮಾಸಿಕ 3000 ರೂ., ಡಿಪ್ಲೋಮಾದವರಿಗೆ ತಲಾ 1500 ರೂ. ನೀಡುವ ಯೋಜನೆ ಹಾಕಿಕೊಂಡಿದೆ. ಈ ಎಲ್ಲಾ ಯೋಜನೆಗಳನ್ನು ಸರಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗೆ ಜಾರಿಗೆ ಬರಲಿವೆ. ಇದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಮಾಡಲಿದೆ ಎಂದು ರಾಯಸಂದ್ರ ರವಿಕುಮಾರ್ ತಿಳಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ 1- 2 ರ ಅವಧಿಯಲ್ಲಿ ಜಾರಿಗೆ ತಂದ ಉದ್ಯೋಗ ಖಾತ್ರಿ, ಆಹಾರ ಭದ್ರತಾ ಕಾಯ್ದೆ, ಆರ್ಟಿಇ, ಆರ್ಟಿಐ ನಿಂದಾಗಿ ದೇಶದ ಕೋಟ್ಯಾಂತರ ರೂ. ಸಹಕಾರ ಪಡೆದಿವೆ. ಇಂದಿಗೂ ಗ್ರಾಮೀಣ ಭಾಗದ ಜನರನ್ನು ಉದ್ಯೋಗ ಖಾತ್ರಿ ಯೋಜನೆ ಪೊರೆಯುತ್ತಿದೆ. ಶ್ರೀಮಂತರ ಮಕ್ಕಳ ರೀತಿ, ಬಡವರ ಮಕ್ಕಳು ಕಾನ್ವೆಂಟ್ ಶಾಲೆಗಳಲ್ಲಿ ಕಲಿಯಬೇಕೆಂಬ ಆಶಯದೊಂದಿಗೆ ಆರ್ಟಿಇ ಜಾರಿಗೆ ತರಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ 2013 ರಿಂದ 18ರ ವರೆಗಿನ ಸರಕಾರದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ ಸೇರಿದಂತೆ ಹಲವಾರು ಯೋಜನೆ ಲಕ್ಷಾಂತರ ಜನರನ್ನು ತಲುಪಿವೆ. ಇವುಗಳ ಬಗ್ಗೆ ಹೆಚ್ಚು ಪ್ರಚಾರವನ್ನು ಕಾಂಗ್ರೆಸ್ ಪ್ರಚಾರ ಸಮಿತಿ ನಡೆಸುವ ಜೊತೆಗೆ ಬಿಜೆಪಿಯ ಜನವಿರೋಧಿ ನೀತಿಗಳನ್ನು ಜನರ ಮುಂದಿಡಲಿದೆ ಎಂದರು.

ದೇಶದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತಿಲ್ಲ. ಆದರೆ ಕೃಷಿ ಪೂರಕ ಪರಿಕರಗಳ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೃಷಿ ಲಾಭದಾಯಕವಲ್ಲ ಎಂಬ ಅಂಶದಿಂದ ಯುವ ಜನತೆ ಕೃಷಿಯಿಂದ ದೂರ ಸರಿಯುತಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲಿದೆ. ಈ ಎಲ್ಲಾ ಅಂಶಗಳ ಕುರಿತು ಕಾಂಗ್ರೆಸ್ ಪ್ರಚಾರ ಸಮಿತಿ ಪ್ರತಿ ಬೂತ್ ಮಟ್ಟದಲ್ಲಿಯೂ ಪ್ರಚಾರ ಕೈಗೊಂಡು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಜನರ ಇಂದಿನ ಸಮಸ್ಯೆಗಳಿಗೆ ಕಾಂಗ್ರೆಸ್ ಪರಿಹಾರ ಎಂದು ತಿಳಿಸಲಿದೆ ಎಂದರು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳೂ ಸಮಾನ ಎದುರಾಳಿಗಳು, ಯಾರ ಬಗ್ಗೆಯೂ ಕನಿಕರವಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದಲ್ಲಿದ್ದಾಗ ಆಗಿರುವ ಜನ ವಿರೋಧಿ ನೀತಿಗಳನ್ನು ಜನತೆಯ ಮುಂದಿಟ್ಟು ಕಾಂಗ್ರೆಸ್ ಪಕ್ಷವಾಗಿ ಬಹಳ ಗಟ್ಟಿ ಧ್ವನಿಯಲ್ಲಿ ಮತ ಕೇಳಲು ಕಾಂಗ್ರೆಸ್ ಪ್ರಚಾರ ಸಮಿತಿ ಸಿದ್ಧವಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಸಭೆ, ಸಾಮಾರಂಭ ನಡೆಯಲಿವೆ ಎಂದು ರಾಯಸಂದ್ರ ರವಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾದ ಇಕ್ಬಾಲ್ ಅಹಮದ್, ಚಿಕ್ಕರಂಗಯ್ಯ, ಜಯರಾಮಯ್ಯ, ಎಸ್.ಎಲ್.ಎನ್.ಸ್ವಾಮಿ, ಜಿಲ್ಲಾ ಸಂಯೋಜಕರಾದ ರಾಕ್ ಕುಮಾರ್, ಚಕ್ರವರ್ತಿ ಪ್ರಕಾಶ್, ಸಿ.ಭಾನುಪ್ರಕಾಶ್, ಮಾರುತಿ, ದೊಡ್ಡಯ್ಯ, ಜಗದೀಶ್, ಮಳೇಹಳ್ಳಿ ಮಲ್ಲಿಕಾರ್ಜುನ, ಕಲ್ಲಹಳ್ಳಿ ಮಹಾಲಿಂಗಪ್ಪ, ಹೇರೂರು ಗುರುಪ್ರಸಾದ್, ರೇಣುಕಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!