ಗ್ರಾಮಾಂತರದಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ

73

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಪಂಚಾಯತ್ ಮತ್ತು ಬೂತ್ ಮಟ್ಟದ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಸಭೆಯಲ್ಲಿ ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಕಳೆದ ಮೂರು ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ಪಕ್ಷ ಕುಸಿಯುತ್ತಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ದಲಿತ, ಹಿಂದುಳಿದ ಮತದಾರರನ್ನು ಹೊಂದಿರುವ ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಈ ಬಾರಿ ಹಿಂದುಳಿದ ವರ್ಗದ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುವ ಚಿಂತನೆಯಲ್ಲಿ ಕಾಂಗ್ರೆಸ್ ಪಕ್ಷವಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆ ಆಯೋಜಿಸಿದ್ದು, ಹಿಂದುಳಿದ ವರ್ಗದ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ನಿವೃತ್ತ ಎಇಇ ಜಿ.ಹೆಚ್.ಷಣ್ಮುಖಪ್ಪ, ಸೂರ್ಯ ಮುಕುಂದರಾಜ್, ಶ್ರೀನಿವಾಸ್, ಆರ್.ನಾರಾಯಣ್, ಹೆಚ್.ನಿಂಗಪ್ಪ, ನರಸಿಂಹರಾಜು ಅವರು ಪ್ರಬಲ ಆಕಾಂಕ್ಷಿಗಳಿದ್ದು, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಜಿ.ಹೆಚ್.ಷಣ್ಮುಖಪ್ಪ ಅವರು ಅಭ್ಯರ್ಥಿಯಾಗುವ ಎಲ್ಲಾ ನಿರೀಕ್ಷೆಗಳಿದ್ದು, ನಾವೆಲ್ಲರೂ ಅವರ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.

ಡಿಸಿಸಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ ಮಾತನಾಡಿ, ತುಮಕೂರು ಗ್ರಾಮಾಂತರದಲ್ಲಿ ಎಸ್ಸಿ, ಎಸ್ಟಿ, ಓಬಿಸಿಯ ಸುಮಾರು 1.50 ಲಕ್ಷ ಮತದಾರರಿದ್ದಾರೆ. ಇವರನ್ನು ಕೇಂದ್ರೀಕರಿಸಿದರೆ ಗೆಲುವು ಸಾಧ್ಯ, ಬಡವರು, ದಲಿತರು, ಹಿಂದುಳಿದ ವರ್ಗದವರಿಗೆ ಅನ್ನ, ಆಶ್ರಯ, ಶಿಕ್ಷಣ ನೀಡಿದಂತಹ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಿದರೆ ಹಾಲಿ ಮತ್ತು ಮಾಜಿ ಶಾಸಕರಿಗೆ ಸೆಡ್ಡು ಹೊಡೆಯಬಹುದಾಗಿದೆ ಎಂದರು.
ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎ.ದೇವರಾಜು ಮಾತನಾಡಿ, ಗ್ರಾಮಾಂತರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡದ ಪರಿಣಾಮ ಕಾರ್ಯಕರ್ತರ ಸಂಖ್ಯೆ ಕುಸಿಯುತ್ತಿದೆ. ಸಮರ್ಥ ನಾಯಕನ ಅಗತ್ಯವಿದೆ. ಹಾಗಾಗಿ ಕೆಪಿಸಿಸಿ ಜಿ.ಹೆಚ್.ಷಣ್ಮುಖಪ್ಪ ಅವರಿಗೆ ಟಿಕೆಟ್ ನೀಡಿದರೆ ಪಕ್ಷದಿಂದ ದೂರ ಸರಿದಿರುವ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಕೆಲಸ ಮಾಡಬೇಕಿದೆ. ಸಂಭಾವ್ಯ ಅಭ್ಯರ್ಥಿಯಾಗಿರುವ ಷಣ್ಮುಖಪ್ಪ ಕ್ಷೇತ್ರದಲ್ಲಿ ಪ್ರಚಾರ ಅರಂಭಿಸಲಿ, ಇದರ ಜೊತೆಗೆ ಜಿಲ್ಲೆಯ ಎಲ್ಲಾ ನಾಯಕರು ಒಗ್ಗೂಡಿ ಸಮಾವೇಶ ನಡೆಸಿ, ಪಕ್ಷದ ಅಭ್ಯರ್ಥಿಗೆ ಬಲ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.

ತುಮಕೂರು ಗ್ರಾಮಾಂತರದಲ್ಲಿ ನಾಯಕತ್ವದ ಕೊರತೆ ಇರುವುದು ನಿಜ. ಸಭೆಯಲ್ಲಿ ಸಹಜವಾಗಿಯೇ ಕಾರ್ಯಕರ್ತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಆದರೂ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಕಷ್ಟಗಳಿಗೆ ಪಕ್ಷದ ಮುಖಂಡರು ಸ್ಪಂದಿಸಬೇಕಿದೆ, ಐದು ಜನ ಆಕಾಂಕ್ಷಿಗಳ ನಡುವೆ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಜಿ.ಹೆಚ್.ಷಣ್ಮುಖಪ್ಪ ಅವರಿಗೆ ಟಿಕೆಟ್ ದೊರೆಯುವ ಎಲ್ಲಾ ಸಾಧ್ಯತೆಗಳಿದ್ದು, ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಒಂದು ಗಟ್ಟಿಯಾದ ಧ್ವನಿ ಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ ಎಂದರು.
ನಿವೃತ್ತ ಎಇಇ ಹಾಗೂ ಗ್ರಾಮಾಂತರ ಟಿಕೇಟ್ ಆಕಾಂಕ್ಷಿ ಜಿ.ಹೆಚ್.ಷಣ್ಮುಖಪ್ಪ ಮಾತನಾಡಿ, ಅತ್ಯಂತ ತಳ ಸಮುದಾಯದಿಂದ ಬಂದು ಶಿಕ್ಷಣ ಪಡೆದು ಇಂಜಿನಿಯರ್ ಆಗಿ ಸರಕಾರಿ ಹುದ್ದೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ 32 ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತಿ ನಂತರ ರಾಜಕೀಯ ಪ್ರವೇಶ ಮಾಡಿದ್ದೇನೆ. ಸಾಮಾಜಿಕ ನ್ಯಾಯಕ್ಕೆ ಹೆಸರಾಗಿರುವ ಕಾಂಗ್ರೆಸ್ ಪಕ್ಷ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ನನಗೆ ಟಿಕೆಟ್ ನೀಡಲಿದೆ ಎಂಬ ನಂಬಿಕೆ ಇದೆ. ಕಾಯಾ, ವಾಚಾ, ಮನಸ ಕಾರ್ಯಕರ್ತರ ಜೊತೆಗಿದ್ದು ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿನ ಹಾಲಿ, ಮಾಜಿಗಳ ದುರಾಡಳಿತಕ್ಕೆ ಬೇಸತ್ತು ಒಳ್ಳೆಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೆ ಇಬ್ಬರು ಅಭ್ಯರ್ಥಿಗಳು ಪ್ರಬಲ ಕೋಮಿಗೆ ಸೇರಿದ್ದು, ದಲಿತರು, ಓಬಿಸಿಗಳು ನನ್ನ ಕೈ ಹಿಡಿಯಲಿದ್ದಾರೆ ಎಂಬ ಭರವಸೆ ಇದೆ. ಇತರೆ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು.

ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಮಂಡಿಸಿದ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಕೆ.ಜಿ.ವೆಂಕಟೇಶ್, ಗ್ರಾಮಾಂತರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರು, ಕಾಂಗ್ರೆಸ್ ಕಾರ್ಯಕರ್ತರು ಜೋಕರ್ಗಳ ರೀತಿ ನೋಡುತ್ತಾರೆ, ಕಾಂಗ್ರೆಸ್ ಮತದಾರರಿದ್ದರೂ ಅವರನ್ನು ಸಂಘಟಿಸುವಂತಹ ನಾಯಕತ್ವದ ಕೊರತೆ ಇದೆ. ಚುನಾವಣೆಗೆ ಅಭ್ಯರ್ಥಿಯಾಗುವವರು ನಂತರ ಕಾಣೋಲ್ಲ, ಹಾಗಾಗಿ ಕಾರ್ಯಕರ್ತರ ಜೊತೆ ಸದಾ ಇರುವ ಸ್ಥಳೀಯರಿಗೆ ದೊರೆತರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಮುಖಂಡರಾದ ಸೂರ್ಯ ಮುಕುಂದರಾಜ್, ಎಸ್ಟಿ ಘಟಕದ ನರಸಿಂಹಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಮೂರ್ತಿ,ಎಸ್ಸಿ ಘಟಕದ ಲಿಂಗರಾಜು, ಓಬಿಸಿ ಘಟಕದ ಪುಟ್ಟರಾಜು, ಕಾರ್ಮಿಕ ಘಟಕದ ಸೈಯದ್ ದಾದಾಪೀರ್, ಸಂಜೀತ್ ಕುಮಾರ್, ಕೈದಾಳ ರಮೇಶ್, ಓ.ಸಿ.ಕೃಷ್ಣಪ್ಪ, ಗೂಳರಿವೆ ನಾಗರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!