ನಕಲಿ ಆಹ್ವಾನ ಪತ್ರಿಕೆ ಸಲ್ಲಿದ್ರೆ ಮುಲಾಜಿಲ್ಲದೆ ಕ್ರಮ

ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ

195

Get real time updates directly on you device, subscribe now.


ತುಮಕೂರು: ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿಗಳನ್ನಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿ ನಕಲಿ ಆಹ್ವಾನ ಪತ್ರಿಕೆಗಳನ್ನು ಸಲ್ಲಿಸಿ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಸೂಚನೆ ನೀಡಿದರು.

ಎನ್ಐಸಿ ಕಚೇರಿಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ಮದುವೆ, ಮತ್ತಿತರ ಸಮಾರಂಭಗಳಿರುವುದರಿಂದ ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ನಕಲಿ ಆಹ್ವಾನ ಪತ್ರಿಕೆಗಳನ್ನು ಸಲ್ಲಿಸುತ್ತಿರುವುದು ಕಂಡು ಬಂದಿದೆ. ಆಹ್ವಾನ ಪತ್ರಿಕೆ ಮುದ್ರಣ ಮಾಡುವ ಮುದ್ರಕರು ಸೂಕ್ತ ದಾಖಲೆ ಪಡೆಯದೇ ಪತ್ರಿಕೆಗಳನ್ನು ಮುದ್ರಣ ಮಾಡಬಾರದು ಎಂದರಲ್ಲದೆ ಚುನಾವಣಾ ದಿನ ಹಾಗೂ ಹಿಂದಿನ ದಿನದಂದು ಸಮಾರಂಭವಿರುವ ಬಗ್ಗೆ ಸುಳ್ಳು ಆಹ್ವಾನ ಪತ್ರಿಕೆ ನೀಡಿದ ಚುನಾವಣಾ ಕರ್ತವ್ಯ ನಿಯೋಜಿತರನ್ನು ಆರ್ಪಿ ಕಾಯ್ದೆ 134ರನ್ವಯ ಅಮಾನತು ಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪಿಆರ್ಓ ಹಾಗೂ ಎಪಿಆರ್ಓ ಸೇರಿದಂತೆ ಒಟ್ಟು 8622 ಅಧಿಕಾರಿ, ಸಿಬ್ಬಂದಿಗೆ ಏಪ್ರಿಲ್ 11 ರಂದು ತರಬೇತಿ ಆಯೋಜಿಸಲಾಗಿದ್ದು, ನಿಯೋಜಿತ ಸಿಬ್ಬಂದಿ ಗೈರು ಹಾಜರಾಗದೇ ತಪ್ಪದೇ ತರಬೇತಿಯಲ್ಲಿ ಪಾಲ್ಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲೆಯ ಪ್ರತಿ ವಿಧಾಸಭಾ ಕ್ಷೇತ್ರಗಳಲ್ಲಿ ಮಹಿಳಾ ಅಧಿಕಾರಿಗಳೇ ಇರುವ ತಲಾ 5 ರಂತೆ ಒಟ್ಟು 55 ಮತಗಟ್ಟೆ ಸ್ಥಾಪಿಸಲಾಗುತ್ತಿದ್ದು, ಇದಕ್ಕಾಗಿ 154 ಮಹಿಳೆಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರಲ್ಲದೆ ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ತೆರಳಿರುವ ಪಿಆರ್ಓ ಹಾಗೂ ಎಪಿಆರ್ಓಗಳು ಇಲಾಖಾ ಮುಖ್ಯಸ್ಥರ ಮೂಲಕ ಸಂಬಂಧಿಸಿದ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದಲ್ಲಿ ಮೌಲ್ಯಮಾಪನದಿಂದ ಮರಳಿದ ನಂತರ ಇವರಿಗೆ ಪ್ರತ್ಯೇಕವಾಗಿ ಚುನಾವಣಾ ತರಬೇತಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಅಲ್ಲದೆ ಪ್ರತಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಯುವ ಮತದಾರರಿಗಾಗಿ ತಲಾ 4 ರಂತೆ ಯುವ ಅಧಿಕಾರಿಗಳನ್ನೊಳಗೊಂಡ ಒಟ್ಟು 44 ಯುವ ಮತಗಟ್ಟೆ ಹಾಗೂ ವಿಕಲಚೇತನ ಮತದಾರರಿಗಾಗಿ ತಲಾ 4 ರಂತೆ ಒಟ್ಟು 44 ವಿಶೇಷ ಮತಗಟ್ಟೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಎನ್ಐಸಿ ಅಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!