ಕಾಂಗ್ರೆಸ್ ಪಕ್ಷಕ್ಕೆ ಅತೀಕ್ ಅಹಮದ್ ರಾಜಿನಾಮೆ

86

Get real time updates directly on you device, subscribe now.


ತುಮಕೂರು: ಪಕ್ಷದ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿದ್ದ ನನ್ನನ್ನು ಕನಿಷ್ಠ ಸೌಜನ್ಯಕ್ಕೂ ಯಾವೊಬ್ಬ ನಾಯಕರು ಭೇಟಿ ನೀಡಿ ಮಾತನಾಡಿಸುವ ಕೆಲಸ ಮಾಡದ ಕಾಂಗ್ರೆಸ್ ಮುಖಂಡರ ಮನಸ್ಥಿತಿ ಖಂಡಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನ ಎರಡಕ್ಕೂ ರಾಜಿನಾಮೆ ಸಲ್ಲಿಸಿರುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಾಜಿ ಶಾಸಕರೊಬ್ಬರು ರಾಜಿನಾಮೆ ಕೊಟ್ಟ ತಕ್ಷಣ ಜಿಲ್ಲಾ ಉಸ್ತುವಾರಿ ಮಯೂರ ಜಯರಾಮ್ ಸೇರಿದಂತೆ ಆನೇಕ ನಾಯಕರು ಅವರನ್ನು ಭೇಟಿ ಮಾಡಿ ಮನವೊಲಿಸುವ ಕೆಲಸ ಮಾಡಿದಿರಿ. ಆದರೆ ಕಳೆದ ಹತ್ತಾರು ವರ್ಷಗಳಿಂದ ಪಕ್ಷ ಕಟ್ಟಿದ ನನ್ನಗೆ ಮೋಸವಾಗಿರುವುದು ಗೊತ್ತಿದ್ದು, ಸೌಜನ್ಯಕ್ಕೂ ಭೇಟಿಯಾಗದಿರುವುದು ಟಿಕೆಟ್ ಸಿಗದಿರುವುದಕ್ಕಿಂತಲೂ ಹೆಚ್ಚು ಬೇಸರ ತರಿಸಿದೆ. ಪಕ್ಷಕ್ಕೆ ದುಡಿದವರ ಸ್ಥಿತಿಯೇ ಹೀಗಾದರೆ ಉಳಿದವರ ಪಾಡೇನು ಎಂಬ ಅಂಶ ನಮ್ಮ ಮನದಲ್ಲಿ ಕೊರೆಯುತ್ತಿದೆ. ಆ ನೋವನ್ನು ತುಂಬಾ ದಿನ ಹಿಡಿದಿಟ್ಟುಕೊಳ್ಳಲಾಗದೆ ಪಕ್ಷದ ಜಿಲ್ಲಾಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸುತ್ತಿರುವುದಾಗಿ ಅತೀಕ್ ಅಹಮದ್ ತಿಳಿಸಿದರು.

ತುಮಕೂರು ನಗರ ಕ್ಷೇತ್ರದಿಂದ ಟಿಕೆಟ್ ನೀಡಿರುವ ವ್ಯಕ್ತಿ ಅಲ್ಪಸಂಖ್ಯಾತರೇ ಆಗಿದ್ದರೂ ಪಕ್ಷ ಗೆಲ್ಲಬೇಕೆಂಬ ಉದ್ದೇಶದಿಂದ ಟಿಕೆಟ್ ನೀಡಿಲ್ಲ. ಬದಲಾಗಿ ಒಳಒಪ್ಪಂದ ಮಾಡಿಕೊಂಡು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಅಲ್ಪಸಂಖ್ಯಾತರೊಬ್ಬರಿಗೆ ಟಿಕೆಟ್ ನೀಡಲಾಗಿದೆ. ಈ ಒಳ ಒಪ್ಪಂದ ಜಾರಿಯಾಗಲು ಎಂದಿಗೂ ಅವಕಾಶ ನೀಡುವುದಿಲ್ಲ. ಈಗಾಗಲೇ ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಇತರರೊಂದಿಗೆ ಚರ್ಚಿಸಿ ತುಮಕೂರು ನಗರ ಕ್ಷೇತ್ರದಲ್ಲಿ ಒಳಒಪ್ಪಂದ ಊರ್ಜಿತವಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಿಂದೆ ಮುಂದೆ ಎಂದೆಂದಿಗೂ ನಮ್ಮ ನಾಯಕರು, ನಾನು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿ ಆಯ್ಕೆಯಾಗಲು ಅವರೆ ಕಾರಣ, ಟಿಕೆಟ್ ಸಿಗದೆ ನೊಂದಿದ್ದ ನನನ್ನು ಸೌಜನ್ಯಕ್ಕೂ ಮಾತನಾಡಿಸದಿರುವುದು ಬಹಳ ನೋವುಂಟು ಮಾಡಿದೆ. ಅವರ ಒಳ ಒಪ್ಪಂದ ಏನೇ ಇರಲಿ, ನನಗೂ ಮಾತು ಹೇಳಬಹುದಿತ್ತಲ್ಲವೇ? ಅವರು ನಾಯಕರಾಗಿ ಎತ್ತರಕ್ಕೆ ಬೆಳೆಯಲಿ. ನನ್ನಂತೆ ಇತರರಿಗೆ ನೋವುಂಟಾಗದಂತೆ ನೋಡಿಕೊಳ್ಳಲಿ ಎಂದು ನೋವು ತೋಡಿಕೊಂಡರು.
ಈ ವೇಳೆ ಬ್ಲಾಕ್ ಅಧ್ಯಕ್ಷ ಮಹಮದ್ ಷಫಿಕ್, ಉಪಾಧ್ಯಕ್ಷ ಸೈಯದ್ ಸಮೀಮ್, ಸುಹೇಲ್, ಬಷೀರ್ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!