ಗುಬ್ಬಿ: ವ್ಯಕ್ತಿ ಹೋಗುವುದರಿಂದ ಪಕ್ಷದ ಕಾರ್ಯಕರ್ತರು ಅವರ ಹಿಂದೆ ಹೋಗುತ್ತಾರೆ ಎಂಬುದು ಅವರ ಭ್ರಮ ನಿರಸನ ಎಂದು ಓಬಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಶಂಕರಣ್ಣ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಪಕ್ಷಕ್ಕೆ ಆಗಮಿಸಿದ ಕಾಡುಗೊಲ್ಲ ಸಮುದಾಯದ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಜಿ.ಎನ್.ಬೆಟ್ಟಸ್ವಾಮಿ ಅವರಿಗೆ ಪಕ್ಷ ಎಲ್ಲವೂ ನೀಡಿತ್ತು. ರಾಜ್ಯಮಟ್ಟದಲ್ಲಿ ಗುರುತಿಸಿತ್ತು, ಎಲ್ಲವನ್ನು ಅನುಭವಿಸಿ ಈಗ ಪಕ್ಷದ ನಾಯಕರ ವಿರುದ್ಧವೇ ಮಾತನಾಡಿ ಹೋಗಿದ್ದಾರೆ. ಹಾಗಾಗಿ ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ನಮ್ಮ ಪಕ್ಷ ಸದೃಢವಾಗಿದೆ. ಹಿಂದೆ ಪಕ್ಷ ಅವರಿಗೆ ಹೆಚ್ಚಿನ ಸ್ಥಾನಮಾನ ನೀಡಿತ್ತು. ಮುಂದೆಯೂ ನೀಡುತ್ತಿತ್ತು, ಅದನ್ನು ಕಳೆದುಕೊಂಡು ಹೋಗಿದ್ದವರಿಗೆ ಯಾವುದೇ ಬೆಲೆಯೂ ಇಲ್ಲ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಮಾತನಾಡಿ, ಇದೇ 20 ರಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎಸ್.ಡಿ.ದಿಲೀಪ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು , ನಮ್ಮ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಸಂಸದರು ಹಾಗೂ ಇನ್ನಿತರೆ ಮುಖಂಡರು ಆಗಮಿಸುತ್ತಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ನಾಮಪತ್ರವನ್ನು ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ನಾವೆಲ್ಲರೂ ಒಟ್ಟಿಗೆ ಇದ್ದೇವೆ, ಒಟ್ಟಾಗಿ ಸಾಗುತ್ತೇವೆ. ಬೆಟ್ಟಸ್ವಾಮಿಯವರು ನಮ್ಮಿಂದ ಹೊರ ಹೋಗಿದ್ದಾರೆ, ಆದರೆ ನಮ್ಮ ಕಾರ್ಯಕರ್ತರು ನಮ್ಮ ಜೊತೆಯಲ್ಲೇ ಇದ್ದಾರೆ. ಇನ್ನೂ ಚಂದ್ರಶೇಖರ್ ಬಾಬು ಅವರು ನಮ್ಮ ಜೊತೆಯಲ್ಲೇ ಇದ್ದು ಬಿಜೆಪಿ ಸಂಘಟನೆ ಹಾಗೂ ಗೆಲುವಿಗೆ ಶ್ರಮಿಸುತ್ತಾರೆ ಎಂದು ತಿಳಿಸಿದರು.
ಕೇಂದ್ರ ತೆಂಗು ಮತ್ತು ನಾರಿನ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಪಕ್ಷ ಅಧಿಕಾರ ಕೊಟ್ಟಾಗ ಒಂದು ತರ ಕೊಡದಿದ್ದಾಗ ಇನ್ನೊಂದು ತರ ಮಾತನಾಡುವುದು ಒಳ್ಳೆಯದಲ್ಲ. ಎರಡು ಬಾರಿ ಪಕ್ಷ ಹಿಂದುಳಿದ ಸಮುದಾಯಕ್ಕೆ ಟಿಕೆಟ್ ನೀಡಿತ್ತು. ಆಗ 50,000ಕ್ಕೂ ಹೆಚ್ಚು ಮತ ಪಡೆದಿದ್ದಾರೆ ಎಂದರೆ ಅದು ಕೇವಲ ಒಂದು ಸಮುದಾಯದಿಂದ ಮಾತ್ರವಲ್ಲ, ವೀರಶೈವ ಲಿಂಗಾಯತ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯದವರು ಮತ ಹಾಕಿದ್ದರಿಂದ ಮಾತ್ರ ನೀವು ಬೆಳೆದಿದ್ದು ಎಂಬುದನ್ನು ಮರೆಯಬಾರದು ಎಂದು ಬೆಟ್ಟಸ್ವಾಮಿ ಗೆ ಟಾಂಗ್ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಯಶೋಧಮ್ಮ ಮಾತನಾಡಿ ನಮ್ಮ ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸಲು ಹಾಗೂ ರಾಜ್ಯದಲ್ಲಿ ನಮ್ಮ ಕಾಡುಗೊಲ್ಲ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾನಮಾನ ನೀಡಿದ್ದು ಬಿಜೆಪಿ ಸರ್ಕಾರ, ಹಾಗಾಗಿ ನಮ್ಮ ಇಡೀ ಸಮುದಾಯ ಬಿಜೆಪಿ ಪಕ್ಷ ನೀಡಿರುವಂತಹ ಸಹಕಾರಕ್ಕೆ ಅವರ ಜೊತೆಯಲ್ಲಿ ಸಾಗುತ್ತೇವೆ ಎಂದು ತಿಳಿಸಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಪಕ್ಷ ಟಿಕೆಟ್ ನೀಡಿರುವುದು ಸರ್ವೆ ಮಾಡಿಸಿದ ಮೇಲೆ ನನಗೆ ನೀಡಿದೆ, ಬಿಜೆಪಿ ಪಕ್ಷವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಪಕ್ಷ ಅಲ್ಲವೇ ಅಲ್ಲ, ದೇಶದ ಎಲ್ಲ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿರುವ ಪಕ್ಷವಾಗಿದ್ದು, ಈ ಬಾರಿ ಗುಬ್ಬಿ ವಿಧಾನಸಭಾ ಕ್ಷೇತ್ರ ಎಲ್ಲರ ಸಹಕಾರದಿಂದ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುಡ್ಡದಹಳ್ಳಿ ಬಸವರಾಜು, ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಯತೀಶ್, ಗಂಗಣ್ಣ ಸೇರಿದಂತೆ ಕಾಡುಗೊಲ್ಲ ಸಮುದಾಯದ ಹಲವು ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.
Comments are closed.