ಕುಣಿಗಲ್: ತಾಲೂಕಿನಲ್ಲಿ ಲಿಂಗಾಯಿತರನ್ನು ಕಾಂಗ್ರೆಸ್ ನವರು ಮನಬಂದಂತೆ ಟೀಕೆ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೋಲಾರ ಇತರೆ ಕ್ಷೇತ್ರದಲ್ಲಿ ಲಿಂಗಾಯಿತ ಅಭ್ಯರ್ಥಿ ಇದ್ದರೂ ಕಡೆಗಣಿಸುತ್ತಿದ್ದಾರೆ. ಲಿಂಗಾಯಿತ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಮಾಡಿಕೊಳ್ಳುವುದು ಸರಿಯಲ್ಲ. ಸಮುದಾಯದ ಕಷ್ಟಕ್ಕೆ ಬಿಜೆಪಿ ಪಕ್ಷದ ಮುಖಂಡರು ಸ್ಪಂದಿಸಬೇಕೆಂದು ಲಿಂಗಾಯತ ಮುಖಂಡರು ಪಕ್ಷದ ಪ್ರಮುಖರ ಮುಂದೆ ಅಸಮಾಧಾನ ತೋಡಿಕೊಂಡರು.
ಪಟ್ಟಣದ ಖಾಸಗಿ ಸಮುದಾಯಭವನದಲ್ಲಿ ಕೇಂದ್ರಸಚಿವ ಭಗವಂತ ಖೂಬಾ, ಸಂಸದ ಜಿ.ಎಸ್.ಬಸವರಾಜು ಬಿಜೆಪಿ ನೇತೃತ್ವದಲ್ಲಿ ಆಯೋಜಿಸಲಾದ ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಸಮುದಾಯದ ಮುಖಂಡರಾದ ರುದ್ರೇಶ್, ಸಿದ್ದಲಿಂಗಪ್ರಭು ಇತರರು ಮೇಲಿನಂತೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಮುಂದಿನ ದಿನಗಳಲ್ಲಿ ಲಿಂಗಾಯಿತರ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆಗೆ ಪಕ್ಷ ಸ್ಪಂದಿಸಬೇಕು. ಇದರ ಜೊತೆಯಲ್ಲಿ ಚುನಾವಣೆಗಳಲ್ಲಿ ಸಮುದಾಯದ ರಕ್ಷಣೆಗೆ ನಿಲ್ಲುವವರ ಪರವಾಗಿ ಮತ ಚಲಾವಣೆಗೆ ಸಮುದಾಯ ಸಂಘಟಿತರಾಗ ಬೇಕಿದೆ. ತಾಲೂಕಿನಲ್ಲಿ ಸಮುದಾಯದ ಮುಖಂಡರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ನ ಕೆಲವರು ಟೀಕೆ ಮಾಡುತ್ತಾ ಬೆದರಿಕೆ ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗೆ ಹೋದರೆ ಸಮುದಾಯಕ್ಕೆ ರಕ್ಷಣೆ ಯಾರು ಎಂದು ಹೇಳಿದರು.
ಮುಖಂಡರನ್ನುದ್ದೇಶಿಸಿ ಮಾತನಾಡಿದ ಕೇಂದ್ರಸಚಿವ ಭಗವಂತ ಖೂಬಾ, ಬಿಜೆಪಿಯು ಲಿಂಗಾಯಿತ ಸಮುದಾಯಕ್ಕೆ ಹೆಚ್ಚಿನ ಮನ್ನಣೆ ನೀಡಿದೆ, ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಿ, ಯಡಿಯೂರಪ್ಪ ಸೇರಿದಂತೆ ಹಲವಾರು ಮುಖಂಡರಿಗೆ ಮನ್ನಣೆ ನೀಡಿದೆ. ತಾಲೂಕಿನಲ್ಲಿನ ಸಮುದಾಯದ ಮುಖಂಡರು ತಮ್ಮ ಕೆಲಸ ತಾವು ಮಾಡಿಕೊಂಡು ಸುಮ್ಮನಿದ್ದರೆ ಸಾಲದು, ಸಮುದಾಯದ ರಕ್ಷಣೆಗೆ ನಿಲ್ಲುವ ಪಕ್ಷಕ್ಕೆ ಬೆಂಬಲಿಸಬೇಕು ಎಂದರು.
ಸಂಸದ ಜಿ.ಎಸ್.ಬಸವರಾಜು ತಾಲೂಕಿನಲ್ಲಿ ಮೂವರು ಒಂದೆ ಜನಾಂಗದವರಾಗಿದ್ದು, ನಮ್ಮ ಸಮುದಾಯವನ್ನು ಬೆಂಬಲಿಸುವ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತನೀಡಿ ಗೆಲ್ಲಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ತಾಲೂಕು ಚುನಾವಣೆ ಉಸ್ತುವಾರಿ ನಾಗೇಂದ್ರ ಶರ್ಮ, ಮುಖಂಡರಾದ ಕಿರಣಕುಮಾರ್, ಬಸವರಾಜು, ಆರಾಧ್ಯ ಇತರರು ಇದ್ದರು.
Comments are closed.