ತುಮಕೂರು: ಶ್ರೀಭಗೀರಥರು ಸತತ ಪ್ರಯತ್ನದಿಂದ ಗಂಗೆಯನ್ನು ಭೂಮಿಗೆ ತಂದಂತಹ ಧೀಮಂತರು, ನಾವು ಇಂದಿಗೂ ಯಾವುದೇ ಒಂದು ಕೆಲಸವನ್ನು, ಅಸಾಧಾರಣ ಸಾಧನೆಯನ್ನು ಭಗೀರಥ ಪ್ರಯತ್ನವೆಂದೇ ಉದಾಹರಿಸುವುದು ವಾಡಿಕೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಉಪ್ಪಾರ ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಉಪ್ಪಾರ ಸಮಾಜದ ಬಂಧುಗಳು ಸಮಾಜದ ಏಳಿಗೆಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮುಖೇನ, ಹಾಸ್ಟೆಲ್ ಗಳನ್ನು ನಿರ್ಮಿಸುವ ಮುಖೇನ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವುದರ ಮುಖೇನ ಎಲ್ಲಾ ಬಂಧುಗಳನ್ನು ಸುಶಿಕ್ಷಿತರನ್ನಾಗಿ ರೂಪಿಸಬೇಕು. ಇಂತಹ ಕೆಲಸ, ಸಾಧನೆ ರೂಪುಗೊಂಡಲ್ಲಿ ಜಯಂತಿ ಆಚರಣೆಗಳು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್ ಮಾತನಾಡಿ, ಭಗೀರಥರು ಇಕ್ಷ್ವಾಕು ವಂಶದಲ್ಲಿ ರಾಜಕುಮಾರನಾಗಿ ಜನಿಸಿದರು. ತನ್ನ ಪೂರ್ವಜರ ಭೀಕರ ಅಂತ್ಯ ತಿಳಿದು ಅವರಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ತನ್ನ ಕಠಿಣ ಶ್ರಮದಿಂದ ಗಂಗೆಯನ್ನು ಭೂಮಿಗೆ ಕರೆ ತಂದರು, ಇಂತಹ ಧೀಮಂತರ ಸಾಧನೆಯನ್ನು ಸಮಾಜಕ್ಕೆ , ಮುಂದಿನ ಪೀಳಿಗೆಗೆ ತಿಳಿಸಲು ಈ ಜಯಂತಿ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ತಿಳಿಸಿದರು.
ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಶ್ರೀನಿವಾಸ್ ಮಾತನಾಡಿ, ಸರ್ಕಾರ ಭಗೀರಥರ ಸಾಧನೆಗಳನ್ನು ಸಮಾಜಕ್ಕೆ ಪುನರ್ ನೆನಪಿಸುವ ಉದ್ದೇಶದಿಂದ ಹಾಗೂ ಉಪ್ಪಾರ ಜನಾಂಗವು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವ ಸದುದ್ದೇಶದಿಂದ ಈ ಜಯಂತಿ ಕಾರ್ಯಕ್ರಮ ರೂಪಿಸಿರುತ್ತದೆ. ಸರ್ಕಾರದ ಆಶಯದಂತೆ ಜನಾಂಗದ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಿ ಭವಿಷ್ಯದ ಸತ್ ಪ್ರಜೆಗಳಾಗಿ ರೂಪಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಅವರು ಜಯಂತಿಯ ಶುಭಾಶಯ ತಿಳಿಸುತ್ತಾ, ಸರ್ಕಾರದ ನಿರ್ದೇಶನದಂತೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಹಾಗೂ ಮತದಾನಕ್ಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಅಂಶವನ್ನು ಎಲ್ಲರಿಗೆ ಮನವರಿಕೆ ಮಾಡಿಕೊಟ್ಟರು. ಮೇಲ್ವಿಚಾರಕರಾದ ಡಿ.ವಿ. ಸುರೇಶ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿದೂ ಭಾರತೀಯ ಚುನಾವಣಾ ಆಯೋಗದ ಪ್ರತಿಜ್ಞಾವಿಧಿ ಭೋದಿಸಿದರು.
ಜಿಲ್ಲಾ ಪಶು ವೈದ್ಯಕೀಯ ಇಲಾಖೆಯ ವೈದ್ಯಾಧಿಕಾರಿ ಡಾ.ನಾಗೇಶ್, ಉಪ್ಪಾರ ಜನಾಂಗದ ಮುಖಂಡರಾದ ಆರ್.ರೇಣುಕಯ್ಯ, ಹೆಚ್.ಆರ್.ಸತೀಶ್, ಗಂಗಪ್ಪ, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ವಕೀಲ ಎನ್.ಅನಿಲ್ ಕುಮಾರ್, ಹೆಚ್.ಕೆ.ಶಿವಣ್ಣ, ರಂಗನಾಥ್, ಲೋಕೇಶ್, ಧರ್ಮರಾಜು, ಲಿಂಗಣ್ಣ ಮತ್ತು ಮೂಡಲಗಿರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಬಿ.ಆರ್.ರಾಜೇಗೌಡ, ಎನ್.ರಮೇಶ್, ಬಿ.ಕೆ.ರಾಜೇಶ್, ಆರ್. ಎನ್.ಮೇಘನಾ ಮತ್ತು ಎಸ್.ಎನ್.ದರ್ಶನ್ ಮೊದಲಾದವರು ಹಾಜರಿದ್ದರು.
Comments are closed.