ತುರುವೇಕೆರೆ: ಮಸಾಲ ಜಯರಾಮ್ ಮತ್ತೆ ಗೆದ್ದರೆ ತುರುವೇಕೆರೆಗೆ ಮಂತ್ರಿ ಸ್ಥಾನ ಒಲಿಯಲಿದೆ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ದುಂಡ ಗ್ರಾಮದಲ್ಲಿ ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಶಾಸಕ ಮಸಾಲ ಜಯರಾಮ್ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ನೋಡಿದರೆ ಅತ್ಯಂತ ಸಂತಸವಾಗುತ್ತದೆ. ಅಭಿವೃದ್ಧಿ ಪರ ಚಿಂತನೆಯುಳ್ಳ ಮಸಾಲ ಜಯರಾಮ್ ಅವರನ್ನು 25 ಸಾವಿರಕ್ಕೂ ಅತ್ಯಧಿಕ ಮತಗಳಿಂದ ಗೆಲ್ಲಿಸಲು ಕಾರ್ಯಕರ್ತರು ಹೋರಾಟ ಮಾಡಿ, ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ದೂರ ದೃಷ್ಟಿ ಚಿಂತನೆಯ ಫಲವಾಗಿ ದೇಶದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂಬುದನ್ನು ಮರೆಯಬಾರದು ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಈ ಹಿಂದೆ ರಾಜ್ಯವನ್ನಾಳಿದ ಕಾಂಗ್ರೆಸ್ ಕೇವಲ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಇನ್ನೊಂದೆಡೆ ಜೆಡಿಎಸ್ ಕುಟುಂಬ ರಾಜಕಾರಣ ಮಾಡುವ ಮೂಲಕ ಜನಹಿತ ಮರೆತಿತ್ತು ಎಂಬುದು ನಿಮಗೆಲ್ಲಾ ತಿಳಿದಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರಕಾರ ಹತ್ತು ಹಲವು ಯೋಜನೆ ಜಾರಿಗೆ ತಂದು ಸರ್ವ ಜನರ ಹಿತ ಕಾಪಾಡಿದೆ. ತುರುವೇಕೆರೆ ಕ್ಷೇತ್ರದಿಂದ ಮಸಾಲ ಜಯರಾಮ್ ಅವರನ್ನು ಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸಿ, ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಶಾಸಕ ಮಸಾಲ ಜಯರಾಮ್ ಮಾತನಾಡಿ, ನಾನು ಯಡಿಯೂರಪ್ಪನವರ ಆಶೀರ್ವಾದದಿಂದಲೇ ಶಾಸಕನಾಗಿದ್ದು, ನಾನು ಇನ್ನು ಹತ್ತು ಜನ್ಮ ಎತ್ತಿದರೂ ಅವರ ಋಣ ತೀರಿಸಲಾಗುವುದಿಲ್ಲ. ಈ ಬಾರಿಯೂ ಅವರ ಆಶೀರ್ವಾದದಿಂದಲೇ ಮತ್ತೆ ಶಾಸಕನಾಗುತ್ತೇನೆ. ವೀರಶೈವ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳು ನನ್ನ ಜೊತೆಯಲ್ಲಿದ್ದು ಮತ್ತೆ ಶಾಸಕನಾಗಿ ಅವರ ಸೇವೆ ಮಾಡುವೆ, ಈಗಾಗಲೇ 1500 ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೆ ಶಾಸಕನಾಗಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವೆ ಎಂಬ ಆಶಯ ವ್ಯಕ್ತಪಡಿಸಿದರು.
ಈ ವೇಳೆ ಸಂಸದ ಜಿ.ಎಸ್.ಬಸವರಾಜು, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮೃತ್ಯುಂಜಯ, ಮಾಜಿ ಶಾಸಕ ನಂಜೇಗೌಡ, ಜಿಪಂ ಮಾಜಿ ಸದಸ್ಯ ಉಗ್ರಯ್ಯ, ವೀರಶೈವ ಸಮಾಜದ ಮುಖಂಡ ಕುಮಾರಸ್ವಾಮಿ, ನಿಕಟ ಪೂರ್ವ ಮಂಡಲಾಧ್ಯಕ್ಷ ದುಂಡ ರೇಣುಕಯ್ಯ, ಗ್ರಾಪಂ ಸದಸ್ಯ ನವೀನ್ ಮತ್ತಿತರಿದ್ದರು.
Comments are closed.