ತುಮಕೂರು: ಜಗದೀಶ್ ಶೆಟ್ಟರ್ ರನ್ನು ಮುಗಿಸಲು ಯಡಿಯೂರಪ್ಪ ಹೊರಟಿರುವುದು ಹಾಸ್ಯಾಸ್ಪದ, 2005-06 ರಲ್ಲಿ ಇದೇ ಯಡಿಯೂರಪ್ಪ ನಮ್ಮ ಬಳಿಗೆ ಬಂದು ಮಂತ್ರಿ ಪದವಿ ಕೇಳಿದ್ದು ಸುಳ್ಳಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಪ್ರಶ್ನಿಸಿದರು.
ತುಮಕೂರಿನಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಷಫಿ ಅಹಮದ್ ಮತ್ತು ಬೆಂಬಲಿಗರು ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್, ಬಿಜೆಪಿಯವರು ಹಿಂದುಳಿದವರ ಮುಗ್ದತೆಯನ್ನ ದುರುಪಯೋಗ ಮಾಡಿಕೊಂಡು ಮತ ಕೇಳುತ್ತಿದ್ದಾರೆ, ಇವರ ಬಗ್ಗೆ ಎಚ್ಚರ ವಹಿಸಿ ಎಂದರು.
ರಾಜ್ಯದ ಕಲ್ಯಾಣಕ್ಕಾಗಿ ಪಂಚರತ್ನ ಯೋಜನೆ ಹಾಕಿಕೊಂಡಿದ್ದೇನೆ. ನನ್ನ ಕೈ ಬಲಪಡಿಸಿ, ನಾನು ರಾಜ್ಯದ ಅಭಿವೃದ್ಧಿ ಮಾಡಿ ತೋರಿಸುವೆ ಎಂದರು.
ಮೂರು ದಿನಕ್ಕೆ ಒಂದು ಮನೆ ಕಟ್ಟುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಭಾಷಣ ಮಾಡುತ್ತಾರೆ. ಅದು ಎಲ್ಲಿ ಕಟ್ಟಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿ ರಾಜ್ಯಕ್ಕೆ ಯೋಗಿ, ಮೋದಿ, ನಡ್ಡಾ ಸೇರಿ ಹಲವರು ಬಂದು ರೋಡ್ ಶೋ ಮಾಡುತ್ತಿದ್ದಾರೆ. ಮಂಡ್ಯಕ್ಕೂ ಮೋದಿಗೂ ಏನು ಸಂಬಂಧ, ಬುಲ್ಡೋಜರ್ ಯೋಗಿಯಿಂದ ರಾಜ್ಯದ ಜನರಿಗೆ ಏನು ಉಪಯೋಗ ಎಂದು ಪ್ರಶ್ನಿಸಿದರು.
ಮೀಸಲಾತಿ ಹೆಸರಲ್ಲಿ ಬಿಜೆಪಿ ರಾಜ್ಯದ ಜನರನ್ನು ಮೋಸ ಮಾಡುತ್ತಿದೆ. ರಾಷ್ಟ್ರೀಯ ಪಕ್ಷಗಳು ಜನರನ್ನು ವಂಚಿಸುತ್ತಿವೆ, ಈ ಬಗ್ಗೆ ಜನರು ಎಚ್ಚರ ವಹಿಸಬೇಕು ಎಂದರು.
ಜೆಡಿಎಸ್ ನೂರಾ ಇಪ್ಪತ್ತು ಸೀಟು ಗಳಿಸುವ ವಿಶ್ವಾಸ ಇದೆ. ರಾಜದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಜನರು, ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ, ತುಮಕೂರು ಜಿಲ್ಲೆಯಲ್ಲಿ ಹನ್ನೊಂದು ಸ್ಥಾನ ಗೆಲ್ಲಲಿದ್ದೇವೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಜೆಡಿಎಸ್ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಾನು ರೈತರ ಸಾಲ ಮನ್ನಾ ಮಾಡಿದೆ. ಅಲ್ಲಿ ನಾನು ಯಾವುದೇ ಪರ್ಸೆಂಟೇಜ್ ಪಡೆಯಲಿಲ್ಲ. ರಾಜ್ಯದ ಅಭಿವೃದ್ಧಿ ಗಾಗಿ ಜೆಡಿಎಸ್ ಗೆ ಮತ ನೀಡಿ, ನಮಗೆ ನಿಮ್ಮ ಆಶೀರ್ವಾದ ಇರಲಿ ಎಂದರು.
ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವವರಿದ್ದಾರೆ, ದೇವೇಗೌಡರು ಎಂದು ಜಾತಿ ರಾಜಕಾರಣ ಮಾಡಲಿಲ್ಲ. ಜೆಡಿಎಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ದೇವೇಗೌಡರು ಜಗ್ಗದೆ, ಕುಗ್ಗದೆ ಪಕ್ಷ ಕಟ್ಟಿದ್ದಾರೆ. ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ ಮೊದಲ ಕನ್ನಡಿಗ, ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಯಾಕೆ ಕೆಳಗಿಸಿದ್ರಿ ಹೇಳಿ ರಾಹುಲ್ ಗಾಂಧಿ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಏರ್ ಇಂಡಿಯಾ ಮಾರಿದ್ದಾರೆ, ನಾನು ವಿಮಾನಯಾನ ಸಚಿವನಾಗಿದ್ದಾಗ ಐವತ್ತು ಕೋಟಿ ಲಾಭ ಮಾಡಿದ್ದೆ, ಆದರೆ ದೇಶವನ್ನೇ ಮಾರುವ ಸ್ಥಿತಿಗೆ ತಂದಿದ್ದಾರೆ ಎಂದರು.
ದೊಡ್ಡ ಗಿಡ ಕತ್ತರಿಸಿ ಚಿಕ್ಕ ಗಿಡ ನೆಡೋದು ಕಾಂಗ್ರೆಸ್ ಸಂಸ್ಕೃತಿ, ಜಾರ್ಫ ಷರೀಫ್, ಗುಲಾಮ್ ನಬಿ ಅಜಾದ್ ರಂತವರನ್ನೇ ಬಿಡಲಿಲ್ಲ. ಷಫಿ ಅಹಮದ್ ಯಾವ ಲೆಕ್ಕ ಕಾಂಗ್ರೆಸ್ ನವರಿಗೆ ಎಂದು ಕಿಡಿಕಾರಿದರು.
ಜೆಡಿಎಸ್ ರೈತರ ಪಕ್ಷ, ಒಂದು ಬೀಜ ಬಿತ್ತಿ ನೂರು ಗಿಡ ಬೆಳೆಸುತ್ತೆ, ಕಾಂಗ್ರೆಸ್, ಬಿಜೆಪಿ ಯಾರನ್ನು ಬೆಳೆಸಲ್ಲ. ಬಿಜೆಪಿ ಇಂದು ಬಿಜೆಪಿಯಾಗಿ ಉಳಿದಿಲ್ಲ ಎಂದರು.
ಪಂಜಾಬ್ ನಲ್ಲಿ ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟಿದ್ದಾರೆ. ಇಂಥ ದೇವೇಗೌಡರನ್ನು ತುಮಕೂರಿನಲ್ಲಿ ಚುನಾವಣೆಗೆ ನಿಲ್ಲಿಸಿ ಬೆನ್ನಿಗೆ ಚೂರಿ ಹಾಕಿದರು. ಜೆಡಿಎಸ್ ನಲ್ಲಿ ಸ್ಥಾನ ಇಲ್ಲದಿದ್ದರೂ ಮಾನ ಇದೆ. ಕಾಂಗ್ರೆಸ್ ನಲ್ಲಿ ಸ್ಥಾನವೂ ಇಲ್ಲ, ಮಾನವೂ ಇಲ್ಲ ಎಂದು ಹೇಳಿದರು.
ಶಾಸಕ ಗೌರಿಶಂಕರ್, ಮಾಜಿ ಶಾಕರಾದ ಸುಧಾಕರ್ ಲಾಲ್, ಎಂ.ಟಿ.ಕೃಷ್ಣಪ್ಪ, ಡಿ.ನಾಗರಾಜಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಗೋವಿಂದರಾಜು, ಮಾಜಿ ಶಾಸಕ ಷಫಿ ಅಹಮದ್ ಇತರರು ಇದ್ದರು.
Comments are closed.