ಡಾ.ರಂಗನಾಥ್ ಸೋತು ಮಂತ್ರಿಯಾಗಲಿ: ಬಿಬಿಆರ್

130

Get real time updates directly on you device, subscribe now.


ಕುಣಿಗಲ್: ತಾಲೂಕಿನ ಅನನುಭವಿ ಶಾಸಕರು ಚುನಾವಣೆ ಪ್ರಚಾರದಲ್ಲಿ ತಮಗೆ ಸಹಕಾರ ನೀಡದವರ ಕುರಿತಾಗಿ ತಾವು ಸೋತರು ಮಂತ್ರಿಯಾಗಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಧಮಕಿ ಹಾಕುತ್ತಿದ್ದಾರೆ. ಹಾಗಾದರೆ ಅವರು ಸೋತು ಮಂತ್ರಿಯಾಗಲಿ ಎಂದು ಮಾಜಿ ಶಾಸಕ, ಸ್ವತಂತ್ರ ಅಭ್ಯರ್ಥಿ ಬಿ.ಬಿ.ರಾಮಸ್ವಾಮಿಗೌಡ ಹೇಳಿದರು.

ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಅನನುಭವಿ ಶಾಸಕರು ರಾಜ್ಯಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ತಾನೂ ತಾಲೂಕಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಚುನಾವಣೆ ಪ್ರಚಾರದಲ್ಲಿ ತಮಗೆ ಸಹಕಾರ ನೀಡದವರಿಗೆ ತಾವು ಸೋತರು ಮಂತ್ರಿ, ಗೆದ್ದರೂ ಮಂತ್ರಿ ಎಂದು ಹೇಳಿಕೊಂಡು ತಾವು ಮಂತ್ರಿಯಾದ ನಂತರ ನೋಡಿಕೊಳ್ಳುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಇವರು ಹೀಗೆ ಹೇಳಿಕೊಂಡಾಗ ಚುನಾವಣೆಯಲ್ಲಿ ಸೋತು ಮಂತ್ರಿಯಾಗಲಿ. ಇನ್ನೊಬ್ಬರಿಗೆ ಶಾಸಕರಾಗಲು ಅವಕಾಶ ನೀಡಲಿ, ಆಗ ತಾಲೂಕಿಗೆ ಒಬ್ಬ ಸಂಸದ, ಸೋತಂತಹ ಮಂತ್ರಿಯಾದವರು ಹಾಗೂ ಶಾಸಕರಾಗಿ ಆಯ್ಕೆಯಾದವರು ಕ್ಷೇತ್ರ ಪ್ರತಿನಿಧಿಸಿ ತಾಲೂಕು ಅಭಿವೃದ್ಧಿ ಮಾಡುತ್ತಾರೆ. ಅನನುಭವಿ ಶಾಸಕನ ವರ್ತನೆ ಮತದಾರರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡುತ್ತಾರೆ ಎಂದರು.

ತಾಲೂಕಿನಲ್ಲಿ ಕೆಲ ಅಭ್ಯರ್ಥಿಗಳು ಮತಯಾಚನೆ ಮಾಡಿ ಮತಬೇಟೆ ಮಾಡುವುದು ಬಿಟ್ಟು ಮತ ಖರೀದಿಗೆ ಮುಂದಾಗಿರುವುದು ಪ್ರಜಾ ಪ್ರಭುತ್ವ ವ್ಯವಸ್ಥೆಯ ಅಣಕ ಮಾಡುವಂತಾಗಿದೆ. ಚುನಾವಣೆ ಕರ್ತವ್ಯಕ್ಕೆ ನಿಲ್ಲುವಂತಹ ಕೆಲ ಅಧಿಕಾರಿಗಳ ಮತಗಳನ್ನೆ ಖರೀದಿ ಮಾಡುವ ಮಟ್ಟಕ್ಕೆ ಇಂದು ರಾಜಕಾರಣಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ವಿದ್ಯಾವಂತರು, ಬುದ್ಧಿವಂತರ ಮತಗಳೆ ಮಾರಾಟವಾಗುವ ಹಂತಕ್ಕೆ ಬಂದಿರುವುದು ಯಾವುದರ ಸಂಕೇತವಾಗಿದೆ ಎಂಬುದನ್ನು ಎಲ್ಲರೂ ಚಿಂತಿಸಬೇಕಾದ ವಿಷಯ, ತಾಲೂಕಿನಲ್ಲಿ ಕೆಲ ಅಭ್ಯರ್ಥಿಗಳು ದಲಿತರು, ಮುಸ್ಲಿಂರ ಮತಗಳನ್ನು ಒಟ್ಟಾಗಿ ಖರೀದಿ ಮಾಡುತ್ತೇವೆ ಎಂಬ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ದಲಿತ, ಮುಸ್ಲಿಂ ಮತದಾರರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು, ತಮ್ಮ ಜನಾಂಗದ ಸ್ವಾಭಿಮಾನಕ್ಕಾದರೂ ತಮ್ಮ ಮತ ಮಾರಾಟಕ್ಕಿಲ್ಲ ಎಂಬ ಸಂದೇಶ ನೀಡಬೇಕಿದೆ. ಜನಾಂಗಗಳ ಮತ ಖರೀದಿಯಂತಹ ವಿಷಯ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಮತಬೇಟೆ, ಮತಯಾಚನೆ ನ್ಯಾಯಯೋಚಿತವಾಗಿ ಮಾಡಬೇಕಿದೆ. ಆದರೆ ಅಕ್ರಮ ಹಣದಿಂದ ಜನಾಂಗದವರ ಮತ ಖರೀದಿ ಮಾಡುತ್ತೇವೆ ಎಂದು ಓಡಾಡುತ್ತಿರುವ ಅಭ್ಯರ್ಥಿಗಳು ಅವರಿಗೆ ಮತದಾರರ ಸರಬರಾಜು ಮಾಡುವ ಗುತ್ತಿಗೆದಾರರಂತಹ ಮಧ್ಯವರ್ತಿಗಳ ಬಗ್ಗೆ ಮತದಾರರು ಜಾಗೃತರಾಗಬೇಕು. ಮತಕ್ಕೆ ಬೆಲೆ ಕಟ್ಟಲಾಗದು, ಅದು ನ್ಯಾಯೋಚಿತವಾಗಿ ಮೌಲ್ಯರಹಿತವಾಗಿ ಅರ್ಹ ವ್ಯಕ್ತಿಗೆ ಮತ ಚಲಾವಣೆಯಾದಾಗ ಮಾತ್ರ, ಮತಗಳ ಮೌಲ್ಯದ ಬಗ್ಗೆ ಪ್ರಜ್ಞಾವಂತ ನಾಗರಿಕರು ಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಮತ ಮಾರಾಟಕ್ಕಲ್ಲ ಎಂಬುದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಮಾಜಿ ಶಾಸಕನಾಗಿ ತಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮುಂದೆ ಮಾಡಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ನಿಂತಿದ್ದು, ಯಾರೊ ಒಬ್ಬರನ್ನು ಸೋಲಿಸಲು ಕಣದಲ್ಲಿ ಅಭ್ಯರ್ಥಿಯಾಗಿ ಉಳಿದಿಲ್ಲ, ಕಣದಲ್ಲಿ ಇರುವ ಏಳು ಮಂದಿಯನ್ನು ಸೋಲಿಸಿ ಶಾಸಕನಾಗಿ ಶುದ್ಧಹಸ್ತ ,ಸ್ವಚ್ಛ ಆಡಳಿತ ನೀಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧವಾಗಿ ಕಾರ್ಯ ನಿರ್ವಹಿಸಲು ಕಣದಲ್ಲಿದ್ದೇನೆ. ಮತದಾರರು ಸಹಕಾರ ನೀಡಿ, ಆಸೆ ಆಮಿಷಗಳಿಗೆ ಮತ ಮಾರಾಟ ಮಾಡಿಕೊಳ್ಳದೆ, ತಮ್ಮನ್ನು ಬೆಂಬಲಿಸಬೇಕೆಂದರು. ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವಣ್ಣಗೌಡ, ಶ್ರೀನಿವಾಸಗೌಡ, ರಾಜಣ್ಣ, ಜಗದೀಶ್, ಹೇರೂರು ಶಂಕರ್, ಕೇಶವ ಇತರರು ಇದ್ದರು

Get real time updates directly on you device, subscribe now.

Comments are closed.

error: Content is protected !!