ಜ್ಯೋತಿ ಗಣೇಶ್ ಗೆಲುವು ತಪ್ಪಿಸಲು ಸಾಧ್ಯವಿಲ್ಲ

ತುಮಕೂರು ಬಿಜೆಪಿ ಅಭ್ಯರ್ಥಿ ನಾನೇ ಅಂದ್ಕೊಳ್ಳಿ: ಯಡಿಯೂರಪ್ಪ

118

Get real time updates directly on you device, subscribe now.


ತುಮಕೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ತುಮಕೂರು ನಗರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಭಾವಿಸಿ ಒಗ್ಗಟ್ಟಿನಿಂದ ಮತದಾನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ವೀರಶೈವ ಸಮಾಜದ ಮುಖಂಡರಲ್ಲಿ ಮನವಿ ಮಾಡಿದರು.

ತುಮಕೂರಿನ ವಿಶಾಲಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ತಮಕೂರು ವೀರಶೈವ ಸಮಾಜದ ಮುಖಂಡರ ಪ್ರತ್ಯೇಕ ಸಭೆ ನಡೆಸಿದ ಯಡಿಯೂರಪ್ಪ, ಜ್ಯೋತಿ ಗಣೇಶ್ ಗೆಲುವು ನನ್ನ ಸ್ವಾಭಿಮಾನದ ವಿಷಯವಾಗಿದೆ. ನಾನೇ ತುಮಕೂರು ಅಭ್ಯರ್ಥಿ ಎಂದು ಭಾವಿಸಿ ಜ್ಯೋತಿ ಗಣೇಶ್ ಪರವಾಗಿ ನಿಲ್ಲಬೇಕು. ವೀರಶೈವ- ಲಿಂಗಾಯಿತ ಸಮಾಜದ ಮುಖಂಡರು, ಮತದಾರರು ಯಾವುದೇ ಗೊಂದಲಕ್ಕೆ ಒಳಗಾಗದೆ ಒಗ್ಗಟ್ಟಿನಿಂದ ಸಹಕಾರ ನೀಡಿ, ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಜ್ಯೋತಿ ಗಣೇಶ್ ಅವರು ಸ್ಮಾರ್ಟ್ ಸಿಟಿಯನ್ನು ದೇಶದಲ್ಲಿ 7ನೇ ಸ್ಥಾನ, ರಾಜ್ಯದಲ್ಲೇ ನಂಬರ್ 1 ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನದ ಹಿಂದೆ ಅವರ ಶ್ರಮ ದೊಡ್ಡದಿದೆ. ಸ್ಮಾರ್ಟ್ ಸಿಟಿ ಹೊರತಾಗಿಯೂ ನೂರಾರು ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸುಶಿಕ್ಷಿತ, ಸಜ್ಜನರಾದ ಜ್ಯೋತಿ ಗಣೇಶ್ ಅವರನ್ನು ಭಾರಿ ಅಂತರದಲ್ಲಿ ಗೆಲ್ಲಿಸಬೇಕು. ಇದು ನನ್ನ ಗೌರವದ ಪ್ರಶ್ನೆ ಎಂದರು.
ಬಿಜೆಪಿ ಅಭ್ಯರ್ಥಿ, ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮತ್ತು ವೀರಶೈವ ಸಮಾಜದ ಮುಖಂಡರು, ಸಮಾಜದ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿದ್ದರು.

ವಿಜಯೋತ್ಸವಕ್ಕೆ ನಾನೇ ಬರುವೆ
ಬಳಿಕ ಶೆಟ್ಟಿಹಳ್ಳಿ ಮುಖ್ಯರಸ್ತೆ ಹಾಗೂ ಎಸ್.ಎಸ್.ಪುರಂ ಮುಖ್ಯರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಯಡಿಯೂರಪ್ಪ ಅವರು, ಜ್ಯೋತಿಗಣೇಶ್ ಅವರಿಗೆ ಎಲ್ಲರೂ ಬೆಂಬಲ ನೀಡಿ 15-20 ಸಾವಿರ ಲೀಡ್ ನಲ್ಲಿ ಗೆಲ್ಲಿಸಬೇಕು. ಜ್ಯೋತಿ ಗಣೇಶ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಿಜಯೋತ್ಸವಕ್ಕೆ ನಾನೇ ಬರುತ್ತೇನೆ. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಮಂಗಳವಾರದ ಪ್ರಚಾರ ವಿವರ
ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ತುಮಕೂರು ನಗರದ 31 ಹಾಗೂ 32ನೇ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅವರು ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಬಳಿಕ 9 ಗಂಟೆಯಿಂದ 4ನೇ ವಾರ್ಡ್ ವ್ಯಾಪ್ತಿಯ ಚಿಕ್ಕಪೇಟೆ ಕೊಲ್ಲಾಪುರದಮ್ಮ ದೇವಸ್ಥಾನದಿಂದ ಆರಂಭಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರೊಂದಿಗೆ ಮನೆಮನೆಗೆ ತೆರಳಿ ಮತಯಾಚನೆ ನಡೆಯಲಿದೆ. ಬಳಿಕ ಕೇಂದ್ರ ಸಚಿವ ಮುರುಗನ್ ಅವರೊಂದಿಗೆ ಪರಿಶಿಷ್ಟ ಸಮೂದಾಯದ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಯಲಿದೆ.

Get real time updates directly on you device, subscribe now.

Comments are closed.

error: Content is protected !!