ಅಪ್ಪ, ಮಗ ತುಮಕೂರನ್ನು ಹಾಳು ಮಾಡಿದ್ದಾರೆ

ಶಾಸಕ ಜ್ಯೋತಿಗಣೇಶ್, ಸಂಸದ ಬಸವರಾಜು ವಿರುದ್ಧ ಸೊಗಡು ಕಿಡಿ

155

Get real time updates directly on you device, subscribe now.


ತುಮಕೂರು: ತುಮಕೂರು ಸ್ಮಾರ್ಟ್ಸಿಟಿ ಅಲ್ಲ, ಅದು ಗಬ್ಬು ಸಿಟಿಯಾಗಿದೆ. ಅಪ್ಪ, ಮಗ ತುಮಕೂರು ನಗರವನ್ನೇ ಹಾಳು ಮಾಡಿದ್ದಾರೆ ಎಂದು ಶಾಸಕ ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು ವಿರುದ್ಧ ಮಾಜಿ ಸಚಿವ ಹಾಗೂ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಹರಿಹಾಯ್ದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳವಾರ ರಾತ್ರಿ ಸುರಿದ ಮಳೆಗೆ ತುಮಕೂರು ನಗರದ ಎಲ್ಲಾ ರಸ್ತೆಗಳಲ್ಲೂ ನೀರು ನೀರು ನಿಂತಿವೆ. ಸಾರಾಗವಾಗಿ ಸಾಗದೆ ರಸ್ತೆಯಲ್ಲಿಯೇ ನೀರು ನಿಂತು ಗಬ್ಬು ನಾರುತ್ತಿದೆ. ಈ ವಿಷಯ ಜನ ಸಾಮಾನ್ಯರಿಗೆ ತಿಳಿದಿದೆ. ಈ ರೀತಿಯಾದ ಅವ್ಯವಸ್ಥೆಯಲ್ಲೂ ಅಪ್ಪ ಮಕ್ಕಳು ತುಮಕೂರು ಸ್ಮಾರ್ಟ್ಸಿಟಿ ಎಂದು ಕರೆಯುತ್ತಾರೆ. ಎಲ್ಲಿದೆ ನಿಮ್ಮ ಸ್ಮಾರ್ಟ್ ಸಿಟಿ ಎಂದು ಕಿಡಿಕಾರಿದರು.
ಸ್ಮಾರ್ಟ್ ಸಿಟಿಯ ಅವ್ಯವಹಾರ ಹಾಗೂ ಈ ಕುರಿತು ಮುಂದಿನ ದಿನಗಳಲ್ಲಿ ಸಿಬಿಐ ತನಿಖೆ ನಡೆಸಲು ಹೋರಾಟ ಮಾಡುತ್ತೇನೆ. 120 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಿಂಗ್ ರಸ್ತೆ ಕಳಪೆ ಗುಣಮಟ್ಟದ್ದಾಗಿದ್ದು, ಅಪ್ಪ ಮಗನ ಆಡಳಿತ ಎಂಥದ್ದೂ ಎಂದು ಇಲ್ಲಿಯೇ ಗೊತ್ತಿಗುತ್ತಿದೆ ಎಂದರು.

ಸ್ಮಾರ್ಟ್ ಸಿಟಿಯನ್ನು ಉತ್ತಮವಾಗಿ ಹಾಲಿ ಎಂಎಲ್ಎ ನಿರ್ವಹಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಯಡಿಯೂರಪ್ಪ ಹೇಳಿದ್ದರು. ಇಂದು ನಗರಕ್ಕೆ ಬಂದು ಮಳೆಯಿಂದ ಹಾಳಾಗಿರುವ ತುಮಕೂರು ನಗರದ ಅವ್ಯವಸ್ಥೆ ನೋಡಿದ್ದಲ್ಲಿ ನಿಜಾಂಶ ತಿಳಿಯುತ್ತಿತ್ತು. ಹಿರಿಯರ ಹೇಳಿಕೆ ವಿಷಾದನೀಯ ಎಂದರು.
ನಾನು ಬಸವಣ್ಣ, ನಡೆದಾಡುತ್ತಿದ್ದ ದೇವರು ಶಿವಕುಮಾರ ಸ್ವಾಮೀಜಿಗಳ ಆಶಯಗಳಂತೆ ನಡೆದುಕೊಂಡು ಬಂದಿದ್ದೇನೆ. ಭ್ರಷ್ಟಾಚಾರ ರಹಿತ, ಸ್ವಜನ ಪಕ್ಷಪಾತ ಮಾಡದೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಇತ್ತೀಚೆಗೆ ತುಮಕೂರು ನಗರ ಮತ್ತು ಗ್ರಾಮಂತರ ಭಾಗಗಳಲ್ಲಿ ನಡೆದ ರೋಡ್ ಷೋಗಳಿಗೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆದುಕೊಂಡು ಬಂದಿದ್ದರು, ಇದನ್ನು ಗಮನಿಸಿದರೆ ಈ ಬಾರಿ ಬಿಜೆಪಿ ಪಕ್ಷಕ್ಕೆ ಒಲವು ಇಲ್ಲ ಎಂಬುದು ಗೊತ್ತಾಗುತ್ತಿದೆ ಎಂದರು.
ನಾನು ಚುನಾವಣೆ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಬಾರಿ ಜನರ ಒಲವು ನನ್ನ ಮೇಲಿದೆ ಎಂಬ ಅತೀವ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಹುಟ್ಟಿಸಿರುವುದಲ್ಲದೆ ಜನರಿಗೆ ಅರಿವಾಗಿದೆ ತಮಗೆ ಎಂತ ವ್ಯಕ್ತಿ ಬೇಕು ಎನ್ನುವುದು. ಈ ಬಾರಿ ಜನ ನನ್ನನ್ನು ಅತೀ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನನ್ನ ಈ ಚುನಾವಣೆ ಕೊನೆಯದ್ದು, ನನಗೆ ತಮ್ಮ ಬೆಂಬಲ ಬೇಕು ಜನತೆಗೆ ಕೇಳುತ್ತಿದ್ದೇನೆ. ನನ್ನ ಸ್ಪರ್ಧೆ ಯಾರನ್ನೋ ಸೋಲಿಸಲು ಅಲ್ಲ, ನನ್ನ ಸ್ಪರ್ಧೆ ಜನಹಿತಕ್ಕಾಗಿ ಜನ ಸೇವಕನಾಗಿ ಕೆಲಸ ಮಾಡಲು ಮಾತ್ರ. ನನ್ನ ಸ್ಪರ್ಧೆ ಸ್ವಜನ ಪಕ್ಷಪಾತ, ರಾಜಕೀಯ ದ್ವೇಷದ ವಿರುದ್ಧ, ತುಮಕೂರು ನಗರದ ಹಾಲಿ ಇರುವ ತಂದೆ ಮಗ ಹಣ ಗಳಿಸುವ ಕ್ರೀಡಾಂಗಣವಾಗಿದ್ದಾರೆ. ಕುಟುಂಬ ರಾಜಕಾರಣ ಅಸಹ್ಯ ಹುಟ್ಟಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸೊಗಡು ಶಿವಣ್ಣ, ಕೆ.ಪಿ.ಮಹೇಶ್, ಧನಿಯಾ ಕುಮಾರ್, ಜಯಸಿಂಹ, ಗೋವಿಂದರಾಜು, ಮಹಾಲಿಂಗಯ್ಯ, ಸಂಜಯ್ ನಾಯಕ್, ಶಾಂತರಾಜು, ಗೋಕುಲ್ ಮಂಜುನಾಥ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!