ಕೊನೆ ಚುನಾವಣೆ ಎಂದು ಹೇಳಿ ಗೆದ್ದು ಬೀಗಿದವರು

99

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲೆ ಹಲವು ಕ್ಷೇತ್ರದಲ್ಲಿ ಇದು ನನ್ನ ಕೊನೆ ಚುನಾವಣೆ ಎಂದು ಹೇಳಿ ಹಲವು ನಾಯಕರು ಸ್ಪರ್ಧೆ ಮಾಡಿದ್ದರು, ಅದರಲ್ಲಿ ಬಹುತೇಕರು ಗೆದ್ದಿದ್ದಾರೆ. ಕೊನೆ ಚುನಾಚಣೆ ಎನ್ನುವ ಕರುಣೆ ಇಲ್ಲಿ ವರ್ಕ್ ಔಟ್ ಆದಂತೆ ಕಾಣುತ್ತಿದೆ. ಹಾಗಾದ್ರೆ ಗೆದ್ದವರು ಯಾರು ಎಂಬುದರ ವಿವರ ಇಲ್ಲಿದೆ.

ಟಿ.ಬಿ.ಜಯಚಂದ್ರ: ಶಿರಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಇದು ನನ್ನ ಕೊನೆ ಚುನಾವಣೆ ಎಂದು ಹೇಳಿ ಅಖಾಡಕ್ಕೆ ಇಳಿದಿದ್ದರು. ಇವರಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದ ಜಯಚಂದ್ರ ಅವರ ರಾಜಕೀ ಭವಿಷ್ಯ ಮುಗಿಯಿತು ಎಂದು ಹೇಳಲಾಗಿತ್ತು. ಆದರೆ ಈ ಬಾರಿ ಟಿಕೆಟ್ ಪಡೆದು ಕೊನೆ ಚುನಾವಣೆ ಎಂಬ ಅಸ್ತ್ರ ಪ್ರಯೋಗಿಸಿ ಜಯ ಗಳಿಸಿದ್ದಾರೆ. ಶಿರಾ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಿದ್ದು, ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುತ್ತಾ ಮುಂದೆ ಮತ್ತಷ್ಟು ಅಭಿವೃದ್ಧಿ ಗಾಗಿ ನನ್ನ ಗೆಲ್ಲಿಸಿ ಎಂದು ಪ್ರಚಾರ ಮಾಡಿದ್ದರು. ಮತದಾರರು ಕೂಡ ಇವರಿಗೆ ಗೆಲುವಿನ ಸಿಹಿ ನೀಡಿದ್ದಾರೆ.

ಕೆ.ಎನ್.ರಾಜಣ್ಣ: ಮಧುಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದ ಕೆ.ಎನ್.ರಾಜಣ್ಣ ಕೂಡ ಇದು ನನಗೆ ಕೊನೆ ಚುನಾವಣೆ, ಮುಂದೆ ನಾನು ಸ್ಪರ್ಧೆ ಮಾಡಲ್ಲ, ನನ್ನನ್ನು ಆಶೀರ್ವದಿಸಿ ಎಂದು ಮತದಾರರ ಬಳಿ ಹೋಗಿದ್ದರು. ಮತದಾರರು ರಾಜಣ್ಣ ಪರವೇ ತೀರ್ಪು ನೀಡಿದ್ದಾರೆ. ಕೊನೆ ಚುನಾವಣೆ ಎಂಬುದು ಸಿಂಪತಿಗೆ ಕಾರಣವಾಗಿದೆ. ಜೊತೆಗೆ ರಾಜಣ್ಣ ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು, ರೈತರಿಗೆ ನೀಡಿದ ಸಾಲ ಸೌಲಭ್ಯ, ಕ್ಷೇತ್ರದ ಜನರೊಂದಿಗಿನ ಉತ್ತಮ ಒಡನಾಟ ಗೆಲುವಿಗೆ ಕಾರಣ ಎನ್ನಲಾಗಿದೆ.

ಕೆ.ಷಡಕ್ಷರಿ: ತಿಪಟೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಕೂಡ ಇದು ನನ್ನ ಕೊನೆ ಎಲೆಕ್ಷನ್ ಎಂದು ಹೇಳಿ ಅಖಾಡಕ್ಕೆ ಇಳಿದಿದ್ದರು. ಇವರಿಗೆ ಮತದಾರರು ಒಲವು ತೋರಿಸಿದ್ದಾರೆ.
ಕಳೆದ ಬಾರಿ ಟಿಕೆಟ್ ಗೊಂದಲದ ನಡುವೆ ಸೋಲುಕಂಡಿದ್ದ ಷಡಕ್ಷರಿ ಈ ಬಾರಿ ಕೊನೆ ಚುನಾವಣೆ ಮಾತು ಹೇಳಿ ಮತದಾರರ ಮನ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಸಚಿವ ಬಿ.ಸಿ.ನಾಗೇಶ್ ಕ್ಷೇತ್ರ ನಿರ್ಲಕ್ಷ್ಯ ಮಾಡಿದ್ದು ಷಡಕ್ಷರಿ ಅವರ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತೆ, ನನಗೆ ಸಚಿವ ಸ್ಥಾನ ಸಿಗುತ್ತೆ, ಕ್ಷೇತ್ರದ ಅಭಿವೃದ್ಧಿ ಮಾಡುವೆ ಎಂದು ಪ್ರಚಾರ ಮಾಡಿದ್ದು ಕೂಡ ಷಡಕ್ಷರಿ ಅವರಿಗೆ ವರವಾಗಿ ಪರಿಣಮಿಸಿ ಗೆಲುವು ಪಡೆದಿದ್ದಾರೆ.

ಎಂ.ಟಿ.ಕೃಷ್ಣಪ್ಪ: ತರುವೇಕೆರೆ ಕ್ಷೇತ್ರದ ಎಂ.ಟಿ.ಕೃಷ್ಣಪ್ಪ ಕೂಡ ಕೊನೆ ಚುನಾವಣೆ ಎನ್ನುವ ಅಸ್ತ್ರ ಪ್ರಯೋಗಿಸಿ ಮತದಾರರ ಮನ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಶಾಸಕ ಮಸಾಲೆ ಜಯರಾಂ ಅವರ ವೀಕ್ ನೆಸ್ ಹಾಗೂ ಕ್ಷೇದಲ್ಲಿ ಅಭಿವೃದ್ಧಿ ಕಡೆಗಣನೆ ಸೇರಿದಂತೆ ಹಲವು ವಿಚಾರಗಳನ್ನು ಜನರಿಗೆ ಮನಮುಟ್ಟುವಂತೆ ಪ್ರಚಾರ ಮಾಡಿದ್ದು ಕೃಷ್ಣಪ್ಪ ಗೆಲುವಿಗೆ ಕಾರಣವಾಗಿದೆ. ಕೊನೆ ಚುನಾವಣೆಯಂತೆ, ಇದೊಂದು ಬಾರಿ ಗೆಲ್ಲಿಸಿ ಬಿಡುವ ಎಂದು ಜನರು ತೀರ್ಮಾನ ಮಾಡಿ ಕೃಷ್ಣಪ್ಪರಿಗೆ ಗೆಲುವಿನ ದಡ ಸೇರಿಸಿದ್ದಾರೆ. ಒಟ್ಟಾರೆ ಈ ನಾಲ್ವರು ಇದು ನಮ್ಮ ಕೊನೆ ಚುನಾವಣೆ ಎಂದು ಹೇಳಿ ಜನರ ಆಶೀರ್ವಾದ ಪಡೆದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!