ಜಯಚಂದ್ರರಿಗೆ ಮಂತ್ರಿ ಸ್ಥಾನ ನೀಡಲು ಆಗ್ರಹ

82

Get real time updates directly on you device, subscribe now.


ತುಮಕೂರು: ಹಿರಿಯರು, ಅನುಭವಿಗಳು ಆದ ಟಿ.ಬಿ.ಜಯಚಂದ್ರ ಅವರಿಗೆ ಮಂತ್ರಿಸ್ಥಾನ ನೀಡುವಂತೆ ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮಾಜದ ಉಪ ಪಂಗಡವಾಗಿರುವ ಕುಂಚಟಿಗ ಒಕ್ಕಲಿಗ ಸಮುದಾಯದ ಏಕೈಕ ಶಾಸಕರಾಗಿರುವ ಟಿ.ಬಿ.ಜಯಚಂದ್ರ ಅತ್ಯಂತ ಅನುಭವಿ ಮತ್ತು ಮುತ್ಸದ್ಧಿ ರಾಜಕಾರಣಿ, ಈಗಾಗಲೇ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಸೇರಿದಂತೆ ಹಲವು ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಬಹಳ ಮಹತ್ವದ ಖಾತೆಗಳನ್ನು ನಿರ್ವಹಿಸಿದ ಅನುಭವವುಳ್ಳ ರಾಜಕಾರಣಿ, ಅವರನ್ನು ಮಂತ್ರಿ ಮಾಡುವ ಮೂಲಕ ಅವರ ಅನುಭವವನ್ನು ಸರಕಾರ ಬಳಸಿಕೊಳ್ಳಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.

ಕುಂಚಟಿಗ ಒಕ್ಕಲಿಗ ಜನಾಂಗದ ಏಕೈಕ ಶಾಸಕರಾಗಿರುವ ಟಿ.ಬಿ.ಜಯಚಂದ್ರ ಅವರು ನೀರಾವರಿ ತಜ್ಞರಾಗಿ ಕುಡಿಯುವುದಕ್ಕಲ್ಲದೆ, ನೀರಾವರಿಗಾಗಿಯೂ ಕಾವೇರಿ ಕೊಳ್ಳದಿಂದ ಕೃಷ್ಣ ಕೊಳ್ಳಕ್ಕೆ ಹೇಮಾವತಿ ನೀರು ಹರಿಸಿ ಸಾಧನೆ ಮಾಡಿದ ಸಾಧಕರು, ಅವರ ದೂರದೃಷ್ಟಿಯ ಫಲವಾಗಿ ಬರದ ನಾಡಾಗಿದ್ದ ಶಿರಾ ಇಂದು ಸಂಪೂರ್ಣ ಹಸಿರಿನಿಂದ ಕೂಡಿದೆ. ಅವರು ಮಾಡಿರುವ ಬ್ಯಾರೇಜ್ ಗಳಲು ತುಂಬಿ ಹತ್ತಾರು ಕಿ.ಮೀ ದೂರದವರೆಗೆ ಅಂತರಜಲ ವೃದ್ಧಿಯಾಗಿ ಜನ, ಜಾನುವಾರು ಸಂಮೃದ್ಧಿಯ ಜೀವನ ನಡೆಸುವಂತಾಗಿದೆ. ಹಾಗಾಗಿ ಅವರ ಅನುಭವ ಸರಕಾರಕ್ಕೆ ಬಳಕೆಯಾಗಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದಲೂ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಹೆಚ್ಚಿನ ಅನುಕೂಲ ಪಕ್ಷಕ್ಕೆ ಆಗಲಿದೆ ಎಂಬುದು ಕುಂಚಿಟಿಗ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಒತ್ತಾಸೆಯಾಗಿದೆ ಎಂದು ಆರ್.ಕಾಮರಾಜು ತಿಳಿಸಿದರು.

ಹಿರಿಯ ರಾಜಕಾರಣಿಯಾಗಿರುವ ಟಿ.ಬಿ.ಜಯಚಂದ್ರ ಅವರು ಸ್ವೀಕರ್ ಸೇರಿದಂತೆ ಯಾವುದೇ ಹುದ್ದೆ ನೀಡಿದರೂ ನಿಭಾಯಿಸುವ ಶಕ್ತಿ ಹೊಂದಿದ್ದಾರೆ. ಆದರೆ ಇದು ಅವರ ಕೊನೆಯ ಚುನಾವಣೆ ಎಂದು ಘೋಷಿಸಿಕೊಂಡಿರುವ ಹಿನ್ನೇಲೆಯಲ್ಲಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕಾರ್ಯಕ್ರಮ ನೀಡಬೇಕೆಂದರೆ ಸಚಿವರಾದರೆ ಹೆಚ್ಚು ಸೂಕ್ತ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸೀಟು ಗೆಲ್ಲುವ ಮೂಲಕ ಅಭೂತ ಪೂರ್ವ ಯಶಸ್ಸನ್ನು ಸಾಧಿಸಿದೆ. ಇದಕ್ಕಾಗಿ ಪಕ್ಷದ ಎಲ್ಲಾ ಮುಖಂಡರಿಗೂ ಕುಂಚಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಅದೇ ರೀತಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹಾಗೂ ಎಂಟು ಜನ ಸಚಿವರಿಗೂ ಸಂಘ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮ ಜಿಲ್ಲೆಯಿಂದ ಆಯ್ಕೆಯಾಗಿರುವ ಎಲ್ಲಾ 11 ಶಾಸಕರಿಗೂ ಅಭಿನಂದನೆಯನ್ನು ಸಂಘ ಸಲ್ಲಿಸುತ್ತದೆ. ಮುಂದಿನ ದಿನಗಳಲ್ಲಿ ಅವರೆಲ್ಲರನ್ನೂ ಬಳಸಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ ಎಂದರು.

ಈ ವೇಳೆ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್, ಉಪಾಧ್ಯಕ್ಷ ಅಶೋಕ್ ಕುಮಾರ್, ಕಾರ್ಯದರ್ಶಿ ಎಂ.ರಾಜಕುಮಾರ್, ಮಾಜಿ ಕಾರ್ಯದರ್ಶಿ ದೊಡ್ಡಲಿಂಗಪ್ಪ, ಖಜಾಂಚಿ ಎಸ್.ಸತೀಶ್, ಜಂಟಿ ಕಾರ್ಯದರ್ಶಿ ಸಿ.ಬಸವರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!