ರೆಡ್ಡಿ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡಿ

108

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿ ಸುಮಾರು 80 ಲಕ್ಷ ಜನಸಂಖ್ಯೆ ಹೊಂದಿರುವ ರೆಡ್ಡಿ ಸಮುದಾಯದಿಂದ ಈ ಬಾರಿಯ ಚುನಾವಣೆಯಲ್ಲಿ 21 ಜನರಿಗೂ ಹೆಚ್ಚು ಶಾಸಕರು ಆಯ್ಕೆಯಾಗಿದ್ದು, ಕಾಂಗ್ರೆಸ್ ಸರಕಾರದಲ್ಲಿ ಸಮುದಾಯದ ಒಬ್ಬರಿಗೆ ಉಪ ಮುಖ್ಯಮಂತ್ರಿ ನೀಡಬೇಕೆಂದು ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಕೆ.ಶ್ರೀನಿವಾಸ ರೆಡ್ಡಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸುಮಾರು 16ಕ್ಕೂ ಹೆಚ್ಚು ಜನರು ಆಯ್ಕೆಯಾಗಿದ್ದಾರೆ. ಇವರಲ್ಲಿ ಮೂವರಿಗೆ ಮಾತ್ರ ಮಂತ್ರಿ ಸ್ಥಾನ ನೀಡಲಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಶಾಸಕರನ್ನು ಹೊಂದಿರುವ ರೆಡ್ಡಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕು. ಇದರಿಂದ ಮುಂದಿನ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಅನುಕೂಲ ಪಕ್ಷಕ್ಕೆ ಆಗಲಿದೆ ಎಂದರು.

ರೆಡ್ಡಿ ಜನಾಂಗ ಪೂರ್ವದಲ್ಲಿ ಶ್ರೀಮಂತರಾಗಿದ್ದರೂ ಅವಿಭಕ್ತ ಕುಟುಂಬಗಳು ಹೆಚ್ಚಾದಂತೆ ಇದ್ದ ಭೂಮಿಯೂ ಕಡಿಮೆಯಾಗಿ ಬಡವರಾಗುತ್ತಿದ್ದಾರೆ. ಇಂತಹ ಸಮುದಾಯವನ್ನು ಸರಕಾರ ಹಿಂದುಳಿದ ವರ್ಗದ ಪ್ರವರ್ಗ 3 ಎ ನಿಂದ 2 ಎಗೆ ಸೇರಿಸಬೇಕೆಂಬುದು ನಮ್ಮ ಬಹುದಿನದ ಬೇಡಿಕೆಯಾಗಿದೆ. ಇದರಿಂದ ರೆಡ್ಡಿ ಸಮುದಾಯದ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶ್ರೀನಿವಾಸ ರೆಡ್ಡಿ ಒತ್ತಾಯಿಸಿದರು.

ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಬಹಳ ಹಿಂದುಳಿದಿರುವ ರೆಡ್ಡಿ ಸಮುದಾಯದ ಅಭಿವೃದ್ಧಿಗೆ ರೆಡ್ಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ. ಹಲವಾರು ಸಮುದಾಯಗಳಿಗೆ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಹಾಗೆಯೇ ನಮ್ಮ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸಿ ನಮ್ಮ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿ ಯೋಜನೆ ರೂಪಿಸಲು ಅನುಕೂಲ ಕಲ್ಪಿಸಬೇಕೆಂದು ಸರಕಾರವನ್ನು ಆಗ್ರಹಿಸಿದರು.
ರೆಡ್ಡಿ ಸಮುದಾಯದ ಅಭಿವೃದ್ಧಿಗೆ ಹಾಸ್ಟೆಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಹಿಂದಿನ ಸರಕಾರದಲ್ಲಿಯೂ ಅನುದಾನ ನೀಡಿ ವಸತಿ ನಿಲಯಗಳ ಅಭಿವೃದ್ಧಿ ಪೂರಕ ವಾತಾವರಣ ನಿರ್ಮಿಸಬೇಕೆಂದ ಅವರು ಜಿಲ್ಲಾ ರೆಡ್ಡಿ ಜನ ಸಂಘದಿಂದ ತುಮಕೂರು ನಗರದ ಕ್ಯಾತ್ಸಂದ್ರದಲ್ಲಿ ಗಂಡು ಮಕ್ಕಳ ಹಾಸ್ಟೆಲ್, ಗಣೇಶ ನಗರದಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸರಕಾರ ಅನುದಾನ ನೀಡುವ ಮೂಲಕ ವಸತಿ ನಿಲಯಗಳ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಸರಕಾರ ಜನಗಣತಿಗೆ ಮುಂದಾಗಿದೆ. ಈ ಬಾರಿ ಜನಗಣತಿ ಸಂದರ್ಭದಲ್ಲಿ ರೆಡ್ಡಿ ಉಪ ಪಂಗಡಗಳನೆಲ್ಲಾ ಜಾತಿ ಕಾಲಂ ನಲ್ಲಿ ರೆಡ್ಡಿ ಎಂದು ನಮೂದಿಸಿದರೆ ನಮ್ಮ ಜನಸಂಖ್ಯೆಯ ನಿಖರ ಮಾಹಿತಿ ದೊರೆಯಲಿದೆ. ಹಾಗಾಗಿ ಸರಕಾರ ರೆಡ್ಡಿ ಜನಾಂಗಕ್ಕೆ ಸೇರಿದ ಎಲ್ಲಾ ಉಪ ಜಾತಿಗಳು ರೆಡ್ಡಿ ಎಂದು ನಮೂದಿಸಲು ಸರಕಾರಿ ಆದೇಶ ಹೊರಡಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೆಡ್ಡಿ ಜನ ಸಂಘದ ಕಾರ್ಯದರ್ಶಿ ಬಿ.ಆರ್.ಮಧು, ಜಂಟಿ ಕಾರ್ಯದರ್ಶಿ ರಾಜಗೋಪಾಲ ರೆಡ್ಡಿ, ಖಜಾಂಚಿ ಎಂ.ಎ.ಶಿವರೆಡ್ಡಿ, ನಿರ್ದೇಶಕರಾದ ಮಲ್ಲಿಕಾರ್ಜುನ ರೆಡ್ಡಿ, ಶೇಷಪ್ಪ ರೆಡ್ಡಿ, ನರಸಿಂಹಪ್ಪ ರೆಡ್ಡಿ, ಜಗಮೋಹನ್ ರೆಡ್ಡಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!