ವಿದ್ಯಾನಿಧಿ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ

199

Get real time updates directly on you device, subscribe now.


ತುಮಕೂರು: ಯಶಸ್ಸಿಗೆ ಇರುವ ಮೂರು ಸೂತ್ರಗಳೆಂದರೆ ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ, ನಮ್ಮಲ್ಲಿನ ಸಾಮರ್ಥ್ಯ, ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಬುದ್ಧಿವಂತಿಕೆ, ಗುರಿಯೆಡೆಗೆ ಕಾರ್ಯೋನ್ಮುಖವಾಗುವ ದೃಢ ಮನಸ್ಸು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದರು.

ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ವಿದ್ಯಾನಿಧಿ ಕಾಲೇಜು ವತಿಯಿಂದ ನಡೆದ ನಮ್ಮ ವಿದ್ಯಾರ್ಥಿ ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ, ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿ, ವಿದ್ಯಾನಿಧಿ ಕಾಲೇಜಿನ ಕುರಿತು ಪೋಷಕರು ಅಪಾರ ಅಭಿಮಾನ ಹೊಂದಿರುವುದು ನಮಗೆ ಸ್ಪೂರ್ತಿಯಾಗಿದೆ. ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ಮಕ್ಕಳು ಏರಬೇಕಾದ ಎತ್ತರ ಹೆಚ್ಚಿನದ್ದೇ ಆಗಿದೆ. ಬೋಧನೆಯನ್ನು ಪ್ರೀತಿಸುವ ಉಪನ್ಯಾಸಕ ವೃಂದ, ಶ್ರದ್ಧೆಯಿಂದ ಕಲಿಯುವ ವಿದ್ಯಾರ್ಥಿಗಳು ನಮ್ಮೊಡನಿರುವುದು ಕಾಲೇಜನ್ನು ಔನ್ನತ್ಯಕ್ಕೇರಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಖ್ಯೆಯ ಮಕ್ಕಳು ಈ ಪುರಸ್ಕಾರಕ್ಕೆ ಭಾಜನರಾಗಲಿ ಎಂದು ಹಾರೈಸಿದರು.

ಕೆ-ಸಿಇಟಿ ಯಲ್ಲಿ ರಾಜ್ಯಕ್ಕೆ 83ನೇ ರ್ಯಾಂಕ್ ಪಡೆದ ವರುಣ್ ಗೌಡ, ನೀಟ್ ಪರೀಕ್ಷೆಯಲ್ಲಿ 577 ಅಂಕ ಗಳಿಸಿದ ಸುಜನ್ ಜೈನ್, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಗಳಿಸಿದ ಸಂಜಯ್.ಜೆ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಚಿನ್ಮಯಿ, ಗೀತಾ.ಇ, ಖುಷಿ ಕೊಂಡ ಅವರಿಗೆ ಲ್ಯಾಪ್ ಟಾಪ್ ಗಳ ಸಹಿತ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಪಿಯುಸಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನುಅಭಿನಂದಿಸಲಾಯಿತು.

ವಿದ್ಯಾರ್ಥಿಗಳ ಸಾಧನೆ ಶ್ಲಾಸಿದ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ.ಎಸ್.ಆರ್. ಮಾತನಾಡಿ, ಧನಾತ್ಮಕ ಚಿಂತನೆ ಮತ್ತು ಕಾರ್ಯ ಪ್ರವೃತ್ತಿಯಿಂದ ಈ ವಿದ್ಯಾರ್ಥಿಗಳು ಕಾಲೇಜಿನ ಹೆಮ್ಮೆ ಹೆಚ್ಚಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಮನಸ್ಸು ಮಾಡಿದರೆ ಹೆಚ್ಚಿನದನ್ನು ಸಾಧಿಸಲು ಸಾಧ್ಯ ಎಂದರು.

ಉಪನ್ಯಾಸಕಿ ಗಾಯತ್ರಿ ದಿಲೀಪ್, ಉಪನ್ಯಾಸಕ ಸಂತೋಷ್, ವಿ-ಟೆಕ್ನೋ ಸಂಯೋಜಕಿ ನಂದಿನಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!