ಜ್ಯೋತಿಗಣೇಶ್, ಷಡಕ್ಷರಿಗೆ ಅಭಿನಂದನೆ ಸಲ್ಲಿಕೆ

940

Get real time updates directly on you device, subscribe now.


ತುಮಕೂರು: ಇಂದು ಎಲ್ಲಾ ಸಮುದಾಯಗಳಲ್ಲಿಯೂ ಶೈಕ್ಷಣಿಕ, ರಾಜಕೀಯ ಜಾಗೃತಿ ಬಂದಿದೆ. ಹಾಗಾಗಿ ಸರಕಾರದ ಸವಲತ್ತು ಪಡೆಯಲು ಪೈಪೋಟಿಯನ್ನೇ ನಡೆಸಬೇಕಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

ನಗರದ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ವತಿಯಿಂದ ಶಾಸಕರಾದ ಕೆ.ಷಡಕ್ಷರಿ ಮತ್ತು ಜಿ.ಬಿ.ಜೋತಿಗಣೇಶ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಮಾಜದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ಸಮಾಜದ ಜೊತೆಗೆ ಇತರೆ ಸಮಾಜದ ಬೆಳವಣಿಗೆಗೆ ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿಸಿದರು.

ಒಂದು ಜಾತಿಯಿಂದ ಚುನಾವಣೆ ಗೆಲುವು ಅಸಾಧ್ಯ. ಕಾಂಗ್ರೆಸ್ ಅಷ್ಟೊಂದು ದೊಡ್ಡ ಗೆಲುವಿಗೆ ಕಾರಣ ಎಲ್ಲಾ ಜಾತಿ, ಮತದವರು ಅವರಿಗೆ ಮತ ನೀಡಿದರು. ಈ ವಿಚಾರದಲ್ಲಿ ಬಿಜೆಪಿಗೆ ಕೊಂಚ ಹಿನ್ನೆಡೆಯಾಗಿದೆ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕಾಗಿದೆ ಎಂದು ಜಿ.ಬಿ.ಜೋತಿಗಣೇಶ್ ತಿಳಿಸಿದರು.

ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿ, ನೊಳಂಬ ಲಿಂಗಾಯಿತ ಸಂಘ ಈ ರಾಜ್ಯದಲ್ಲಿ ಬಹಳಷ್ಟು ಕೆಲಸ ಮಾಡುತ್ತಿದೆ. ಅವರ ಒಳ್ಳೆಯ ಕೆಲಸಗಳಿಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಹಲವು ದಿನಗಳ ಕಾಲ ಅಂತರ ಕಾಪಾಡಿ ಕೊಂಡಿದ್ದೆ, ಸಮಾಜಕ್ಕಿಂತ ದೊಡ್ಡವನು ನಾನಲ್ಲ, ರಾಜಕಾರಿಣಿಯಾಗಿ ಸಮಾಜಕ್ಕೆ ಕೆಲಸ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಸಮಾಜ ನಮಗೆ ಏನು ಮಾಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ಏನನ್ನು ಮಾಡಬಹುದು ಎಂಬ ಆಲೋಚನೆ ನನ್ನಲ್ಲಿದೆ. ನಾನು ಮೂರು ಬಾರಿ ಗೆದ್ದಿದ್ದೇನೆ. ಹಾಗೆಯೇ ಮೂರು ಬಾರಿ ಸೋತು ಇದ್ದೇನೆ. ರಾಜಕಾರಣದಲ್ಲಿ ಸೋಲು, ಗೆಲುವು ಸಹಜ, ಸಮಾನ ಚಿತ್ತದಿಂದ ಮುಂದೆ ಹೆಜ್ಜೆ ಇಡುವ ಎಂದರು.

ನೊಳಂಬ ಲಿಂಗಾಯಿತರ ಸಂಘದ ರಾಜ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಮಾತನಾಡಿ, ಕೆ.ಷಡಕ್ಷರಿ ಈ ಬಾರಿ ಮಂತ್ರಿಯಾಗುತ್ತಾರೆ ಎಂಬ ಅಶಯ ನಮ್ಮದಾಗಿತ್ತು. ಮುಂದೆ ಆಗುತ್ತಾರೆ ಎಂಬ ನಂಬಿಕೆ ನಮ್ಮಗಿದೆ. ಜಿಲ್ಲೆಯಿಂದ ಜೋತಿ ಗಣೇಶ್ ಮತ್ತು ಕೆ.ಷಡಕ್ಷರಿ ಇಬ್ಬರು ಸಮಾಜದಿಂದ ಆಯ್ಕೆಯಾಗಿರುವ ಶಾಸಕರು, ಇವರು ಸಮಾಜ ಬೆಳೆಸುವ ಜವಾಬ್ದಾರಿ ಹೊರಲಿದ್ದಾರೆ ಎಂಬ ನಂಬಿಕೆ ನಮ್ಮದು ಎಂದರು.
ತುಮಕೂರು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಶೈಕ್ಷಣಿಕವಾಗಿ ವೀರಶೈವ, ಲಿಂಗಾಯಿತ ಸಮಾಜ ಅಭಿವೃದ್ಧಿಯಾಗಿದೆ. ನೊಳಂಬ ಲಿಂಗಾಯಿತ ಸಂಘ ರಾಜ್ಯದ ಏಳು ಕಡೆಗಳಲ್ಲಿ ಹಾಸ್ಟೆಲ್ ಸ್ಥಾಪಿಸಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಮಂದಿನ ದಿನಗಳಲ್ಲಿ ವಿದ್ಯಾಸಂಸ್ಥೆ ಕಟ್ಟುವ ಗುರಿ ಹೊಂದಿರುವುದಾಗಿ ಎಸ್.ಆರ್.ಪಾಟೀಲ್ ತಿಳಿಸಿದರು.

ಶ್ರೀವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಜಿ.ಎಸ್.ಬಸವರಾಜಪ್ಪ, ಉಪಾಧ್ಯಕ್ಷ ಎಂ.ಆರ್.ಸಿದ್ದಲಿಂಗಯ್ಯ, ಗೌರವ ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನಯ್ಯ, ನಿರ್ದೇಶಕರಾದ ಬಿ.ಬಿ.ಮಹದೇವಯ್ಯ, ಡಾ.ಹಾಲೆನೂರು ಲೇಪಾಕ್ಷ, ಸಾಗರನಹಳ್ಳಿ ನಟರಾಜು ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!