ಕುಣಿಗಲ್: ಹನ್ನೆರಡು ವರ್ಷಗಳಿಂದ ಶಾಲಾ ಉಪಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಪದನ್ನೊತಿ ಹೊಂದಿ ವರ್ಗಾವಣೆ ಗೊಂಡ ನೆಚ್ಚಿನ ಶಿಕ್ಷಕರ ವರ್ಗಾವಣೆ ಖಂಡಿಸಿದ ವಿದ್ಯಾರ್ಥಿಗಳು, ನೆಚ್ಚಿನ ಶಿಕ್ಷಕರನ್ನು ಇಲ್ಲಿಯೆ ಉಳಿಸುವಂತೆ ಶಾಲೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿಯ ಭಕ್ತರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಎಂದಿನಂತೆ ಉತ್ಸಾಹದಿಂದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸೋಮವಾರ ಕಹಿಸುದ್ದಿ ಕಾದಿತ್ತು. ನೆಚ್ಚಿನ ಮುಖ್ಯೋಪಾಧ್ಯಾಯ ಮಾರುತಿ ಕುಮಾರ್ ಪದೊನ್ನತಿ ಹೊಂದಿ ವರ್ಗಾವಣೆ ಹೊಂದಿರುವುದಾಗಿ ಸುದ್ದಿ ಬಂದಿತು. ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕರನ್ನು ಇಲ್ಲಿಯೆ ಮುಂದುವರೆಸುವಂತೆ ಆಗ್ರಹಿಸಿ ಶಾಲೆಯ ಮುಖ್ಯದ್ವಾರದಲ್ಲೆ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಶಾಲಾಭಿವೃದ್ಧಿ ಸಮಿತಿ ಅಶ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಭಾಗ್ಯಮ್ಮ, ಲೋಕೇಶ ಹಾಗೂ ಗ್ರಾಮದ ಮುಖಂಡರಾದ ಮಂಜು, ಚಂದ್ರು, ಚಿಕ್ಕಣ್ಣ, ರವಿಕುಮಾರ್ ಇತರರು ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಪ್ರತಿಭಟನೆ ವಿಷಯವನ್ನು ಬಿಇಒ ಗಮನಕ್ಕೆ ತಂದರು.
ಸ್ಥಳಕ್ಕಾಗಮಿಸಿದ ಬಿಇಒ ಬೋರೇಗೌಡ, ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳೊಂದಿಗೆ ಚರ್ಚಿಸಿದಾಗ ಸದರಿ ಮುಖ್ಯೋಪಾಧ್ಯಾಯರ ನಿವೃತ್ತಿಗೆ ಇನ್ನು ಎರಡೇ ವರ್ಷ ಇದೆ. ಅಲ್ಲದೆ ಅವರ ಅವಧಿಯಲ್ಲಿ ಶಾಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವಾಗಿದೆ. ಹೀಗಾಗಿ ಅವರ ವರ್ಗಾವಣೆ ರದ್ದುಗೊಳಿಸಿ ಇಲ್ಲಿಯೆ ಮುಂದುವರೆಯಲು ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಈ ಬಗ್ಗೆ ಮಾತನಾಡಿದ ಬಿಇಒ ಬೋರೇಗೌಡ, ಮುಖ್ಯೋಪಾಧ್ಯಯರು ಪದನ್ನೋತಿ ಹೊಂದಿ ಪ್ರೌಢಶಾಲೆಗೆ ವರ್ಗಾವಣೆ ಆಗಿದ್ದಾರೆ. ಹೀಗಾಗಿ ಇಲ್ಲಿಯೆ ಮುಂದುವರೆಸಲು ತಾಂತ್ರಿಕವಾಗಿ ಸಾಧ್ಯವಾಗುವುದಿಲ್ಲ. ಶಾಲೆಯಲ್ಲಿ ಹಾಲಿ ನಿಯೋಜಿಸಿರುವ ಶಿಕ್ಷಕರೊಂದಿಗೆ ಸಹಕಾರ ನೀಡಿ ಶೈಕ್ಷಣಿಕ ಪ್ರಗತಿಗೆ ಮುಂದಾಗುವಂತೆ ಮನವೊಲಿಸಿದರಲ್ಲದೆ ಸ್ಥಳೀಯರ ಕೋರಿಕೆ ಮೇರೆಗೆ ಕೊರತೆ ಇರುವ ಶಿಕ್ಷಕರ ಸ್ಥಾನಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ ಮೇರೆಗ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಸಿಆರ್ ಪಿ ರೇಷ್ಮ ಸೇರಿದಂತೆ ಇತರೆ ಸಿಬ್ಬಂದಿ ಹಾಜರಿದ್ದರು.
Comments are closed.