ಮಾಧ್ಯಮ ಬಯಸುವುದು ಉತ್ತಮ ಭಾಷೆ

ಮಾಧ್ಯಮಕ್ಕೆ ಭಾಷೆಯೇ ಜೀವಾಳ: ಡಾ.ಪದ್ಮರಾಜ ದಂಡಾವತಿ

233

Get real time updates directly on you device, subscribe now.


ತುಮಕೂರು: ಮಾಧ್ಯಮ ಬಯಸುವುದು ಉತ್ತಮ ಭಾಷೆಯನ್ನು, ಮಾಧ್ಯಮಕ್ಕೆ ಭಾಷೆಯೇ ಜೀವಾಳವಾಗಿದೆ ಎಂದು ಹಿರಿಯ ಪತ್ರಕರ್ತಡಾ.ಪದ್ಮರಾಜದಂಡಾವತಿ ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿ ಅವರ ಪುಸ್ತಕ ಮಾಧ್ಯಮ ಭಾಷಾ ದೀಪಿಕೆ ಕುರಿತು ಸಂವಾದ ಹಾಗೂ ಮಾಧ್ಯಮ ಮತ್ತು ಭಾಷೆ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಓದುಗರನ್ನು, ಕೇಳುಗರನ್ನು ಹಿಡಿದಿಡುವ ಶಕ್ತಿ ಭಾಷೆಗಿದೆ. ಭಾಷಾ ಬಳಕೆ ಶುದ್ಧವಾಗಿರಬೇಕು, ಸ್ನಾತಕ ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಭಾಷೆಯನ್ನು ಕಲಿಸುವಂತಹ ಮಟ್ಟಕ್ಕೆ ತಲುಪಿದ್ದೇವೆ. ಪದವಿ ಹಂತಕ್ಕೆ ಬರುವವರು ಪ್ರಾಥಮಿಕ ಶಿಕ್ಷಣದಲ್ಲೆ ಭಾಷಾ ಬಳಕೆ ಕಲಿತು ಬಂದರೆ ಒಳ್ಳೆಯದು ಎಂದರು.

ಶಿಕ್ಷಣ ಮುಗಿಸಿ ಹೊರ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕುಂದುತ್ತಿದೆ. ಕೇವಲ ಪಠ್ಯಕ್ಕೆ ಸೀಮಿತವಾದರೆ ಸಾಲದು, ಸಾಹಿತ್ಯ ಓದಬೇಕು, ಬರೆವಣಿಗೆಯ ಶೈಲಿಯೂ ಮುಖ್ಯವಾಗುತ್ತದೆ. ಸಂದರ್ಭ ಸೂಚಿತ ಪದ ಬಳಕೆ ಇರಬೇಕು. ಇವೆಲ್ಲವೂ ಶಾಲಾ ಶಿಕ್ಷಣದಲ್ಲೆ ಕಲಿಸಬೇಕು. ಅಲ್ಲಿ ವಂಚಿತರಾದರೆ ಭವಿಷ್ಯದಲ್ಲಿ ಅಂಥ ಅವಕಾಶ ಸಿಗುವುದು ಕಷ್ಟ ಎಂದು ಹೇಳಿದರು.

ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚಿನ ಭಾಷಾ ಜ್ಞಾನ ಹೊಂದಿದರೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವುದು ಸುಲಭ, ಭಾಷಾ ಜ್ಞಾನ ಪಡೆಯದಿದ್ದರೆ ಅವಕಾಶ ವಂಚಿರಾಗುವುದು ಖಚಿತ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇಂತಹ ಸಂವಾದ ಕಾರ್ಯಕ್ರಮ ಓದಿನ ಆಸಕ್ತಿ ಬೆಳೆಸಿ, ಪದವಿಯ ಹಂತದಲ್ಲೇ ಕಾರ್ಯೋನ್ಮುಖರನ್ನಾಗಿ ಮಾಡುತ್ತದೆ. ಸಮಾಜಕ್ಕೆ ಉಪಯುಕ್ತ ಆಗುವಂಥ ಸುದ್ದಿಗಳನ್ನು ತಯಾರಿಸುವುದು ನಿಮ್ಮ ಕರ್ತವ್ಯವಾಗಿದೆ ಎಂದರು.

ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ.ಅಣ್ಣಮ್ಮ ಮಾತನಾಡಿ, ಭಾಷೆಯ ಮೇಲಿನ ಹಿಡಿತ ವಿದ್ಯಾರ್ಥಿ ಜೀವನದಲ್ಲೇ ಆಗುವುದು ಮುಖ್ಯ, ನಮ್ಮ ಭಾಷಾ ಬಳಕೆ ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಗ್ರಂಥಾಲಯದ ಬಳಕೆ ವಿದ್ಯಾರ್ಥಿಗಳಿಗೆ ಅವಶ್ಯಕ, ಓದಿನ ಅಭ್ಯಾಸ ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.

ಮಾಧ್ಯಮ ಭಾಷಾ ದೀಪಿಕೆ ಪುಸ್ತಕ ಕುರಿತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ.ಸಿಬಂತಿ ಪದ್ಮನಾಭ.ಕೆ.ವಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕರಾದ ಡಾ.ಪೃಥ್ವಿರಾಜ.ಟಿ, ವಿನಯ್ ಕುಮಾರ್.ಎಸ್.ಎಸ್, ಮನೋಜಕುಮಾರಿ.ಬಿ, ತಾಂತ್ರಿಕ ಸಹಾಯಕ ಅಭಿಷೇಕ್, ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಡಾ.ಹೆಚ್.ಕೆ.ಶಿವಲಿಂಗ ಸ್ವಾಮಿ, ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕಿ ಡಾ.ಗೀತಾ ವಸಂತ, ಡಾ.ನಾಗಭೂಷಣ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!