ಮಹಾ ಚಂಡಿಕಾ ಹೋಮ, ನವ ದುರ್ಗಾನುಷ್ಠಾನ

611

Get real time updates directly on you device, subscribe now.


ತುಮಕೂರು: ಮಧುಗಿರಿ ತಾಲ್ಲೂಕಿನ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮೀ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಚಾರಿಟಬಲ್ ಟ್ರಸ್ಟ್ ಹಾಗೂ ನಿಜಶರಣ ಕಮ್ಮಾರ ಕಲ್ಲಯ್ಯನವರ ಶ್ರೀಮಠದ ವತಿಯಿಂದ ಜುಲೈ 1 ಮತ್ತು 2 ರಂದು ನವ ದುರ್ಗಾಧಾಮದ 6ನೇ ವಾರ್ಷಿಕೋತ್ಸವ, ಮಹಾ ಚಂಡಿಕಾ ಹೋಮ ಮತ್ತು ನವ ದುರ್ಗಾನುಷ್ಠಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಆದಿಲಕ್ಷ್ಮೀ ಸಂಸ್ಥಾನ ಮಠದ ಪೀಠಾಧ್ಯಕ್ಷ ನೀಲಕಂಠಾಚಾರ್ಯ ಸ್ವಾಮೀಜಿ ಮಾತನಾಡಿ, 800 ವರ್ಷದ ಹಿಂದೆ ನಿಟ್ಟರಹಳ್ಳಿ ಕ್ಷೇತ್ರದಲ್ಲಿ ಸ್ವಯಂ ಉದ್ಬವವಾದ ಶ್ರೀಲಕ್ಷ್ಮೀಪೀಠವು ವಿಶ್ವಕರ್ಮ ಜನಾಂಗದವರು ಸೇರಿ ಸರ್ವ ಧರ್ಮೀಯರಿಗೆ ಪೂಜನೀಯ ಕ್ಷೇತ್ರವಾಗಿದೆ. ನವ ದುರ್ಗಿಯ ಅವತಾರದ ಪ್ರತೀಕವಾಗಿ ನವ ದುರ್ಗಾಧಾಮವನ್ನು ಕ್ಷೇತ್ರದಲ್ಲಿ ನಿರ್ಮಿಸಿದ್ದು, ನವ ದುರ್ಗಾಧಾಮ ಸ್ಥಾಪನೆಯ 6ನೇ ವಾರ್ಷಿಕೋತ್ಸವ ನಿಮಿತ್ತ ಲೋಕ ಕಲ್ಯಾಣಾರ್ಥ ಜು.2 ರಂದು ಮಹಾ ಚಂಡಿಕಾಹೋಮ ಏರ್ಪಡಿಸಲಾಗಿದೆ. ಜಿಲ್ಲೆಯ ಸದ್ಬಕ್ತರು ಈ ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದರು.

ರಾಜ್ಯ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಉಮೇಶ್ ಕುಮಾರ್ ಮಾತನಾಡಿ ನಿಟ್ಟರಹಳ್ಳಿ ಸುಕ್ಷೇತ್ರದ ಉದ್ಬವ ಶಕ್ತಿ ಸ್ವರೂಪಿಣಿಯಾದ ಮಹಾಲಕ್ಷ್ಮೀ ಆರಾಧನೆಯಿಂದ ನಾಡಿಗೆ ಒಳಿತಾಗಲಿ ಎಂಬ ಆಶಯದೊಂದಿಗೆ ಡಾ.ನೀಲಕಂಠಾಚಾರ್ಯ ಸ್ವಾಮೀಜಿ ಅವರು ಸಿದ್ದರಬೆಟ್ಟ, ಎಲೆರಾಂಪುರ, ತಗ್ಗಿಹಳ್ಳಿ ರಾಮಕೃಷ್ಣಾಶ್ರಮ ಸ್ವಾಮೀಜಿಗಳನ್ನು ಆಹ್ವಾನಿಸಿ 2 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ನಡೆಸಲಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಾಸಕರಾದ ಟಿ.ಬಿ.ಜಯಚಂದ್ರ, ಪ್ರದೀಪ್ ಈಶ್ವರ್, ಚಿತ್ರನಟಿ ಭವ್ಯ, ಶ್ರುತಿ ಸೇರಿ ಹಲವು ಗಣ್ಯರು, ಜಿಲ್ಲೆಯ ಸಮಾಜದ ಮುಖಂಡರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ನಿಗಮಕ್ಕೆ ಹೆಚ್ಚುವರಿ ಅನುದಾನಕ್ಕೆ ಮನವಿ: ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅತ್ಯಂತ ಕಡಿಮೆ ಅನುದಾನವಿದ್ದು, ಅನುದಾನಕ್ಕೆ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಲ್.ಎನ್.ಮಂಜುನಾಥ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶಶಿಧರ್ ಬಿ.ಎಸ್.ಕೃಷ್ಣಪ್ಪ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!