ಕಾಂಗ್ರೆಸ್ ಸರ್ಕಾರದ್ದು ಜನವಿರೋಧಿ ನೀತಿ

ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

98

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಬಿಜೆಪಿ ರಾಜ್ಯ ರೈತರ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಇಲ್ಲಸಲ್ಲದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ಯಾವುದೇ ಷರತ್ತಿಲ್ಲದ ಐದು ಗ್ಯಾರಂಟಿಗಳಿಲ್ಲದೆ ಈಡೇರಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಒಂದೊಂದೇ ಷರತ್ತುಗಳನ್ನ ಹಾಕುವ ಮೂಲಕ ಮತ ನೀಡಿದ ಜನರಿಗೆ ದ್ರೋಹ ಬಗೆದಿದೆ. ರೈತರಿಗೆ ನೆರವಾಗುವ ಕೃಷಿ ಸನ್ಮಾನ್ ಯೋಜನೆಗೆ ರಾಜ್ಯ ಸರಕಾರದಿಂದ ನೀಡುತ್ತಿದ್ದ ನಾಲ್ಕು ಸಾವಿರ ರೂ. ರದ್ದುಪಡಿಸುವ ಮೂಲಕ ತಾನು ರೈತ ವಿರೋಧಿ ಎಂಬುದನ್ನು ಸಾಬೀತು ಪಡಿಸಿದೆ. ಅನ್ನಭಾಗ್ಯದಲ್ಲಿಯೂ ಕೇಂದ್ರ ನೀಡುತ್ತಿದ್ದ ಐದು ಕೆಜಿ ಯಲ್ಲಿಯೂ 3 ಕೆಜಿ ಅಕ್ಕಿ, ಎರಡು ಕೆಜಿ ರಾಗಿ ನೀಡುವ ಮೂಲಕ ದ್ರೋಹವೆಸಗಿದೆ. ವಿಧಾನಸಭೆಯಲ್ಲಿ ನಮ್ಮ 10 ಜನ ಶಾಸಕರನ್ನು ಸರಕಾರದ ನೀತಿಗಳ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಸದನದಿಂದ ಹೊರ ಹಾಕುವ ಮೂಲಕ ಅತ್ಯಂತ ಹೀನ ಸಂಸ್ಕೃತಿಗೆ ನಾಂದಿ ಹಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ಮಾತನಾಡಿ, ಇಷ್ಟು ಬೇಗ ಆಡಳಿತ ಪಕ್ಷವಾದ ಕಾಂಗ್ರೆಸ್ ಪ್ರತಿಭಟನೆ ನಿರೀಕ್ಷಿಸಿರಲಿಲ್ಲ. ಸರಕಾರದ ತಪ್ಪು ನೀತಿಗಳ ವಿರುದ್ಧ ಹೋರಾಟದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಸಹ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಕೈಜೋಡಿಸಲಿದ್ದಾರೆ. ದೇಶ ದ್ರೋಹಿಗಳಿಗೂ ಕಾಂಗ್ರೆಸ್ ಸರಕಾರಕ್ಕೂ ನಂಟಿದ್ದಂತೆ ಕಂಡುಬರುತ್ತಿದೆ. ನಮ್ಮ ಸರಕಾರವಿದ್ದಾಗ ಬಾಲ ಮುದರಿಕೊಂಡಿದ್ದ ಭಯೋತ್ಪಾದಕರು, ವಿಚಿದ್ರಕಾರಿ ಶಕ್ತಿಗಳು ಕಾಂಗ್ರೆಸ್ ಸರಕಾರದಲ್ಲಿ ಹೆಡೆ ಬಿಚ್ಚಿದ ನಾಗರಹಾವಿನಂತೆ ಬುಸುಗುಟ್ಟುತ್ತಿವೆ. ಗೃಹ ಸಚಿವರ ಹೇಳಿಕೆ ನಿಜಕ್ಕೂ ನಾಚಿಕೆಗೇಡಿನದ್ದಾಗಿದೆ. ಸರಕಾರ ಇದನ್ನು ತಿದ್ದಿಕೊಳ್ಳದಿದ್ದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಸರಕಾರದ ತಪ್ಪು ಧೋರಣೆಗಳ ವಿರುದ್ಧ ಪ್ರತಿಭಟಿಸಿದ ನಮ್ಮ 10 ಜನ ಶಾಸಕರನ್ನು ಮಾರ್ಷಲ್ ಗಳನ್ನು ಬಳಸಿ ಹೊರಹಾಕಿ ನಿಷೇಧಿಸಿರುವ ಸ್ಪೀಕರ್ ಕ್ರಮ ಅಸಂವಿಧಾನಿಕವಾಗಿದ್ದು, ಇದರಿಂದ ರಾಜ್ಯದ ಜನತೆ ಭಯ ಭೀತರಾಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ಶೇ.65 ಸರಕಾರವಾಗಿದ್ದು, ವರ್ಗಾವಣೆ ದಂಧೆಯಲ್ಲಿ ದರೋಡೆಗೆ ಇಳಿದಿದೆ ಎಂದು ಆರೋಪಿಸಿದರು.

ಮತ್ತೋರ್ವ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 50 ದಿನ ಆಗಿಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಕೊಲೆ, ಸುಲಿಗೆ ನಡೆಯುತ್ತಿವೆ. ಐಎಎಸ್ ಅಧಿಕಾರಿಗಳಿಗೆ ಗೌರವವಿಲ್ಲದಂತೆ ನಡೆಸಿಕೊಂಡಿದೆ, ಸ್ವೀಕರ್ ಅವರ ರಾಜಕೀಯ ಪ್ರೇರಿತ ನಡೆ ಒಳ್ಳೆಯದಲ್ಲ. ನಿಮ್ಮ ಈ ದುರಾಡಳಿತ ಕಟ್ಟಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ, ನಮ್ಮ ಪಕ್ಷದ ಶಾಸಕರನ್ನು ಶಾಸನ ಸಭೆಯಿಂದ ಹೊರ ಹಾಕುವ ಮೂಲಕ ವಿರೋಧಪಕ್ಷಗಳ ಧ್ವನಿಯನ್ನು ಅಡಗಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲು ಹೊರಟಿದೆ. ಐದು ಗ್ಯಾರಂಟಿ ಜಾರಿಯಲ್ಲಿ ಸಾಕಷ್ಟು ವೈಫಲ್ಯ ಕಂಡಿರುವ ಸರಕಾರ ಜನರಲ್ಲಿ ಗೊಂದಲ ಮೂಡಿಸಿದೆ, ಸಿದ್ದರಾಮಯ್ಯ ಅವರ ಹಿಟ್ಲರ್ ಧೋರಣೆಗೆ ಕೊನೆ ಹಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ಕೊಬ್ಬರಿ ಬೆಲೆ ಕುಸಿತ, ರೈತರ ಆತ್ಮಹತ್ಯೆ, ಗ್ಯಾರಂಟಿಗಳ ಗೊಂದಲ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳಿವೆ. ಬಿಜೆಪಿ ಸರಕಾರ ಪ್ರಬಲ ವಿರೋಧ ಪಕ್ಷವನ್ನು ಸರಕಾರದ ಕಿವಿ ಹಿಂಡುವ ಕೆಲಸ ಮಾಡಲಿದೆ. ಭಯೋತ್ಪಾದಕರು, ಉಗ್ರಗಾಮಿಗಳ ಪರವಾಗಿ ಸರಕಾರಕ್ಕೆ ಸದಾ ಎಚ್ಚರಿಕೆಯ ಗಂಟೆಯಾಗಿ ಬಿಜೆಪಿ ಕಲೆಸ ಮಾಡಲಿದೆ. ಇದು ಸಾಂಕೇತಿಕ ಹೋರಾಟವಷ್ಟೇ, ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಯಲಿದೆ ಎಂದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಸಿ.ಎನ್.ರಮೇಶ್, ಮುಖಂಡರಾದ ಹನುಮಂತರಾಜು, ಪ್ರೇಮ ಹೆಗಡೆ, ಯಶಸ್, ವಿಜಯಕುಮಾರ್, ಗಂಗಾಧರ್, ರುದ್ರೇಶ್, ಶಂಕರಣ್ಣ, ಮಾಧ್ಯಮ ಸಹ ಪ್ರಮುಖ ಜೆ.ಜಗದೀಶ್, ರಾಜಶೇಖರ್ ಇತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!