ಹಣ ವರ್ಗಾವಣೆಯಿಂದ ಪಡಿತರ ವಿತರಕರಿಗೆ ತೊಂದರೆ

123

Get real time updates directly on you device, subscribe now.


ತುಮಕೂರು: ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ವಿತರಣೆಯಲ್ಲಿ ಐದು ಕೆಜಿ ಅಕ್ಕಿ ವಿತರಿಸಿ ಉಳಿದ ಐದು ಕೆಜಿ ಅಕ್ಕಿಗೆ ನೇರ ನಗದು ವರ್ಗಾವಣೆ ಮಾಡುತ್ತಿರುವುದರಿಂದ ಪಡಿತರ ವಿತರಕರಿಗೆ ಬಹಳಷ್ಟು ತೊಂದರೆ ಯಾಗುತ್ತಿದ್ದು, ಸರಕಾರ ನೇರ ವರ್ಗಾವಣೆ ರದ್ದು ಮಾಡಿ ಅಕ್ಕಿಯ ಬದಲು ಇತರೆ ಆಹಾರ ಪದಾರ್ಥ ವಿತರಿಸುವಂತೆ ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎಂ.ಕೆ.ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಚುನಾವಣೆ ಸಂದರ್ಭದಲ್ಲಿ 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿ ನೀಡಿ ಈಗ ಅಕ್ಕಿಯ ಬದಲು ಹಣ ನೀಡಲು ಮುಂದಾಗಿದೆ. ಇದರಿಂದ ರಾಜ್ಯದ ಸುಮಾರು 20295 ಪಡಿತರ ವಿತರಕರು ಬೀದಿಗೆ ಬೀಳುವ ಸಂಭವವಿದೆ. ಹಾಗಾಗಿ ಹಣದ ಬದಲು ರಾಗಿ, ಜೋಳ, ನವಣೆ, ಸಜ್ಜೆ, ತೊಗರಿಬೇಳೆ, ಉಪ್ಪು ಇನ್ನಿತರ ಪದಾರ್ಥ ನೀಡಬೇಕು. ಇದರಿಂದ ಸರಕಾರಕ್ಕೂ ಹೊರೆಯಾಗುವುದಿಲ್ಲ, ಪಡಿತರ ಚೀಟಿದಾರರಿಗೂ ಅನುಕೂಲವಾಗುತ್ತದೆ ಎಂದರು.

ರಾಜ್ಯದಲ್ಲಿ ಸುಮಾರು 25-30 ವರ್ಷಗಳಿಂದ ಜನರಿಗೆ ಪಡಿತರ ವಿತರಿಸುತ್ತಿರುವ ನ್ಯಾಯಬೆಲೆ ಅಂಗಡಿಯವರಿಗೆ ಸರಕಾರ ಮಳಿಗೆಯ ಬಾಡಿಗೆಯಾಗಲಿ, ಕೆಲಸಗಾರರ ಕೂಲಿಯಾಗಲಿ, ವಿದ್ಯುತ್ ಬಿಲ್ ಆಗಲಿ ಪಾವತಿಸುವುದಿಲ್ಲ, ಒಂದು ಕ್ವಿಂಟಾಲ್ ಗೆ 124 ರೂ. ಕಮಿಷನ್ ಮಾತ್ರ ನೀಡುತ್ತದೆ. ಈ ಹಣದಲ್ಲಿ ನಾವು ಮೇಲಿನ ಎಲ್ಲಾ ಖರ್ಚುಗಳನ್ನು ನಿಭಾಯಿಸಿಕೊಂಡು ಜೀವನ ನಡೆಸುವುದು ಕಷ್ಟವಾಗಿದೆ. ಸರಕಾರ ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಘೋಷಣೆ ಮಾಡಿದಾಗ ಹೆಚ್ಚು ಆಹಾರ ಧಾನ್ಯ ಖರ್ಚಾಗುವುದರಿಂದ ಹೆಚ್ಚಿನ ಕಮಿಷನ್ ಬರುತ್ತದೆ ಎಂಬ ಆಶಯ ನಮ್ಮದಾಗಿತ್ತು. ಆದರೆ ಸರಕಾರ ಏಕಾಏಕಿ ಅಕ್ಕಿ ಕಡಿತಗೊಳಿಸಿದ ಕಾರಣ ನಮ್ಮ ಕಮಿಷನ್ ಗೂ ಖೋತಾ ಬಿದ್ದಿದೆ. ಒಂದು ವೇಳೆ ಸರಕಾರ ಆಹಾರ ಧಾನ್ಯ ದಾಸ್ತಾನು ನೀಡಲು ಸಾಧ್ಯವಿಲ್ಲ ಎಂದಾದರೆ ನಮ್ಮ ಕಮಿಷನ್ ನ್ನು ಒಂದು ಕ್ವಿಂಟಾಲ್ ಗೆ 250 ರೂ. ಗಳಿಗೆ ಹೆಚ್ಚಳ ಮಾಡಲಿ ಎಂಬುದು ಸಂಘದ ಒತ್ತಾಯವಾಗಿದೆ ಎಂದು ಎಂ.ಕೆ.ರಾಮಚಂದ್ರಪ್ಪ ತಿಳಿಸಿದರು.

ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಕೇಂದ್ರ ವಲಯ, ರಾಜ್ಯ ವಲಯ ಎಂಬ ಎರಡು ಪ್ರತ್ಯೇಕ ವಿಭಾಗ ಮಾಡಿದೆ, ಇವುಗಳಲ್ಲಿ ಕೊಂಚ ವ್ಯತ್ಯಾಸ ಕಂಡ ಬಂದರೂ ದುಪ್ಪಟ್ಟು ದಂಡ ವಿಧಿಸಿ, ನ್ಯಾಯಬೆಲೆ ಅಂಗಡಿಯ ಆದಾಯವನ್ನು ದಂಡಕ್ಕೆ ಕಟ್ಟಬೇಕಾದ ಪರಿಸ್ಥಿತಿ ಇದೆ. ಇದು ಈಗಾಗಲೇ ಸಂಕಷ್ಟದಲ್ಲಿರುವ ಪಡಿತರ ಅಂಗಡಿಗಳ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ನವೆಂಬರ್ ನಲ್ಲಿ ಸರಕಾರ ಪಡಿತರ ವಿತರಣೆಯನ್ನು ಐದು ಕೆಜಿಗೆ ಇಳಿಸಿದಾಗಿನಿಂದಲೂ ಸರಕಾರಕ್ಕೆ ವಿವಿಧ ಹಂತದಲ್ಲಿ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಮಾಧ್ಯಮಗಳ ಮೂಲಕ ಮತ್ತೊಮ್ಮೆ ಹೊಸ ಸರಕಾರಕ್ಕೂ ನಮ್ಮ ಮನವಿ ಸಲ್ಲಿಸುತ್ತಿದ್ದೇವೆ.
ಸರಕಾರ ಗಮನ ಹರಿಸಿ ನಮ್ಮಗಳ ಸಮಸ್ಯೆ ಬಗೆಹರಿಸುವುದರ ಜೊತೆಗೆ ಪಡಿತರ ಚೀಟಿದಾರರಿಗೆ ಸ್ಥಳೀಯ ಆಹಾರ ಧಾನ್ಯಗಳನ್ನು ಪಡೆದ ಖುಷಿಯೂ ಇರುತ್ತದೆ. ಹಾಗಾಗಿ ಸರಕಾರ ಶೀಘ್ರ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎಂದು ಹೇಳಿಕೊಂಡು ಕೆಲವರು ಅಧಿಕಾರಿಗಳ ಬಳಿ ಹಣಕ್ಕೆ ಪೀಡಿಸುತ್ತಾ ಸಂಘಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ. ಅಲ್ಲದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕೆಲ ನೌಕರರ ಮೇಲೆ ಸುಳ್ಳು ದೂರು ನೀಡಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಜೊತೆಗೆ ಸಂಘವನ್ನು ರದ್ದು ಪಡಿಸಬೇಕೆಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ವಿಜಯಕುಮಾರ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ಕಾರ್ಯಾಧ್ಯಕ್ಷ ಕೃಷ್ಣಾ ಡಿ.ನಾಯಕ್, ಕೋಶಾಧ್ಯಕ್ಷ ಡಿ.ಜಿ.ಶಿವಾನಂದಪ್ಪ, ರಾಜಶೇಖರ್ ತಳವಾರ, ಕೆ.ಎಸ್.ಪ್ರಕಾಶ್, ಸಂಘಟನಾ ಕಾರ್ಯದರ್ಶಿ ರಾಮಯ್ಯ, ಬಿ.ಪಿ.ಮಾದಪ್ಪ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!