ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಒತ್ತು ನೀಡಿ: ಡೀಸಿ

147

Get real time updates directly on you device, subscribe now.


ತುಮಕೂರು: ರಾಜ್ಯದ ತೋಟಗಾರಿಕಾ ಕ್ಷೇತ್ರಕ್ಕೆ ಎಂ.ಹೆಚ್.ಮರಿಗೌಡರ ಕೊಡುಗೆ ಅಪಾರ, ರಾಜ್ಯದ 19 ಜಿಲ್ಲೆಗಳಲ್ಲಿ 357 ಫಾರಂಗಳನ್ನು ತೆಗೆದು ತೋಟಗಾರಿಕೆಗೆ ಉತ್ತೇಜನ ನೀಡಿದ್ದರು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ತುಮಕೂರು ತಾಲೂಕು ಸಿರಿವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ತೋಟಗಾರಿಕಾ ದಿನಾಚರಣೆ ಹಾಗೂ ತೋಟಗಾರಿಕಾ ಭೀಷ್ಮ ಡಾ.ಎಂ.ಹೆಚ್.ಮರಿಗೌಡ ಜನ್ಮಜಯಂತಿ ಕಾರ್ಯಕ್ರಮಕ್ಕೆ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಕೃಷಿಯ ಜೊತೆಗೆ ತೋಟಗಾರಿಕಾ ಬೆಳೆಗಳ ಮೂಲಕ ಪರಿಸರದ ಜೊತೆಗೆ, ಕೃಷಿ ಇಲಾಖೆಯಿಂದ ತೋಟಗಾರಿಕೆಯನ್ನು ವಿಭಾಗಿಸಿ, ಪ್ರತ್ಯೇಕ ಇಲಾಖೆಯನ್ನಾಗಿಸಿ ತೋಟಗಾರಿಕೆ ಬೆಳೆಗಳ ಬಗ್ಗೆ ಒತ್ತು ನೀಡಿದರು ಎಂದರು.

ಬೆಂಗಳೂರು, ಕೋಲಾರ, ತುಮಕೂರು ಹುಣಸೆ, ಹಲಸು, ಮಾವು ಬೆಳೆಯುವ ಮೂಲಕ ಬಂಜರು ಭೂಮಿಯನ್ನು ತೋಟವಾಗಿ ಪರಿವರ್ತಿಸಿ ರೈತನನ್ನು ಆರ್ಥಿಕವಾಗಿ ಸದೃಢರನ್ನಾಗಿಸಿದರು. ಇದರ ಫಲವಾಗಿ ಸರಕಾರ 1993ನಲ್ಲಿ ಡಾ.ಎಂ.ಹೆಚ್.ಮರಿಗೌಡರಿಗೆ ತೋಟಗಾರಿಕಾ ರತ್ನ ಬಿರುದು ನೀಡಿ ಗೌರವಿಸಿತು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ನಂತರ ಮುಂದೇನು ಎಂಬ ವಿಷಯದ ಕುರಿತು ಶಾಲಾ ಶಿಕ್ಷಕರು ತಿಳಿಸಿಕೊಡುವ ಮೂಲಕ ಅವರು ಗುರಿಗಳನ್ನು ಹಾಕಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಸಲಹೆ ನೀಡಿದರು.

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ನಂತರ ಸಾಕಷ್ಟು ಅವಕಾಶಗಳಿದ್ದು, ಹೈಸ್ಕೂಲ್ ನಲ್ಲಿ ನಿಮ್ಮ ಮುಂದಿನ ಗುರಿಯನ್ನು ನಿಗದಿ ಪಡಿಸಿಕೊಂಡರೆ ಹೆಚ್ಚಿನ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಬಿ.ಸಿ.ಶಾರದಮ್ಮ ಮಾತನಾಡಿ, ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡಿ, ಕೃಷಿಗೆ ಪರ್ಯಾಯವಾಗಿ ತೋಟಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ರೈತರಿಗೆ ಶಾಶ್ವತ ಆದಾಯ ಬರುವಂತೆ ಮಾಡಿದ ತೋಟಗಾರಿಕಾ ಪಿತಾಮಹ ಡಾ.ಎಂ.ಹೆಚ್.ಮರಿಗೌಡರ 107 ಜನ್ಮ ಜಯಂತಿ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಿಗೆ ತೋಟಗಾರಿಕೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಿರಿವರ ಹೈಸ್ಕೂಲ್ ನ ಮಕ್ಕಳಿಗೆ ಚಿತ್ರಸ್ಪರ್ಧೆ, ಪ್ರಬಂಧ, ಆಶು ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ಇಂದು ಆ ಮಕ್ಕಳಿಗೆ ಬಹುಮಾನ ವಿತರಿಸಲಾಗುತ್ತಿದೆ.

ಬಹು ವಾರ್ಷಿಕ ಬೆಳೆಗಳಾದ ಬಾಳೆ, ಹಲಸು, ಸೀಬೆ, ಸಪೋಟ, ತೆಂಗು, ಅಡಿಕೆ, ಮಾವು ಇನ್ನಿತರ ತೋಟಗಾರಿಕಾ ಬೆಳೆಗಳು ಮತ್ತು ಅವರು ಬೀಜೋತ್ಪಾದನಾ ಕೇಂದ್ರಗಳನ್ನು ನಿರ್ಮಿಸುವಲ್ಲಿ ಡಾ.ಎಂ.ಹೆಚ್.ಮರಿಗೌಡರ ಪಾತ್ರ ಮಹತ್ವದ್ದು ಎಂದರು.
ಮಕ್ಕಳು ಮನೆಯಂಗಳದಲ್ಲಿ ತೋಟ ಬೆಳೆಸಲು ಮುಂದಾಗಬೇಕು. ಮನೆಯ ಮುಂದೆ ನಳ ನಳಿಸುವ ಗಿಡಗಳಿದ್ದರೆ ಅವುಗಳ ಹಾರೈಕೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಹಾಗಾಗಿ ಮನೆಯ ಮುಂದಿನ ಖಾಲಿ ಜಾಗದಲ್ಲಿ ಕನಿಷ್ಠ ಎರಡು ತೋಟಗಾರಿಕಾ ಸಸಿಗಳನ್ನು ನೆಟ್ಟು ಪೋಷಿಸುವತ್ತ ಮಕ್ಕಳು ಮುಂದಾಗುವಂತೆ ಡಿಡಿಹೆಚ್ ಬಿ.ಸಿ.ಶಾರದಮ್ಮ ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಮಕ್ಕಳು ರಚಿಸಿದ್ದ ಚಿತ್ರಗಳನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಸುಧಾಕರ್.ಹೆಚ್.ಎ, ಸಹಾಯಕ ತೋಟಗಾರಿಕಾ ನಿರ್ದೇಶಕರಾದ ರೇಖಾ.ಎಂ.ಎನ್, ರಾಘವೇಂದ್ರ, ದರ್ಶನ್, ಆರ್ ಐ ಮಂಜುನಾಥ್, ಕಾಲೇಜಿನ ಪ್ರಾಂಶುಪಾಲ ಕುಮಾರಯ್ಯ, ಉಪ ಪ್ರಾಂಶುಪಾಲ ಚೇತನ್, ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಅಂಜನ್ ಕುಮಾರ್, ಶಿವಕುಮಾರ್, ಸಿರಿವರ ಶಾಲೆಯ ಸಿಬ್ಬಂದಿ ಮತ್ತು ಮಕ್ಕಳು ಉಪಸ್ಥಿತಿರಿದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!