ಕಾರ್ಮಿಕ ದುಡಿಮೆ ಅವಧಿ ಕಡಿಮೆ ಮಾಡಿ

ಕನಿಷ್ಠ ಕೂಲಿ 31500 ರೂ. ಗೆ ಹೆಚ್ಚಿಸಲು ಒತ್ತಾಯಿಸಿ ಹೋರಾಟ

125

Get real time updates directly on you device, subscribe now.


ತುಮಕೂರು: ಕಾರ್ಮಿಕರ ದುಡಿಮೆಯ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಕಡಿತಗೊಳಿಸುವುದು, ಕಾರ್ಮಿಕರ ಕನಿಷ್ಠ ಕೂಲಿ 31500 ರೂ. ಗಳಿಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕ್ವಿಟ್ ಇಂಡಿಯಾ ಚಳವಳಿ ಆರಂಭವಾದ ದಿನವಾದ ಬುಧವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ನಗರದ ಸ್ವಾತಂತ್ರ ಚೌಕದಲ್ಲಿ ಧರಣಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿವತಿಯಿಂದ ಸ್ವಾತಂತ್ರದ ಆಶಯ ಉಳಿಸಲು ಆಗ್ರಹಿಸಿ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ ಸಂಘಟನೆಗಳ ಕಾರ್ಮಿಕರು ಪಾಲ್ಗೊಂಡು ಸರಕಾರದ ನಡೆಗಳ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಸ್ವಾತಂತ್ರ ಬಂದು 77 ವರ್ಷಗಳ ನಂತರವೂ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಕ್ವಿಟ್ ಇಂಡಿಯಾ ಚಳವಳಿ ಮಾದರಿ ಹೋರಾಟವನ್ನು ಬಂಡವಾಳ ಶಾಹಿಗಳ ಪರವಾಗಿರುವ ಸರಕಾರಗಳ ವಿರುದ್ಧ ಮಾಡಬೇಕಾದ ದುಸ್ಥಿತಿ ಒದಗಿಸುವುದು ದುರಾದೃಷ್ಟಕರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕೈಗೊಳ್ಳುತ್ತಿರುವ ಕಾರ್ಪೋರೇಟ್ ಪರ ನೀತಿಗಳಿಂದ ಇಡೀ ದೇಶದಲ್ಲಿ ಹಲವಾರು ಹೋರಾಟಗಳಿಂದ ಕಾರ್ಮಿಕರು ಗಳಿಸಿಕೊಂಡ ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದೆ. ದುಡಿಯುವ ಸಮಯವನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವ ಕೇಂದ್ರ ಸರಕಾರ ಕೂಡಲೆ ಇದನ್ನು ರದ್ದು ಪಡಿಸಿ ಹಿಂದಿನಂತೆ ದುಡಿಮೆಯ ಅವಧಿಯನ್ನು ಎಂಟು ಗಂಟೆಗೆ ನಿಗದಿಗೊಳಿಸಬೇಕೆಂದು ಆಗ್ರಹಿಸಿದರು.

ಕೊರೊನದಂತಹ ಸಂಕಷ್ಟದ ಕಾಲದಲ್ಲಿ ರೈತರು, ಬಡವರು, ಕಾರ್ಮಿಕರು ತಮ್ಮಲ್ಲಿ ಇರುವುದೆಲ್ಲವನ್ನು ಕಳೆದುಕೊಂಡರೆ ಉದ್ದಿಮೆಗಳು ಮಾತ್ರ ಹಿಂದೆಂದಿಗಿಂತಲೂ ಹೆಚ್ಚು ಲಾಭ ಪಡೆದವು, ಕೊರೊನ ಕಾಲದಲ್ಲಿ ಉದ್ದಿಮೆಗೆ ಆದಾಯ ಶೇ.55 ರಷ್ಟು ಹೆಚ್ಚಾಗಿದೆ. ಇದು ಬಡವರು ಮತ್ತು ಬಲಿತರ ನಡುವಿನ ಅಂತರ ಹೆಚ್ಚಿಸಿದೆ. ಇದು ಮುಂದೊಂದು ದಿನ ಸಂಘರ್ಷಕ್ಕೆ ನಾಂದಿ ಹಾಡಲಿದೆ, ಹಾಗಾಗಿ ಸರಕಾರ ಕೂಡಲೇ ಲೇಬರ್ ಕೋಡ್ ರದ್ದು ಪಡಿಸಬೇಕೆಂಬುದು ದೇಶದ ಕಾರ್ಮಿಕರ ಒತ್ತಾಯವಾಗಿದೆ ಎಂದು ತಿಳಿಸಿದರು.

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಅಸಹನೀಯವಾದ ಬೆಲೆ ಏರಿಕೆ ಒಂದೆಡೆಯಾದರೆ ವೇತನ ಹೆಚ್ಚಳವಿಲ್ಲದೆ ನಿರ್ಗತಿಕತನದಿಂದಾಗಿ ಹಸಿವಿನ ಸೂಚ್ಯಂಕ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ, ಕೇಂದ್ರ ಸರಕಾರದ ಅಧೀನದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ, ಸಾರ್ವಜನಿಕ ಉದ್ದಿಮೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾರಾಟ ಮಾಡಲಾ ಗುತ್ತಿದ್ದು, ಅವರು ದೊಡ್ಡ ಸಂಖ್ಯೆಯಲ್ಲಿ ನೌಕರರನ್ನು ವಜಾಗೊಳಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡು ಶಾಸನಬದ್ಧ ಸೌಲಭ್ಯಗಳಾದ ಪಿಎಫ್, ಇಎಸ್ಐ ಮತ್ತು ಕನಿಷ್ಠ ವೇತನ ನೀಡದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 200 ದಿನ ಕೆಲಸ ನೀಡಬೇಕು. ಕನಿಷ್ಠ ಕೂಲಿ ಹೆಚ್ಚಿಸಬೇಕೆಂಬ ಒತ್ತಾಯ ಮಾಡಲಾಗುತ್ತಿದೆ ಎಂದರು.

ಕಾರ್ಮಿಕ ಸಮುದಾಯ ಹಲವಾರು ತ್ಯಾಗ ಬಲಿದಾನ ಹೋರಾಟಗಳಿಂದ ಗಳಿಸಿರುವ ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ ಲೇಬರ್ ಕೋಡ್ ತರಲಾಗಿದೆ. ಇದು ಕಾರ್ಮಿಕ ವರ್ಗಕ್ಕೆ ಮಾರಕವಾಗಿದೆ. ಇದನ್ನು ರದ್ದು ಪಡಿಸಬೇಕೆಂಬುದು ಎಲ್ಲಾ ಕಾರ್ಮಿಕ ಸಂಘಟನೆಗಳ ಆಗ್ರಹವಾಗಿದೆ ಎಂದರು.

ಧರಣಿಯಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಹಾಗೂ ಸಿಪಿಐನ ಟಿ.ಆರ್.ರೇವಣ್ಣ, ಎಐಟಿಯುಸಿ ಉಪಾಧ್ಯಕ್ಷ ಕಂಬೇಗೌಡ, ಕೆಪಿಆರ್ಎಸ್ ನ ಅಜ್ಜಪ್ಪ, ಸಿಐಟಿಯನ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕಾರ್ಮಿಕ ಮುಖಂಡರಾದ ರಮೇಶ್, ಜಾಫರ್, ಕಟ್ಟಡ ಕಾರ್ಮಿಕರಾದ ರಂಗನಾಥ್, ಚಂದ್ರು, ಅನುಸೂಯ, ಗೌರಮ್ಮ, ಗೋವಿಂದರಾಜು, ಬಿ.ಉಮೇಶ್, ಆಶಾ, ಅಂಗನವಾಡಿ, ಬಿಸಿಯೂಟ ನೌಕರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!