ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಶ್ರಮಿಸೋಣ

184

Get real time updates directly on you device, subscribe now.


ಕುಣಿಗಲ್: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಬಲಿದಾನಗೈದ, ಶ್ರಮಪಟ್ಟ ಹಿರಿಯರು ಕಂಡಂತ ಸಧೃಢ, ಸಶಕ್ತ, ಸ್ವಾವಲಂಬಿ, ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಇಂದಿನ ಯುವಜನಾಂಗ ಶ್ರಮಿಸಬೇಕೆಂದು ಶಾಸಕ ಡಾ.ರಂಗನಾಥ್ ಹೇಳಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಿಟೀಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಲು ಹಲವು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವವನ್ನೆ ಬಲಿ ನೀಡಿದ್ದರೆ ಇನ್ನು ಕೆಲವರು ಕಠಿಣ ಶಿಕ್ಷೆ ಅನುಭವಿಸಿ ಮಾಡು ಇಲ್ಲವೆ ಮಡಿ ಎಂಬ ನಿರ್ಧಾರ ಕೈಗೊಂಡು ಹೋರಾಟ ಮಾಡಿದ್ದಾರೆ. ಅವರ ಕನಸು ಭಾರತವು ಜಗತ್ತಿಗೆ ಮಾದರಿ ರಾಷ್ಟ್ರ ಆಗಬೇಕೆಂಬುದಾಗಿದೆ. ಇಂದಿನ ಯುವ ವಿದ್ಯಾರ್ಥಿಗಳು ತಂದೆ ತಾಯಿಯರ ಶ್ರಮ, ಗುರು ಹಿರಿಯರ ಮಾರ್ಗದರ್ಶನದಲ್ಲಿ ಕನಸು ನನಸಾಗಿಲು ಶ್ರಮವಹಿಸಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದರು.

ಧ್ವಜಾರೋಹಣ ನೆರವೇರಿಸಿ, ಗೌರವವಂದನೆ ಸ್ವೀಕರಿಸಿದ ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ, ಜಗತ್ತಿನಲ್ಲೆ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗುವ ನಿಟ್ಟಿನಲ್ಲಿ ಭಾರತ ಮುನ್ನುಗ್ಗುತ್ತಿದೆ. ದೇಶದ ಎಲ್ಲಾ ಜನತೆಯೂ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹಾಗೂ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆಗಾಗಿ ಹರ್ ಘರ್ ತಿರಂಗ ಸೇರಿದಂತೆ ಗ್ರಾಮಗಳ ಮಟ್ದದಲ್ಲೂ ರಾಷ್ಟ್ರಪ್ರೇಮ ವೃದ್ದಿಸುವ ಕಾರ್ಯಕ್ರಮ ರೂಪಿಸಿದ್ದು ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶಾಭಿಮಾನ ಮೆರೆಯಬೇಕು ಎಂದರು.

ಸಾಮಾಜಿಕ ಚಿಂತಕ ವಿವೇಕಾನಂದ ಮಾತನಾಡಿ, ದೇಶವು ಮುನ್ನಡೆಯಲು ಎಲ್ಲಾ ಜನತೆ ಕೆಟ್ಟ ಚಿಂತನೆಗಳನ್ನು ತಿರಸ್ಕರಿಸಿ, ಒಳ್ಳೆ ಚಿಂತನೆಗಳನ್ನು ಪುರಸ್ಕರಿಸಿ, ಮಾನವೀಯ ಮೌಲ್ಯಗಳನ್ನು ವೃದ್ಧಿಸುವಂತೆ ಮನೋಭಾವ ಹೊಂದಿದಾಗ ದೇಶವೂ ಸಧೃಢವಾಗಿ ರೂಪುಗೊಳ್ಳುತ್ತದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಪ್ರದರ್ಶನ, ಟ್ಯಾಬ್ಲೂ ಆಯೋಜಿಸಲಾಗಿತ್ತು. ಡಿವೈಎಸ್ಪಿ ಲಕ್ಷ್ಮೀಕಾಂತ, ಸಿಪಿಐ ನವೀನ್ಗೌಡ, ತಾಪಂ ಇಒ ಜೋಸೆಫ್, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಬಿಇಒ ಬೋರೇಗೌಡ, ಕಸಾಪ ಅಧ್ಯಕ್ಷ ಡಾ.ರಮೇಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪುರಸಭೆ ಸದಸ್ಯರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!