ಸರ್ಕಾರಿ ಶಾಲೆ ಜಾಗ ಖಾಸಗಿಯವರಿಗೆ ಖಾತೆ

ಖಾತೆ ರದ್ದುಗೊಳಿಸಲು ವಿದ್ಯಾರ್ಥಿಗಳು, ಪೋಷಕರ ಆಗ್ರಹ

898

Get real time updates directly on you device, subscribe now.


ತುಮಕೂರು: ನಗರದ ಅಂತರಸನಹಳ್ಳಿ ಗ್ರಾಮದ ಸರಕಾರಿ ಶಾಲೆಗೆಂದು ಮೀಸಲಿರಿಸ್ದಿದ್ದ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿದ್ದು, ಸದರಿ ಖಾತೆ ರದ್ದುಗೊಳಿಸಿ ಲೋಕಾಯುಕ್ತ ನ್ಯಾಯಾಲಯದ ತೀರ್ಪಿನಂತೆ ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಆಗ್ರಹಿಸಿ ಅಂತರಸನಹಳ್ಳಿ ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳು, ಪೋಷಕರು ನಗರಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಅಂತರಸನ ಹಳ್ಳಿಯ ಗ್ರಾಮದ ಲಕ್ಷ್ಮಿ ನರಸಿಂಹ ಬಡಾವಣೆಯಲ್ಲಿ ಪಿಐಡಿ ನಂ.61291, 80*45 ಮತ್ತು ಪಿಐಡಿ ನಂ.70962ರಲ್ಲಿ 45*125 ಎರಡು ಸ್ವತ್ತುಗಳು ಮಿರ್ಜಾ ಇಸ್ಮಾಯಿಲ್ ಎಂಬುವವರಿಗೆ ಪರಭಾರೆಯಾಗಿರುತ್ತದೆ, ಆದರೆ ಸದರಿ ವ್ಯಕ್ತಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಶಾಲೆ ಮತ್ತು ದೇವಾಲಯಕ್ಕೆಂದು ಮೀಸಲಿರಿಸಿದ್ದ ಸುಮಾರು 1.09 ಗುಂಟೆ ಜಾಗವನ್ನು ಅಕ್ರಮವಾಗಿ ತಮಗೆ ಸೇರಿದ್ದು ಎಂದು ಕಾಂಪೌಂಡ್ ಗೋಡೆ ನಿರ್ಮಿಸಿಕೊಂಡಿದ್ದು, ಈ ಬಗ್ಗೆ 2005 ರಿಂದ 2013ರ ವರೆಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಕೇಸು ನಡೆದು, 04-06-2013 ರಂದು ನ್ಯಾಯಾಲಯ ಸದರಿ ವ್ಯಕ್ತಿಗೂ, ಗ್ರಾಮ ಠಾಣಾ ಜಾಗಕ್ಕೂ ಸಂಬಂಧಿವಿಲ್ಲ, ಹಾಗಾಗಿ ಖಾತೆ ರದ್ದುಗೊಳಿಸುವಂತೆ ಆದೇಶ ನೀಡಿದ್ದು, ಈ ಆದೇಶದಂತೆ 2019ರ ಸೆಪ್ಟಂಬರ್ 11 ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಸದರಿ ಖಾತೆ ವಜಾ ಮಾಡಿ, ಶಾಲೆ ಮತ್ತು ದೇವಾಲಯದ ಹೆಸರಿಗೆ ಖಾತೆ ಮಾಡುವಂತೆ ಒಮ್ಮತದ ತೀರ್ಮಾನವಾಗಿದ್ದರೂ ಇದುವರೆಗೂ ಖಾತೆ ಮಾಡಿಲ್ಲ ಎಂದು ದೂರಿದರು.

ಅಂತರಸನಹಳ್ಳಿ ಸರಕಾರಿ ಹೆಚ್ ಪಿಎಸ್ ಶಾಲೆಯಲ್ಲಿ ಸುಮಾರು 260ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದು, ಜಾಗದ ಕೊರತೆಯಿಂದ ಮಕ್ಕಳು ಕಾರಿಡಾರ್ ನಲ್ಲಿ ಕುಳಿತ ಪಾಠ, ಪ್ರವಚನ ಕೇಳಬೇಕಾದ ಸ್ಥಿತಿ ಇದೆ, ಶಾಲೆಗೆ ಅಗತ್ಯವಾದ ಕೊಠಡಿ ನಿರ್ಮಾಣ ಮಾಡಲು ಮುಂದಾದಾಗ, ಜಾಗದ ಬಗ್ಗೆ ತಕರಾರು ಎತ್ತುತಿದ್ದು, ಮಿರ್ಜಾ ಇಸ್ಮಾಯಿಲ್ ಅವರ ಜಾಗದ ಚೆಕ್ ಬಂಧಿಗೂ, ಶಾಲೆ ಮತ್ತು ದೇವಾಲಯಕ್ಕೆಂದು ಮೀಸಲಿರಿಸಿದ ಜಾಗದ ಚೆಕ್ ಬಂಧಿಗೂ ತಾಳೆಯಾಗುತ್ತಿಲ್ಲ, ಅಲ್ಲದೆ ಖಾಸಗಿ ಲೇಔಟ್ ನ ಜಾಗವನ್ನು ಗ್ರಾಮ ಠಾಣಾ ಜಾಗದಲ್ಲಿ ಕ್ಲೈಮ್ ಮಾಡಲು ಮುಂದಾಗಿರುವುದು ಅಕ್ರಮವಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಸದರಿ ವಿಚಾರವಾಗಿ ಈ ಹಿಂದೆ ಪಾಲಿಕೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಭೂ ಬಾಲನ್ ಅವರು ಕಂದಾಯ ಇಲಾಖೆ ಮತ್ತು ಪಾಲಿಕೆಯ ಜಂಟಿ ಸರ್ವೆ ನಡೆಸಿ ಸದರಿ ಜಾಗದಲ್ಲಿ ಮಿರ್ಜಾ ಇಸ್ಮಾಯಿಲ್ ಅವರು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು 2020ರ ಜೂನ್ 16 ರಂದು ಪಾಲಿಕೆಯ ವಾಹನಗಳನ್ನು ಬಳಸಿ ನೆಲಸಮ ಮಾಡಿ ಸದರಿ ಖಾತೆಯನ್ನು ಬ್ಲಾಕ್ ಲೀಸ್ಟ್ ಗೆ ಹಾಕಿದ್ದರು, ಆದರೆ ಇಂದಿಗೂ ಸಹ ಮ್ಯಾನ್ಯುಯಲ್ ಖಾತೆ ಬ್ಲಾಕ್ ಲೀಸ್ಟ್ ನಲ್ಲಿದ್ದರೆ, ಆನ್ ಲೈನ್ ನಲ್ಲಿ ಖಾತೆ ಓಪನ್ ಆಗಿದೆ, ಹಾಗಾಗಿ ಸದರಿ ಖಾತೆ ರದ್ದು ಮಾಡಿ ಶಾಲೆಗೆ ಅಗತ್ಯವಿರುವ 65*76 ಜಾಗವನ್ನು ಶಾಲೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರು.

ಲೋಕಾಯುಕ್ತ ನ್ಯಾಯಾಲಯ ಮತ್ತು ನಗರ ಪಾಲಿಕೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಜಂಟಿ ಸರ್ವೆ ನಡೆಸಿ, ಮಿರ್ಜಾ ಇಸ್ಮಾಯಿಲ್ ಅವರು ಪಿಐಡಿ ನಂಬರ್ ಮತ್ತು ಖಾತೆಗಳಿಗೂ, ಶಾಲೆ ಮತ್ತು ದೇವಾಲಯಕ್ಕೆಂದು ಮೀಸಲಿರಿಸಿದ್ದ ಜಾಗಕ್ಕೂ ತಾಳೆಯಾಗುತ್ತಿಲ್ಲ ಎಂಬ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರ ವರದಿ ನಂತರ ಖಾತೆ ರದ್ದು ಮಾಡುವ ಆದೇಶವಿದ್ದರೂ ಇದುವರೆಗೂ ಅಕ್ರಮವಾಗಿ ಖಾತೆ ಮುಂದುವರೆಸಿಕೊಂಡು ಬರಲಾಗುತ್ತಿದೆ, ಸರಕಾರದಿಂದ ಶಾಲೆ ನಿರ್ಮಾಣಕ್ಕೆ ಹಣ ಮಂಜೂರಾದರೂ ಭೂ ವ್ಯಾಜ್ಯದಿಂದ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಜಿಲ್ಲಾಡಳಿತ, ಪಾಲಿಕೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಜಿಲ್ಲಾಡಳಿತ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ತುಮಕೂರು ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವ ವೇಳೆ ಅಂತರಸರನ ಹಳ್ಳಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ಪೋಷಕರಾದ ಪ್ರಸನ್ನಕುಮಾರ್.ಟಿ.ಜಿ, ಸಿದ್ದೇಶ್ ಪ್ರಸಾದ್, ಗಿರೀಶ್, ಮಂಜುನಾಥ್.ಪಿ, ಮಂಜೇಶ್, ವಿನಯ್ ಕುಮಾರ್, ಹನುಮಂತರಾಜು, ಶಿವಕುಮಾರ್, ಯಲ್ಲಪ್ಪ, ಲಿಂಗರಾಜು, ನಿವೃತ್ತ ಯೋಧರಾದ ದೊಡ್ಡರಾಮಯ್ಯ, ರಾಜಣ್ಣ, ಶಿವರಾಜು, ಲಿಂಗರಾಜು, ವೆಂಕಟೇಶಾಚಾರ್ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!