ಮಳೆ ಹಾನಿ ಮನೆಗಳನ್ನು ಶೀಘ್ರ ನಿರ್ಮಿಸಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಸೂಚನೆ

199

Get real time updates directly on you device, subscribe now.


ತುಮಕೂರು: ಮಳೆಯಿಂದ ಹಾನಿಗೀಡಾದ ಮನೆಗಳು ಸೇರಿದಂತೆ ಬಾಕಿ ಇರುವ ಮನೆ ನಿರ್ಮಾಣ ಪ್ರಗತಿಯಲ್ಲಿ ಶೇ.100 ರಷ್ಟು ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ವೀಡಿಯೋ ಕಾನ್ಪೆರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸರ್ಕಾರದ ಯೋಜನೆಗಳಡಿ ಖಾಲಿ ನಿವೇಶನಗಳಲ್ಲಿ ಬಾಕಿ ಇರುವ ಗೃಹ ನಿರ್ಮಾಣ ಪ್ರಗತಿ ಪರಿಶೀಲನೆ ಮಾಡಿ ಖಾಲಿ ನಿವೇಶನಗಳಲ್ಲಿ ಗೃಹ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು, ಈಗಾಗಲೇ ಜಿಲ್ಲೆಯಲ್ಲಿ ಇ-ಆಫೀಸ್ ಸಮರ್ಪಕವಾಗಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕಚೇರಿಗಳು ಕಡತಗಳನ್ನು ಇ- ಕಚೇರಿ ಮೂಲಕವೇ ಕಡ್ಡಾಯವಾಗಿ ಸಲ್ಲಿಸಬೇಕು, ಇ-ಆಫೀಸ್ ಜಾರಿಯಿಂದ ಶೇ.35 ಕ್ಕಿಂತ ಹೆಚ್ಚು ಮಾನವ ದೈಹಿಕ ಶ್ರಮಗಳು ಕಡಿಮೆಯಾಗಿ, ಕಡತಗಳು ಶೀಘ್ರ ಮತ್ತು ಪಾರದರ್ಶಕವಾಗಿ ವಿಲೇವಾರಿಯಾಗುತ್ತವೆ, ಇ-ಆಫೀಸ್ ಅನುಷ್ಠಾನ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರಬೇಕು ಎಂದರು.

ಮತದಾನ ಕೇಂದ್ರಗಳ ಮೂಲಭೂತ ಸೌಕರ್ಯ ಹಾಗೂ ಅಗತ್ಯತೆ ಕುರಿತು ಬಾಕಿ ಇರುವ ಪರಿಶೀಲನೆ ವರದಿಯನ್ನು ಈ ವಾರದಲ್ಲಿ ಕಳಿಸಬೇಕು, ಜಿಲ್ಲೆಯಲ್ಲಿ ದೇವಾಲಯ, ಪೂಜಾ ಮಂದಿರಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ನವ ನಿರ್ಮಾಣಗಳ ಯೋಜನೆಗೆ ಸಂಬಂಧಿಸಿದ ಆರಾಧನಾ ಯೋಜನೆಯ ಪ್ರಗತಿ ಪಡೆದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಬಾಕಿ ಇರುವ ಕೆರೆ ಹಾಗೂ ದೇವಸ್ಥಾನಗಳ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು, ಈ ಸಂಬಂಧ ಬಾಕಿ ಇರುವ ಪಟ್ಟಿಯನ್ನು ಭೂ ಮಾಪನ ಅಧಿಕಾರಿಗಳಿಗೆ ಸಲ್ಲಿಸುವಂತೆ ತಹಸೀಲ್ದಾರ್ ಗಳಿಗೆ ಸೂಚಿಸಿದರು.

ವಿಕಲಚೇತನರು, ವಿಧವೆಯರು, ವೃದ್ಧರಿಗೆ ಸಂಬಂಧಿಸಿದ ಪಿಂಚಣಿ ಸಮಸ್ಯೆ ಬಗೆಹರಿಸಿ, ನೀಡಲಾಗುತ್ತಿರುವ ಪಿಂಚಣಿ ಸರಿಯಾಗಿ ಸೇರುತ್ತಿರುವ ಬಗ್ಗೆ ಪರಿಶೀಲಿಸಬೇಕು, ವಸತಿ ಯೋಜನೆಯಡಿ ತಳಪಾಯ, ಗೋಡೆ, ಚಾವಣಿ ಗೃಹ ನಿರ್ಮಾಣದ ವಿವಿಧ ಹಂತಗಳಲ್ಲಿ ಬಾಕಿ ಇರುವ ಜಿಪಿಎಸ್ ನ್ನು ಅಧಿಕಾರಿಗಳು ತ್ವರಿತವಾಗಿ ಪೂರ್ಣಗೊಳಿಸಬೇಕು, ಜಿಲ್ಲೆಯಲ್ಲಿ ಭೂ ವಿವಾದ ಸಂಬಂಧಿತ ಪ್ರಕರಣ ಹಾಗೂ ಬಾಕಿ ಉಳಿದಿರುವ ಪಹಣಿಯಲ್ಲಿನ ಕಾಲಂ 3 ಮತ್ತು ಕಾಲಂ 9 ತಾಳೆ ಆಗುತ್ತವೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಖಚಿತ ಪಡಿಕೊಳ್ಳುವುದು, 94ಸಿ ಹಾಗೂ 94ಸಿಸಿ ಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಬಾಕಿ ಇರಿಸದೆ, ಶೀಘ್ರ ವಿಲೇವಾರಿ ಮಾಡಬೇಕು, ಈ ವಾರಾಂತ್ಯಕ್ಕೆ ಬಾಕಿ ಇರುವ ಎಲ್ಲಾ ಪ್ರಕರಣ ಇತ್ಯರ್ಥಗೊಳಿಸುವಂತೆ ಸೂಚಿಸಿದರು.

ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು, ಸಾರ್ವಜನಿಕ ಆಸ್ತಿ ಹಾನಿಯಾದಲ್ಲಿ ಕೂಡಲೇ ವರದಿ ನೀಡಿ ಸಂತ್ರಸ್ತರಿಗೆ ಮಾರ್ಗಸೂಚಿಯ ಅನುಸಾರ ಪರಿಹಾರ ವಿತರಿಸಲು ಕ್ರಮ ವಹಿಸಬೇಕು ಎಲ್ಲಾ ಇಲಾಖೆಗಳು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಭೂ ದಾಖೆಲೆಗಳ ಉಪ ನಿರ್ದೇಶಕರು ಮಾತಾನಾಡಿ, ಜಿಲ್ಲೆಯ ಎಲ್ಲಾ ಗೊಲ್ಲರಹಟ್ಟಿಗಳನ್ನು ಕಂದಾಯ ಅಥವಾ ಉಪ ಗ್ರಾಮ ಘೋಷಣೆ ಮಾಡುವ ಬಗ್ಗೆ ಬಾಕಿ ಇರುವ ವರದಿಯನ್ನು ಸಮಗ್ರ ಮಾಹಿತಿಯೊಂದಿಗೆ ನಿಯಮಾನುಸಾರ ತ್ವರಿತವಾಗಿ ಸಲ್ಲಿಸಬೇಕು ಎಂದರು.

ಉಪ ವಿಭಾಗಾಧಿಕಾರಿ ರಿಷಿ ಆನಂದ್, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ, ಕೃಷಿ ಇಲಾಖೆಯ ಉಪ ನಿರ್ದೇಶಕ ಅಶೋಕ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್ ಕುಮಾರ್, ತಹಶೀಲ್ದಾರ್ ಕಮಲಮ್ಮ, ಮುಜರಾಯಿ ಇಲಾಖೆಯ ತಹಶೀಲ್ದಾರ್ ಹೆಚ್.ಸವಿತಾ, ಶಿರಸ್ತೇದಾರ್ ನರಸಿಂಹರಾಜು, ಚುನಾವಣೆ ವಿಭಾಗದ ರಾಮ್ ಯಾದವ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!