ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿ

465

Get real time updates directly on you device, subscribe now.


ತುಮಕೂರು: ಸದಾ ಒತ್ತಡದಲ್ಲಿ ಕೆಲಸ ಮಾಡುವ ಶಿಕ್ಷಕ ಬಂಧುಗಳಿಗೆ, ಕೆಲಸದ ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿಯಾಗಲಿದೆ ಎಂದು ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸೂರ್ಯಕಲಾ ತಿಳಿಸಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಉಪ ಪ್ರಾಂಶುಪಾಲರ ಸಂಘವತಿಯಿಂದ ಸೆಪ್ಟಂಬರ್ 5ರ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಲು, ಗೆಲುವು ಎರಡನ್ನು ಸಮಾನವಾಗಿ ಸ್ಪೀಕರಿಸಲು ಕ್ರೀಡೆ ಸಹಕಾರಿಯಾಗಲಿದೆ, ಹಾಗಾಗಿ ಶಿಕ್ಷಕರು ತಮ್ಮ ಬಿಡುವಿನ ಸಮಯದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಾವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮಕ್ಕಳಲ್ಲಿಯೂ ಕ್ರೀಡಾ ಮನೋಭಾವನೆ ಬೆಳೆಸುವಂತೆ ಸಲಹೆ ನೀಡಿದರು.

ನಾನು ಸಹ ಸ್ವತಃ ಕ್ರೀಡಾಪಟು, ಇದೇ ಕ್ರೀಡಾಂಗಣದಲ್ಲಿ 11 ವರ್ಷದವಳಿದ್ದಾಗ, ಅಥ್ಲೇಟಿಕ್ ನಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದೆ ಅನೇಕ ದೈಹಿಕ ಶಿಕ್ಷಕರು, ಕೋಚ್ ಗಳು ನನಗೆ ಅಂದು ಸಹಕಾರ ನೀಡಿದ್ದರು, ಇಂದು ಅವರೆಲ್ಲರನ್ನು ನೆನಪು ಮಾಡಿಕೊಳ್ಳುತ್ತೇನೆ, ಅಭ್ಯಾಸವಿಲ್ಲದೆ ಕ್ರೀಡೆಯಲ್ಲಿ ಸ್ಪರ್ಧಿಸಲು ಬಂದಿರುವ ಶಿಕ್ಷಕರು ಎಚ್ಚರಿಕೆಯಿಂದ ಆಟವಾಡಿ ನಿರಂತರ ಅಭ್ಯಾಸದಲ್ಲಿ ತೊಡಗಿದ್ದರೆ ಸಮಸ್ಯೆಯಾಗದು, ಸಾವಿನ ಕೊನೆಯವರೆಗೆ ಲವಲವಿಕೆಯಿಂದ ಬದುಕುಬೇಕೆಂದರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಹಾಗೂ ಕ್ರೀಡಾಸ್ಪೂರ್ತಿ ಬೆಳೆಸಿಕೊಳ್ಳಿ ಎಂದು ಬಿಇಓ ಡಾ.ಸೂರ್ಯಕಲಾ ಶುಭ ಹಾರೈಸಿದರು.

ಕ್ರೀಡಾಕೂಟ ಉದ್ಘಾಟಿಸಿದ ಶಿಕ್ಷಣಾಧಿಕಾರಿ ವಿ.ಮಾಧವರೆಡ್ಡಿ ಮಾತನಾಡಿ, ಇಂತಹ ಕ್ರೀಡಾಕೂಟಗಳು ನಮಗೆ ಬಾಲ್ಯ ನೆನಪಿಸುತ್ತವೆ, ಕೇವಲ ಸ್ಪರ್ಧೆಗಳು ಇದ್ದ ಸಂದರ್ಭದಲ್ಲಿ ಅಭ್ಯಾಸ ಮಾಡುವುದಕ್ಕೆ ಬದಲಾಗಿ ನಿರಂತರವಾಗಿ ಕ್ರೀಡಾ ಚಟುವಟಿಕೆ ಯಲ್ಲಿ ತೊಡಗುವುದರಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಬಹುದು, ಮೆಡಿಕಲ್ ಶಾಪ್ ಗಳಲ್ಲಿ ಸಿಗದ ಯಾವುದಾದರು ಔಷಧಿ ಎಂದರೆ ಅದು ನಗು, ನಗು ನಗುತಾ ಎಲ್ಲವನ್ನು ಸ್ಪೀಕರಿಸುವ ಕ್ರೀಡಾ ಮನೋಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಂಡರೆ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದರು.

ಕಾಂಗ್ರೆಸ್ ಯುವ ಮುಖಂಡ ಶಶಿ ಹುಲಿಕುಂಟೆ ಮಠ್ ಮಾತನಾಡಿ, ಶಿಕ್ಷಕರಿಗೆ ಕ್ರೀಡಾ ಚಟುವಟಿಕೆ ಎಂಬುದು ಒಂದು ಅದ್ಬುತ ವೇದಿಕೆ, ಇತ್ತೀಚೆಗೆ ಸರಕಾರದ ಮುಂದೆ ಮಕ್ಕಳಿಗೆ ದೈಹಿಕ ಚುಟವಟಿಕೆಯ ಜೊತೆಗೆ, ಶಿಕ್ಷಕರಿಗೆ ಕ್ರೀಡಾ ಚಟುವಟೆಕೆಗೆ ಒತ್ತು ನೀಡುವಂತೆ ಶಿಕ್ಷಕರ ಸಂಘದ ಮನವಿ ಮಾಡಿರುವುದನ್ನು ನಾವು ಕಾಣಬಹುದು, ಆದರೆ ಅಂಕಗಳ ಗಳಿಕೆ ಒತ್ತಡದಲ್ಲಿ ಮಕ್ಕಳು ಕ್ರೀಡೆಯ ಕಡೆಗೆ ಗಮನಹರಿಸುವುದೇ ಕಡಿಮೆಯಾಗಿದೆ, ಇದರಿಂದ ದೈಹಿಕವಾಗಿ ಕುಗ್ಗುವ ಸಾಧ್ಯತೆ ಹೆಚ್ಚು, ದೈಹಿಕ ಸಮತೋಲನಕ್ಕೆ ಕ್ರೀಡೆ ಅತ್ಯಗತ್ಯ ಎಂದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಹನುಮೇಶ್ ಮಾತನಾಡಿ, ಸದಾ ಬೋಧನ, ಪಾಠೋಪಕರಣ, ಮೌಲ್ಯಮಾಪನ ದಂತಹ ಒತ್ತಡದ ಕೆಲಸಗಳಲ್ಲಿ ತೊಡಗುವ ಶಿಕ್ಷಕರಿಗೆ ಕ್ರೀಡಾಕೂಟ ಬಹಳ ಉಪಯುಕ್ತ ವಾಗಲಿದೆ, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸಿದರೆ ಹೆಚ್ಚು ಅನುಕೂಲವಾಗಲಿದೆ ಎಂದರು.

ತುಮಕೂರು ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನಿರ್ದೇಶಕ ಶ್ರೀಕಾಂತ್ ಛಲವಾದಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ಹೆಚ್.ಲೋಕೇಶ್ ರೆಡ್ಡಿ, ಡಿವೈಪಿಸಿ ರಂಗಧಾಮಪ್ಪ, ಜಿಲ್ಲಾ ಮುಖ್ಯೋಪಾಧ್ಯಾಯರ ಮತ್ತು ಉಪ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಕೆ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಆರ್.ಹನುಮೇಶ್, ಕಾರ್ಯದರ್ಶಿ ಮಂಜುನಾಥ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಸುರೇಶ್ ಮಾತನಾಡಿದರು.

ಪುರುಷ ಶಿಕ್ಷಕರಿಗೆ 100ಮೀ, 200 ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಮಹಿಳಾ ಶಿಕ್ಷಕಿಯರಿಗೆ 100, 200 ಮೀಟರ್ ಓಟ, ಗುಂಡು ಎಸೆತ, ಚಕ್ರ ಎಸೆತ, ಮ್ಯೂಸಿಕಲ್ ಚೇರ್, ಗುಂಪು ಆಟಗಳಲ್ಲಿ ಪುರುಷರಿಗೆ ವಾಲಿಬಾಲ್, ಕಬ್ಬಡಿ, ಷಟಲ್ ಕಾಕ್, ಮಹಿಳೆಯರಿಗೆ ಥ್ರೋ ಬಾಲ್, ಕಬ್ಬಡಿ, ಷಟಲ್ ಕಾಕ್, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾವಗೀತೆ, ಜನಪದ ಗೀತೆ, ಭಕ್ತಿ ಗೀತೆ ಸ್ಪರ್ಧೆ ಏರ್ಪಡಿಸಲಾಗಿತ್ತು, ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!