ಗುಬ್ಬಿ: ರಾಜ್ಯದಲ್ಲಿ ಆದಾಯ ಬರುವಂತಹ ಜಾಗದಲ್ಲಿ ಸೋರಿಕೆ ಕಡಿಮೆ ಮಾಡಿದಾಗ ಇಂತಹ 10 ಹಲವು ಯೋಜನೆ ಮಾಡಬಹುದು ಎಂಬುದನ್ನು ನಮ್ಮ ಮುಖ್ಯಮಂತ್ರಿಗಳು ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಎಸ್ವಿಎಸ್ ಕಲ್ಯಾಣ ಮಂಟಪ ಹಾಗೂ ಎಂಎಂ ಪ್ಯಾಲೇಸ್ನಲ್ಲಿ ಆಯೋಜನೆ ಮಾಡಿದ್ದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚುನಾವಣೆಗೂ ಮುಂಚೆ ವಿರೋಧ ಪಕ್ಷದವರು ಇದೆಲ್ಲ ಚುನಾವಣೆ ಗಿಮಿಕ್ ಎಂದು ಹೇಳಿದ್ದರು, ಆದರೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ನಾವು ಆಶ್ವಾಸನೆ ನೀಡಿದಂತೆ ಐದು ಯೋಜನೆಯಲ್ಲಿ ನಾಲ್ಕು ಯೋಜನೆ ಪರಿಪೂರ್ಣ ಮಾಡಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಆರ್ಥಿಕ ತಜ್ಞರಾಗಿರುವುದರಿಂದ ಉತ್ತಮ ಆಡಳಿತವನ್ನು ರಾಜ್ಯದಲ್ಲಿ ನೀಡುತ್ತಾರೆ, ಬಿಜೆಪಿ ಸರಕಾರ ಶ್ರೀಮಂತರ ಪರವಾಗಿ ಇದುವರೆಗೂ ಕೆಲಸ ಮಾಡಿದೆ, ಆದರೆ ಕಾಂಗ್ರೆಸ್ ಸರಕಾರ ಬಡವರ ಪರವಿದ್ದು ನಾವು ಮಾಡಿರುವಂತಹ ಪ್ರತಿಯೊಂದು ಯೋಜನೆಯು ಬಡವರಿಗೆ, ಹಿಂದುಳಿದವರಿಗೆ ಶ್ರೀರಕ್ಷೆಯಾಗಿದೆ,
ಬಹುತೇಕ ಡಿಸೆಂಬರ್ ತಿಂಗಳಲ್ಲಿ ಮತ್ತೊಂದು ಯೋಜನೆ ಜಾರಿಗೆ ತಂದು ಕಲ್ಯಾಣ ರಾಜ್ಯ ಮಾಡುತ್ತೇವೆ, ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇಡೀ ರಾಜ್ಯವೆಲ್ಲಾ ಸುತ್ತಾಡಿದರು, ಅವರ ಮುಖ ನೋಡಿದರು ಸಹ ಜನರು ಮತ ಹಾಕಲಿಲ್ಲ, ಇಡೀ ರಾಜ್ಯದಲ್ಲಿ ಬಿಜೆಪಿ ಧೂಳಿಪಟವಾಗಿದ್ದು ಮುಂದಿನ ಚುನಾವಣೆಯಲ್ಲಿಯೂ ಯಾವುದೇ ಕಾರಣಕ್ಕೂ ಗೆಲ್ಲಲು ಸಾಧ್ಯವಿಲ್ಲ, ಸೋತ ನಂತರ ಕೇಂದ್ರ ಸರ್ಕಾರ ಸಬ್ಸಿಡಿ ಗ್ಯಾಸ್ ನೀಡಲು ಮುಂದಾಗಿದೆ, ಇವರೇ ಹಣ ದುಪ್ಪಟ್ಟು ಮಾಡಿ ಈಗ ಕಡಿತ ಮಾಡುತ್ತೇವೆ ಎನ್ನುತ್ತಾರೆ, ಬಡವರ ಪರವಾಗಿ ಬಿಜೆಪಿ ಸರ್ಕಾರ ಇದ್ದಿದ್ದರೆ ಈ ರೀತಿಯ ಸೋಲನ್ನು ಅವರು ಕಾಣುತ್ತಿರಲಿಲ್ಲ ಎಂದು ಟೀಕಿಸಿದರು.
ಮುಂದಿನ ದಿನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ಸಾಕಷ್ಟು ಜನ ಕಾರ್ಪೊರೇಟರ್, ಪಟ್ಟಣ ಪಂಚಾಯತಿ ಸದಸ್ಯರು, ಹಲವು ಮುಖಂಡ ಕಾಂಗ್ರೆಸ್ ಸೇರುವುದು ನಿಶ್ಚಿತ ಎಂದು ತಿಳಿಸಿದರು.
ನಾನು ಯಾವುದೇ ಸಚಿವ ಆಕಾಂಕ್ಷಿಯಲ್ಲ, ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ವಿರೋಧ ಪಕ್ಷದಲ್ಲೇ ಇರುವುದರಿಂದ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕಾಗಿರುವುದರಿಂದ ಹೆಚ್ಚಿನ ಅನುದಾನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಆರತಿ, ಇಓ ಪರಮೇಶ್ ಕುಮಾರ್, ಪಟ್ಟಣ ಪಂಚಾಯಿತಿ ಅಧಿಕಾರಿ ಮಂಜುಳಾ ದೇವಿ ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು, ಪಟ್ಟಣ ಪಂಚಾಯಿತಿಯ ಸದಸ್ಯರು, ಸಾವಿರಾರು ಮಹಿಳೆಯರು ಹಾಜರಿದ್ದರು.
Comments are closed.