ತುಮಕೂರಿನಲ್ಲಿ ರೈತ ಸಂಘದಿಂದ ಪ್ರತಿಭಟನೆ

ತಮಿಳುನಾಡಿಗೆ ನೀರು ಹರಿಸೋದು ನಿಲ್ಲಿಸಿ- ಕೊಬ್ಬರಿಗೆ ಬೆಂಬಲೆ ಬೆಲೆ ನೀಡಿ

146

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿ ಬರಗಾಲದ ಸ್ಥಿತಿ ಇದ್ದರೂ ಅವೈಜ್ಞಾನಿಕವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರಕಾರದ ಕ್ರಮ ವಿರೋಧಿಸಿ ಕೊಬ್ಬರಿಗೆ ಕನಿಷ್ಠ 20 ಸಾವಿರ ರೂ. ಬೆಂಬಲ ಘೋಷಣೆಗೆ ಒತ್ತಾಯಿಸಿ, ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಧರಣಿನಿರತ ರೈತ ಸಂಘದ ಮುಖಂಡರನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದ ರಾಜು ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಕಬಿನಿ, ಕಾವೇರಿ, ಹಾರಂಗಿ, ಹೇಮಾವತಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಪೂರ್ವ ಮುಂಗಾರು, ಮುಂಗಾರು ಮಳೆ ಕೈಕೊಟ್ಟು ಶೇ.98 ರಷ್ಟು ಬೆಳೆ ನಷ್ಟವಾಗಿದೆ, ಅಲ್ಲದೆ ಭವಿಷ್ಯದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗುವ ಸಾದ್ಯತೆ ಇದೆ ಎಂದು ಸರಕಾರದ ವರದಿಗಳೇ ಹೇಳುತ್ತಿದ್ದರೂ ಸರಕಾರ ಕಾವೇರಿ ನೀರಾವರಿ ನಿರ್ವಹಣಾ ಸಮಿತಿಯ ಆದೇಶಕ್ಕೆ ಮನ್ನಣೆ ನೀಡಿ ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಾಮರಾಜನಗರ, ತುಮಕೂರು ಜಿಲ್ಲೆಯ ರೈತರ ವಿರೋಧದ ನಡುವೆಯೂ ದಿನಕ್ಕೆ 5 ಸಾವಿರ ಕೂಸೆಕ್ಸ್ ನೀರು ತಮಿಳುನಾಡಿಗೆ ಬಿಡುಗಡೆ ಮಾಡುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ, ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕೆಂಬುದು ರೈತರ ಆಗ್ರಹವಾಗಿದೆ ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ಎಷ್ಟು ನೀರು ಹರಿಸಬೇಕು ಎಂಬ ನಿಗದಿತ ನೀತಿ ರೂಪಿಸದಿದ್ದರೂ ಪ್ರಾಧಿಕಾರ ಹೇಳಿದೆ ಎಂದ ಮಾತ್ರಕ್ಕೆ ನೀರು ಹರಿಸುತ್ತಿರುವುದು ಸರಿಯಲ್ಲ, ಕೂಡಲೇ ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಕುಡಿಯುವ ನೀರಿಗೆ ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ರಾಜ್ಯ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ರೈತರ ಒತ್ತಾಯವಾಗಿದೆ ಎಂದು ಗೋವಿಂದರಾಜು ನುಡಿದರು.

ರಾಜ್ಯದಲ್ಲಿ ಈ ವರ್ಷ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ 136 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದ್ದು, ಶೇ.60 ರಷ್ಟು ಬೆಳೆ ನಷ್ಟವಾಗಿದೆ, ಸರಕಾರ ಈಗಾಗಲೇ ಬೆಳೆ ವೈಫಲ್ಯ ಸಮೀಕ್ಷೆ ಆರಂಭಿಸಿದೆ, ಹಾಗಾಗಿ ಸರಕಾರ ಕೂಡಲೇ ರಾಜ್ಯವನ್ನು ಬರಪೀಡಿತ ರಾಜ್ಯ ಎಂದು ಘೋಷಿಸುವುದರ ಜೊತೆಗೆ ತುಮಕೂರು ಜಿಲ್ಲೆಯ 10 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು, ಹಾಗೆಯೇ ಬೆಳೆ ಪರಿಹಾರ, ಗೋಶಾಲೆ ತೆರೆಯುವುದು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕೆಂದು ರೈತರ ಆಗ್ರಹವಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ, ದಿನದಲ್ಲಿ ಸುಮಾರು 7 ಗಂಟೆ ವಿದ್ಯುತ್ ಕಡಿತ ಮಾಡುತ್ತಿದ್ದು, ಉಚಿತ ವಿದ್ಯುತ್ ಹೆಸರಿನಲ್ಲಿ ಜನರಿಗೆ ಅದರಲ್ಲಿಯೂ ರೈತರಿಗೆ ಕನಿಷ್ಠ 8 ಗಂಟೆಗಳ ಕಾಲ ಗುಣಮಟ್ಟದ ತ್ರೀ ಪೇಸ್ ವಿದ್ಯುತ್ ನೀಡಬೇಕೆಂಬುದು ರೈತರ ಬೇಡಿಕೆಯಾಗಿದೆ, ಯಾರು ಸರಕಾರದ ಮುಂದೆ ನಮ್ಮ ಮನೆಗೆ ಉಚಿತ ವಿದ್ಯುತ್ ನೀಡಿ ಎಂದು ಅರ್ಜಿ ಸಲ್ಲಿಸಿರಲಿಲ್ಲ, ಆದರೆ ಸರಕಾರ ಜನರ ಮತ ಪಡೆಯಲು ಭರವಸೆ ನೀಡಿ ಎಡಗೈಯಲ್ಲಿ ಕೊಟ್ಟು ಬಲಗೈಯಲ್ಲಿ ಕಿತ್ತುಕೊಳ್ಳುತ್ತಿದೆ, ಈಗಾಗಲೇ ಮಳೆಯಿಂದ ಬೆಳೆ ಕಳೆದುಕೊಂಡಿರುವ ರೈತರು ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಮತ್ತಷ್ಟು ಸಂಕಷ್ಟ ಎದುರಿಸುತಿದ್ದಾರೆ, ಹಾಗಾಗಿ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಿದರೆ ರೈತರು ಬದುಕುತ್ತಾರೆ ಎಂದರು.

ತುಮಕೂರು ಜಿಲ್ಲೆಯ ಸುಮಾರು 2.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ, ಕಳೆದ ವರ್ಷ 19 ಸಾವಿರ ಕ್ವಿಂಟಾಲ್ ಇದ್ದ ಕೊಬ್ಬರಿ ಇಂದು 8500 ರೂ.ಗೆ ಇಳಿದಿದೆ, ಸರಕಾರವೇ ನೀಡಿದ ವರದಿಯ ಪ್ರಕಾರ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು 16730 ರೂ ಖರ್ಚಾಗುತ್ತದೆ ಎಂದಿದ್ದರೂ ರೈತರಿಗೆ ನಿಗದಿತ ಬೆಲೆ ದೊರೆಯುತ್ತಿಲ್ಲ, ಡಾ.ಸ್ವಾಮಿನಾಥನ್ ವರದಿ ಅನ್ವಯ ಉತ್ಪಾದನಾ ವೆಚ್ಚ 50 ಸೇರಿದರೆ ಕನಿಷ್ಟ 25 ಸಾವಿರ ನೀಡಬೇಕಾಗುತ್ತದೆ, ಕೇಂದ್ರ ಸರಕಾರ ಕೂಡಲೇ ವಿದೇಶಗಳಿಂದ ಕಡಿಮೆ ತೆರಿಗೆಯಲ್ಲಿ ಆಮದಾಗುತ್ತಿರುವ ತೆಂಗಿನ ಉತ್ಪನ್ನಗಳನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿ ಅಕ್ಟೋಬರ್ 02 ರಿಂದ ತಿಪಟೂರಿನಿಂದ ಬೆಂಗಳೂರು ವರೆಗೆ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಎ.ಗೋವಿಂದರಾಜು ತಿಳಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರಪ್ಪ, ಯುವ ಅಧ್ಯಕ್ಷ ಚಿರತೆ ಚಿಕ್ಕಣ್ಣ, ಕಾರ್ಯದರ್ಶಿ ಜಗದೀಶ್, ಜಿಲ್ಲಾ ಮುಖಂಡರಾದ ಶಿವಕುಮಾರ್, ಕೆ.ಲೋಕೇಶ್, ಚಿಕ್ಕಬೋರೇಗೌಡ, ಪೂಜಾರಪ್ಪ, ಡಿ.ಆರ್.ರಾಜಶೇಖರ್, ಭಾಗ್ಯಮ್ಮ ರಂಗಹನುಮಯ್ಯ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!