ಜಿಲ್ಲಾ ಕೇಂದ್ರಕ್ಕೆ ಶಿರಾ ಸೂಕ್ತ: ರಾಜೇಶ್ ಗೌಡ

965

Get real time updates directly on you device, subscribe now.


ಶಿರಾ: ತುಮಕೂರು ಜಿಲ್ಲೆಯನ್ನು ವಿಭಜನೆ ಮಾಡಿ ಎರಡು ಜಿಲ್ಲೆ ಮಾಡಿದರೆ ಜಿಲ್ಲಾ ಕೇಂದ್ರಕ್ಕೆ ಅತ್ಯಂತ ಸೂಕ್ತವಾದ ಸ್ಥಳ ಶಿರಾ ನಗರವಾಗಿದೆ, ತುಮಕೂರಿನ ನಂತರ ಶಿರಾ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರಿಂದ ಶಿರಾ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನವಿ ಮಾಡಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ಬಿಟ್ಟರೆ ಶಿರಾ ಹಾಗೂ ತಿಪಟೂರಿನಲ್ಲಿ ಮಾತ್ರ ನಗರಸಭೆ ಇದ್ದು, ತುಮಕೂರಿನಲ್ಲಿಯೇ ಶಿರಾ ಎರಡನೇ ಅತಿ ದೊಡ್ಡ ತಾಲೂಕಾಗಿದೆ, ಜನಸಂಖ್ಯೆಯಲ್ಲೂ ಹೆಚ್ಚಿದೆ, ಜಿಲ್ಲಾ ಕೇಂದ್ರಕ್ಕೆ ಬೇಕಾದ ಅಗತ್ಯ ಸಂಪರ್ಕ ವ್ಯವಸ್ಥೆ ಇದೆ, ಶಿರಾ ತಾಲೂಕಿನ ಮೂಲಕ ರಾ.ಹೆ.48, ರಾ.ಹೆ. 234 ಹಾಗೂ ಆಂಧ್ರಪ್ರದೇಶದ ಅಮರಾವತಿಯಿಂದ ಶಿರಾವರೆಗೂ ರಸ್ತೆ ಸಂಪರ್ಕದ ಕಾಮಗಾರಿ ನಡೆಯುತ್ತಿದೆ, ಶಿರಾ ತಾಲೂಕಿನಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಿಸಲು ಯೋಜಿಸಲಾಗಿದೆ, ಹಾಗೂ ತುಮಕೂರು- ದಾವಣಗೆರೆ ರೈಲ್ವೆ ಮಾರ್ಗದ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ.

ಈಗಿರುವ ಕೈಗಾರಿಕಾ ವಲಯ ಬಿಟ್ಟು ತಾಲೂಕಿನ ಸೀಬಿ ಬಳಿಯೂ ಕೈಗಾರಿಕೆಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ, ನೀರಾವರಿ ಯೋಜನೆಗಳಲ್ಲಿ ಹೇಮಾವತಿ ನೀರು ಈಗಾಗಲೇ ಹರಿಯುತ್ತಿದೆ, ಅಪ್ಪರ್ ಭದ್ರ ಕಾಮಗಾರಿ ಶೇ.90 ರಷ್ಟು ಕಾಮಗಾರಿ ಮುಗಿದಿದೆ, ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಯಿಂದಲೂ ನೀರು ಸಿಗಲಿದೆ, ಹಾಗಾಗಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ, ಈಗಾಗಲೇ ಜಿಲ್ಲಾ ಕಚೇರಿಗೆ ಬೇಕಾದ ಮಿನಿ ವಿಧಾನಸೌಧವನ್ನು ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ, ಇದರ ಜೊತೆಗೆ ಶಿರಾ ಸುತ್ತಮುತ್ತ ಸಾವಿರಾರು ಎಕರೆ ಸರಕಾರಿ ಭೂಮಿ ಇದೆ, ಮಧುಗಿರಿ, ಪಾವಗಡ, ಚಿಕ್ಕನಾಯಕನ ಹಳ್ಳಿ ತಾಲೂಕುಗಳಿಗೆ ಕೇಂದ್ರ ಸ್ಥಾನದಲ್ಲಿರುವ ಶಿರಾ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ, ಆದ್ದರಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈಗಾಗಲೇ ಎಲ್ಲಾ ಮೂಲಭೂತ ಸೌಕರ್ಯ ಹೊಂದಿರುವ ಶಿರಾ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!