ತುಮಕೂರು: ಅಂಬೇಡ್ಕರ್ ಅವರ ಬದುಕು, ಆದರ್ಶ, ಚಿಂತನೆ, ಬರಹ ಮತ್ತು ಭಾಷಣಗಳು ನಮಗೆ ಆತ್ಮಸ್ಥೈರ್ಯ, ಸ್ವಾಭಿಮಾನ ಬೆಳೆಸುತ್ತವೆ ಎಂದು ಹಿರಿಯ ರಂಗಭೂಮಿ ಕಲಾವಿದ ಡಾ.ಲಕ್ಷ್ಮಣದಾಸ್ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣ ಹಾಗೂ ಸಂವಿಧಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಅವರ ತತ್ವಗಳಾಗಿದ್ದವು, ಅಂಬೇಡ್ಕರ್ ಅವರು ದೇಶದ ಏಳ್ಗೆಗಾಗಿ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲು ರಾತ್ರಿ ಹೋರಾಡಿದರು, ಅಂಬೇಡ್ಕರ್ ಅವರ ತ್ಯಾಗ, ಸಾಧನೆ, ತತ್ವಗಳನ್ನು ಅಳವಡಿಸಿಕೊಂಡು ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಬಸವರಾಜ.ಜಿ. ಮಾತನಾಡಿ, ಅಂಬೇಡ್ಕರ್ ಅವರು ಅಸಮಾನತೆ, ಜಾತಿ, ಆರ್ಥಿಕ ಚಿಂತನೆ, ಸಂವಿಧಾನ, ಸಾಮಾಜಿಕ ನ್ಯಾಯದ ಬಗ್ಗೆ ಚಿಂತನೆ ನಡೆಸುತಿದ್ದರು, ಜಾತಿ ದೇವರ ಸೃಷ್ಟಿಯಲ್ಲ, ಅದು ಮನುಷ್ಯನ ಸೃಷ್ಟಿ, ವಿಶ್ವ ವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಶೋಷಣೆ ಬಗ್ಗೆ ಸಂಶೋಧನೆ ಮಾಡಬೇಕು, ಸಮಾಜದಲ್ಲಿ ನಡೆಯುವ ಶೋಷಣೆ ಬಗ್ಗೆ ಮಾನವೀಯ ನೆಲೆಯಲ್ಲಿ ಚಿಂತನೆ ಮಾಡಬೇಕು, ದ್ವೇಷದ ಬದಲು ಪ್ರೀತಿಯನ್ನು ಜನರಲ್ಲಿ ಬಿತ್ತಬೇಕು ಎಂದರು.
ತುಮಕೂರು ವಿವಿ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮುನಿರಾಜು.ಎಂ. ಮಾತನಾಡಿ, ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ ಅವರ ಬರಹಗಳನ್ನು ಮತ್ತು ಭಾಷಣಗಳನ್ನು ಓದಿ ತಿಳಿದುಕೊಳ್ಳಬೇಕು, ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರದ ಬೆಳವಣಿಗೆ ತಿಳಿಯಲು ಅಂಬೇಡ್ಕರ್ ಅವರ ಬರಹಗಳು ಸ್ಫೂರ್ತಿದಾಯಕವಾಗಿರುತ್ತವೆ ಎಂದರು.
ತುಮಕೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಚಿಕ್ಕಣ್ಣ ಭಾಗವಹಿಸಿದ್ದರು.
Comments are closed.