ಸಾಹಿತ್ಯ, ಕಾವ್ಯಗಳ ಅಧ್ಯಯನ ಅಗತ್ಯ

427

Get real time updates directly on you device, subscribe now.


ತುಮಕೂರು: ನಮ್ಮ ಕನ್ನಡ ಭಾಷೆಯ ಸಾಹಿತ್ಯ, ಕಾವ್ಯಗಳನ್ನು ಜಗತ್ತಿನ ಇತರೆ ಭಾಷೆಗಳೊಂದಿಗೆ ತೌಲನಿಕ ಅಧ್ಯಯನಕ್ಕೆ ಒಳಪಡಿಸಿದಾಗ ಮಾತ್ರ ಹಲವಾರು ವಿಷಯಗಳಲ್ಲಿ ಸಾಮ್ಯತೆ ಕಾಣಲು ಸಾಧ್ಯ ಎಂದು ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಡಾ.ಡಿ. ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರವು ಸೋಮವಾರ ಆಯೋಜಿಸಿದ್ದ ಹಂಪನಾ ವಿರಚಿತ ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ ಕುರಿತ ಅನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಯ, ಕರ್ನಾಟಕದ ಹಿರಿಮೆ, ಗರಿಮೆ, ಪರಂಪರೆ, ಪ್ರಸ್ತುತತೆಯನ್ನು ವಿಶ್ವದೆಲ್ಲಡೆ ಪರಿಚಯಿಸುವ ಅವಕಾಶ ಒದಗಿದ್ದು ನನ್ನ ಪುಣ್ಯ, ಅದುವೇ ಕನ್ನಡ ಭಾಷೆಗಿರುವ ಶಕ್ತಿ, ಪರಂಪರೆ, ಶಾಸ್ತ್ರೀಯ ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಲು, ಅರ್ಥೈಸಲು ಆಂಗ್ಲ ಭಾಷೆಯಲ್ಲಿ ಕನ್ನಡ ಸಾಹಿತ್ಯ ರಚಿಸಿದೆ, ಭಾಷೆಗಳು ಕಲಿಸುವ ಅನುಭವವನ್ನು ಯಾವ ವಿವಿಗಳೂ ಕಲಿಸುವುದಿಲ್ಲ ಎಂದು ತಿಳಿಸಿದರು.

ವಿದೇಶ ವಿವಿಗಳ ಗ್ರಂಥಾಲಯಗಳಲ್ಲಿ ನಮ್ಮ ಕನ್ನಡ ಭಾಷಾ ಸಾಹಿತ್ಯದ ಸಂಗ್ರಹ ಕಾಣದಿದ್ದಾಗ ನಿರ್ಧರಿಸಿ ಕನ್ನಡ ಭಾಷಾ ಸಾಹಿತ್ಯದ ಗಡಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವ ಮಹತ್ವಾಕಾಂಕ್ಷೆಯಿಂದ ಐದು ಸಂಪುಟಗಳ ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ ಕೃತಿ ಆಂಗ್ಲ ಭಾಷೆಯಲ್ಲಿ ರಚಿಸಿದೆ, ನಮ್ಮ ಮಣ್ಣಿನ ಸಾಹಿತಿಗಳು, ಕವಿಗಳು ರಚಿಸಿರುವ ಸಾಹಿತ್ಯ, ಮಹಾ ಕಾವ್ಯಗಳು ಪ್ರಪಂಚದ ಮೂಲೆ ಮೂಲೆಯಲ್ಲೂ ತಲುಪಬೇಕೆಂಬ ಕನಸಿದೆ ಎಂದರು.

ನಮ್ಮ ನಾಡಿನ ಕವಿಗಳಾದ ರನ್ನ, ವ್ಯಾಸ, ಪಂಪ, ಕುಮಾರವ್ಯಾಸ ಇವರು ರಚಿಸಿದ ಮಹಾ ಕಾವ್ಯಗಳಲ್ಲಿ ಸೃಜನಶೀಲತೆ ಅಪಾರ, ಇವರ ಕಾವ್ಯಗಳನ್ನು ಹೋಮರ್, ವರ್ಗಿಲ್, ಡಾಂಟೇ, ಫೆರ್ದೌಸಿ ಅವರಂತಹಸ ಮಹಾನ್ ಕವಿಗಳ ಕೃತಿಗಳೊಂದಿಗೆ, ಕಾವ್ಯಗಳೊಂದಿಗೆ ತೌಲನಿಕ ಅಧ್ಯಯನಕ್ಕೆ ಒಳಪಡಿಸಿದಾಗ ಮಾತ್ರವೇ ಸಾಮ್ಯತೆ ಕಾಣಬಹುದು ಎಂದು ತಿಳಿಸಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಹಂ.ಪ. ನಾಗರಾಜಯ್ಯ ಅವರು ಕನ್ನಡ ಭಾಷೆಯ ಸೊಗಸನ್ನು, ಕನ್ನಡ ಸಾಹಿತ್ಯದ ಸೊಬಗನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಕಾರ್ಯ ಶಾಘ್ಲನೀಯ, ಯಾವುದೇ ಸಾಹಿತ್ಯವಾಗಲಿ, ಕಾವ್ಯವಾಗಲಿ ವಸ್ತು, ವಿಷಯದ ನಿರೂಪಣೆ ಮುಖ್ಯ, ಸಂಪೂರ್ಣ ವಿಷಯದ ಗಂಧವನ್ನು ಅರಿತು ರಚಿಸಿದ ಸಾಹಿತ್ಯ ಎಂದಿಗೂ ಪ್ರಸ್ತುತ, ಹಂಪನಾ ಅವರ ಸಾಹಿತ್ಯ ಕೃಷಿ ದಕ್ಷಿಣ ಭಾರತದ ಹಲವು ಪ್ರಮುಖ ಭಾಷೆಗಳಲ್ಲಿ ಮೇಳೈಸಿವೆ ಎಂದರು.

ಹಂಪಿ ವಿವಿ ಕುಲಪತಿ ಪ್ರೊ.ಪರಮಶಿವ ಮೂರ್ತಿ ಮಾತನಾಡಿ, ಹಂಪನಾ ಅವರ ಚಿಂತನೆಯ ಎಳೆಗಳನ್ನು ಅವರ ಪಾಠದಲ್ಲಿ ಕಾಣುತ್ತಿದ್ದೆವು, ವಿಶ್ವಮಟ್ಟಕ್ಕೆ ನಮ್ಮ ಭಾಷೆ, ಸಾಹಿತ್ಯವನ್ನು ಎತ್ತರಿಸುವ ಅವರ ಕಾರ್ಯ ಎಂದಿಗೂ ಸ್ಮರಿಸುವಂಥದ್ದು, ವಿಶ್ವವನ್ನು ಕನ್ನಡ ಸಾಹಿತ್ಯದ ಕಡೆಗೆ ಸೆಳೆಯುವ ಕೃತಿ ರಚಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಹಂಪನಾ ವಿರಚಿತ ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ 5 ಸಂಪುಟಗಳ ಕುರಿತು ನಿವೃತ್ತ ಪ್ರಾಧ್ಯಾಪಕ ಪ್ರೊ.ಬಸವರಾಜ ಕಲ್ಗುಡಿ, ಡಾ.ಪದ್ಮಪ್ರಸಾದ್.ಎಸ್.ಪಿ, ಪ್ರಾಧ್ಯಾಪಕ ಡಾ.ನಾಗೇಂದ್ರ ಕುಮಾರ್, ಮಹೇಂದ್ರ.ಎಂ, ಸಂಶೋಧಕ ಡಾ.ಚಲಪತಿ ಮಾತನಾಡಿದರು.

ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ವಿವಿಯ ಡಾ.ಡಿ. ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!