ತಬಸುಮ್ ಜಹೇರಾಗೆ ಶಿಕ್ಷೆ

101

Get real time updates directly on you device, subscribe now.


ತುಮಕೂರು: ಈ ಹಿಂದೆ ತುಮಕೂರು ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡಿದ್ದ ತಬಸುಮ್ ಜಹೇರಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯಾಗಿದೆ, ಇವರ ಜೊತೆಗೆ ಉಪ ತಹಸೀಲ್ದಾರ್ ಶಬೀರ್ ಅಹಮದ್ಗೂ ನಾಲ್ಕು ವರ್ಷ ಜೈಲು ಶಿಕ್ಷೆ ಪ್ರಕಟಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಏನಿದು ಪ್ರಕರಣ?: ಲಂಚ ಪ್ರಕರಣವೊಂದರಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ 2017ರ ಅವಧಿಯಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ತಬಸುಮ್ ಜಹೇರಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಸದ್ಯ ತಬಸುಮ್ ಜಹೇರಾ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿಯಾಗಿದ್ದು, ಶಬೀರ್ ಅಹಮ್ಮದ್ ತುಮಕೂರು ತಾಲ್ಲೂಕು ಬೆಳ್ಳಾವಿ ನಾಡಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?: ತಮ್ಮ ತಂದೆಯ ಜಮೀನನ್ನು ಕೆಲವರು ಅಕ್ರಮವಾಗಿ ಮಾರಾಟ ಮಾಡಿದ್ದು, ಅದನ್ನು ಪುನಃ ತಮ್ಮ ತಂದೆಯ ಹೆಸರಿಗೆ ಮಾಡಿಕೊಡುವಂತೆ ಕೋರಿ ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ಅವರೆಗೆರೆ ಗ್ರಾಮ ನಿವಾಸಿ ವಿ.ಟಿ.ಜಯರಾಮ್ ಎಂಬುವವರು ತುಮಕೂರು ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದರು, ಸದರಿ ಅರ್ಜಿ ವಿಲೇವಾರಿ ಮಾಡಲು ನೌಕರ ಶಬೀರ್ ಅಹಮ್ಮದ್ ಮೂಲಕ 35 ಸಾವಿರ ರೂ. ಲಂಚಕ್ಕೆ ಉಪ ವಿಭಾಗಾಧಿಕಾರಿ ತಬಸುಮ್ ಜಹೇರಾ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಅದರಂತೆ ಅರ್ಜಿದಾರರು ಶಬ್ಬಿರ್ ಅಹಮ್ಮದ್ಗೆ 15 ಸಾವಿರ ಹಾಗೂ ತಬಸುಮ್ ಜಹೇರಾಗೆ 20 ಸಾವಿರ ರೂ. ಲಂಚ ನೀಡಿದ್ದರು, ಹಣ ಕೊಟ್ಟು ಬಹಳ ದಿನಗಳು ಕಳೆದರೂ ಕೆಲಸವಾಗಿರಲಿಲ್ಲ, ಬಳಿಕವೂ ಜಯರಾಮ್ರನ್ನು ಹಲವಾರು ಬಾರಿ ಕಚೇರಿಗೆ ಅಲೆದಾಡಿಸಿದ್ದ ತಬಸುಮ್ ಜಹೇರಾ ಹಾಗೂ ಶಬೀರ್ ಅಹಮ್ಮದ್, ಪುನಃ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಇದರಿಂದ ರೋಸಿಹೋದ ಜಯರಾಮ್ ಈ ಬಗ್ಗೆ ದೂರವಾಣಿ ಕರೆಗಳನ್ನು ರೆಕಾರ್ಡ್ ಮಾಡಿಕೊಂಡು 2017ರ ಮೇ 23 ರಂದು ಅಂದಿನ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇಗೌಡ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಬಸುಮ್ ಜಹೇರಾ ಹಾಗೂ ಶಬ್ಬಿರ್ ಅಹಮ್ಮದ್ಗೆ ತಲಾ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ, ಲೋಕಾಯುಕ್ತರ ಪರವಾಗಿ ಆರ್.ಪಿ.ಪ್ರಕಾಶ್ ವಾದ ಮಂಡಿಸಿದ್ದರು.

Get real time updates directly on you device, subscribe now.

Comments are closed.

error: Content is protected !!