ಸೆ.30ಕ್ಕೆ ಗಣಪತಿ ವಿಸರ್ಜನಾ ಮಹೋತ್ಸವ

123

Get real time updates directly on you device, subscribe now.


ತುಮಕೂರು: ನಗರದ ಟೌನ್ಹಾಲ್ ವೃತ್ತದಲ್ಲಿರುವ ನಾಗರಕಟ್ಟೆ ದೇವಾಲಯದಲ್ಲಿ ಸ್ಥಾಪಿಸಿರುವ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವ ಸೆಪ್ಟಂಬರ್ 30 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಹಿಂದೂ ಮಹಾ ಗಣಪತಿ ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವ ಹಿಂದೂ ಪರಿಷದ್ ಬಜರಂಗದಳ ತುಮಕೂರು ಇವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ 6ನೇ ವರ್ಷದ ಹಿಂದೂ ಮಹಾ ಗಣಪತಿಯ ಅದ್ದೂರಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಬೃಹತ್ ಮೆರವಣಿಗೆ ಮತ್ತು ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆಯ ಜೊತೆಗೆ ಬಜರಂಗದಳ ಆರಂಭವಾಗಿ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಿಂದ ಆರಂಭವಾಗಿರುವ ಶೌರ್ಯ ಜಾಗರಣಾ ರಥಯಾತ್ರೆ ಸಹ ಮೆರವಣಿಗೆಯೊಂದಿಗೆ ಸಾಗಲಿದೆ, ನಗರದ ಬಿ.ಜಿ.ಎಸ್. ವೃತ್ತದಿಂದ ಆರಂಭಗೊಂಡು ಲಕ್ಕಪ್ಪ ವೃತ್ತದಿಂದ ಮಾರ್ಕೆಟ್ ಮಾರ್ಗವಾಗಿ ಮಂಡಿಪೇಟೆ, ಸ್ವತಂತ್ರ್ಯ ಚೌಕ, ಅಶೋಕ ರಸ್ತೆ, ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಜೈನ್ ಟೆಂಪಲ್ ರಸ್ತೆ, ರಾಮಪ್ಪ ವೃತ್ತ ಅಂಬೇಡ್ಕರ್ ರಸ್ತೆ, ಕೋಟೆ ಆಂಜನೇಯ ಸ್ವಾಮಿ ವೃತ್ತ, ಗಾರ್ಡನ್ ರಸ್ತೆ ಮಾರ್ಗವಾಗಿ ಚಿಕ್ಕಪೇಟೆ ಕಲ್ಯಾಣಿಯಲ್ಲಿ ವಿಸರ್ಜಿಸಲಾಗುವುದು.
ಈ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳಾದ ನಂದಿ ಧ್ವಜ, ವೀರಗಾಸೆ, ಡಂಕವಾದ್ಯ, ಪುಣೇರಿ ಡೋಲ್ ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸಲಿವೆ, ಪ್ರಮುಖ ವೃತ್ತಗಳಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಟಿ.ಬಿ.ಶೇಖರ್ ಮನವಿ ಮಾಡಿದರು.

ಹಿಂದೂ ಮಹಾ ಗಣಪತಿ ಸ್ವಾಗತ ಸಮಿತಿ ಕಾರ್ಯದರ್ಶಿ ಜಿ.ಕೆ.ಶ್ರೀನಿವಾಸ್ ಮಾತನಾಡಿ, ಈ ಬಾರಿಯ ಹಿಂದೂ ಗಣಪತಿ ವಿಸರ್ಜನಾ ಮಹೋತ್ಸವದ ಪ್ರಮುಖ ಆಕರ್ಷಣೆ ಎಂದರೆ ಬಜರಂಗದಳದ ಶೌರ್ಯ ಜಾಗರಣ ರಥಯಾತ್ರೆ, ಈ ಶೌರ್ಯ ಜಾಗರಣ ರಥಯಾತ್ರೆ ಹಿಂದೂ ಧರ್ಮವ ವೈಭವಯುತ ಚರಿತ್ರೆಯನ್ನು ಇಡೀ ಸಮಾಜಕ್ಕೆ ತಿಳಿಸುತ್ತಾ ಹಿಂದೂ ಸಮಾಜದ ಮೇಲಾಗುತ್ತಿರುವ ದಾಳಿ ತಿಳಿಸುವ ಉದ್ದೇಶದಿಂದ ಹಾಗೂ ಗೋವು, ದೇವಸ್ಥಾನಗಳ ರಕ್ಷಣೆ, ಹಿಂದೂಗಳಲ್ಲಿ ಸಾಮರಸ್ಯತೆ, ಯುವ ಪೀಳಿಗೆಯಲ್ಲಿ ರಾಷ್ಟ್ರಭಕ್ತಿ, ಧರ್ಮ ನಿಷ್ಠೆ ಮೂಡಿಸುವುದು, ಲವ್ ಜಿಹಾದ್, ಮತಾಂತರ, ಗೋ ಹತ್ಯೆ ತಡೆಯುವುದು, ನಾವೆಲ್ಲ ಹಿಂದೂ ನಾವಲ್ಲ ಒಂದು ಎಂಬ ಭಾವನೆ ಮೂಡಿಸುವ ಉದ್ದೇಶದಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾಗಣಪತಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಸಿ.ವಿ.ಮಹದೇವಯ್ಯ, ಕೋರಿ ಮಂಜುನಾಥ್, ಸಹ ಕಾರ್ಯದರ್ಶಿ ನರಸಿಂಹಮೂರ್ತಿ, ಆರ್.ಎಲ್.ರಮೇಶಬಾಬು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!